Rituraj Singh: ಹೃದಯಾಘಾತದಿಂದ ಖ್ಯಾತ ನಟ ರಿತುರಾಜ್​ ಸಿಂಗ್ ನಿಧನ; ಕಂಬನಿ ಮಿಡಿದ ಬಾಲಿವುಡ್​

ಅನೇಕ ಸೀರಿಯಲ್​ ಮತ್ತು ಸಿನಿಮಾಗಳಲ್ಲಿ ನಟಿಸಿದ್ದ ರಿತುರಾಜ್​ ಸಿಂಗ್ ಅವರು ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ಶಾಕ್​ ಆಗಿದೆ. ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದ ಅವರ ಅಗಲಿಕೆಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ.

Rituraj Singh: ಹೃದಯಾಘಾತದಿಂದ ಖ್ಯಾತ ನಟ ರಿತುರಾಜ್​ ಸಿಂಗ್ ನಿಧನ; ಕಂಬನಿ ಮಿಡಿದ ಬಾಲಿವುಡ್​
ರಿತುರಾಜ್​ ಸಿಂಗ್​

Updated on: Feb 20, 2024 | 3:23 PM

ಹಿಂದಿ ಕಿರುತೆರೆ ಮತ್ತು ಬಾಲಿವುಡ್​ನಲ್ಲಿ ಖ್ಯಾತಿ ಪಡೆದಿದ್ದ ಹಿರಿಯ ನಟ ರಿತುರಾಜ್​ ಸಿಂಗ್ (Rituraj Singh) ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬುದು ತಿಳಿದುಬಂದಿದೆ. ರಿತುರಾಜ್​ ಸಿಂಗ್ ಅವರ ನಿಧನದ (Rituraj Singh Death) ಸುದ್ದಿಯನ್ನು ಅವರ ಆಪ್ತರು ಖಚಿತಪಡಿಸಿದ್ದಾರೆ. ‘ಅನುಪಮಾ’, ‘ಕುಲವಧು’, ‘ಕುಟುಂಬ್​’, ‘ಸಿಐಡಿ’, ‘ಅದಾಲತ್​’ ಮುಂತಾದ ಸೀರಿಯಲ್​ಗಳಲ್ಲಿ ರಿತುರಾಜ್ ಸಿಂಗ್​ ಅಭಿನಯಿಸಿದ್ದರು. ಅವರ ನಿಧನಕ್ಕೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ರಿತುರಾಜ್ ಸಿಂಗ್​ ಅವರಿಗೆ 59 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ.

ಮುಂಬೈನ ತಮ್ಮ ನಿವಾಸದಲ್ಲೇ ರಿತುರಾಜ್ ಸಿಂಗ್​ ಅವರಿಗೆ ಹೃದಯಾಘಾತ ಆಗಿದೆ. ‘ಅನಾರೋಗ್ಯದ ಕಾರಣದಿಂದ ಕೆಲವೇ ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗುಣಮುಖರಾದ ಬಳಿಕ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಮನೆಯಲ್ಲೇ ಅವರಿಗೆ ಮಧ್ಯರಾತ್ರಿ 12.30ಕ್ಕೆ ಹೃದಯಾಘಾತ ಆಯಿತು’ ಎಂದು ಅವರ ಆಪ್ತರಾದ ಅಮಿತ್​ ಬೆಹ್ಲ್​ ಅವರು ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಖ್ಯಾತ ಕಿರುತೆರೆ ಕಲಾವಿದೆಗೆ ಹೃದಯಾಘಾತ; ನಟಿ, ನಿರ್ದೇಶಕಿ ಕವಿತಾ ಚೌಧರಿ ನಿಧನ

ರಿತುರಾಜ್ ಸಿಂಗ್​ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾ ಮೂಲಕ ಪ್ರಾರ್ಥಿಸಿದ್ದಾರೆ. ಕಿರುತೆರೆಯ ಧಾರಾವಾಹಿಗಳು ಮಾತ್ರವಲ್ಲದೇ ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುವ ಮೂಲಕ ರಿತುರಾಜ್​ ಸಿಂಗ್​ ಅವರು ಜನಪ್ರಿಯತೆ ಪಡೆದಿದ್ದರು. ಒಟಿಟಿಯಲ್ಲಿ ಪ್ರಸಾರವಾದ ವೆಬ್​ ಸರಣಿಗಳಲ್ಲೂ ನಟಿಸಿ ಮೆಚ್ಚುಗೆ ಗಳಿಸಿದ್ದರು. ‘ಬಂದಿಶ್​ ಬ್ಯಾಂಡಿಟ್ಸ್​’, ‘ಮೇಡ್​ ಇನ್​ ಹೆವೆನ್​’, ‘ಇಂಡಿಯನ್​ ಪೊಲೀಸ್​ ಫೋರ್ಸ್​’ ವೆಬ್​ಸೀರಿಸ್​ಗಳಲ್ಲಿ ರಿತುರಾಜ್​ ಸಿಂಗ್​ ನಟಿಸಿದ್ದರು.

‘ಬದ್ರಿನಾಥ್​ ಕಿ ದುಲ್ಹನಿಯಾ’, ‘ಸತ್ಯಮೇವ ಜಯತೆ 2’ ಮುಂತಾದ ಸಿನಿಮಾಗಳಲ್ಲಿ ರಿತುರಾಜ್​ ಸಿಂಗ್​ ಅವರು ಪೋಷಕ ಪಾತ್ರಗಳನ್ನು ಮಾಡಿದ್ದರು. ನಿರ್ದೇಶಕರಾದ ಹನ್ಸಲ್​ ಮೆಹ್ತಾ, ವಿವೇಕ್​ ಅಗ್ನಿಹೋತ್ರಿ, ನಟರಾದ ಸೋನು ಸೋದ್​, ಅರ್ಷದ್​ ವಾರ್ಸಿ, ಸೋನು ಸೂದ್​ ಮುಂತಾದವರು ರಿತುರಾಜ್​ ಸಿಂಗ್​ ನಿಧನಕ್ಕೆ ಕಂಬನಿ ಮಿಡಿದ್ದಾರೆ.

‘ಕಲಾವಿದ ಎಂದಿಗೂ ಸಾಯುವುದಿಲ್ಲ. ಓಂ ಶಾಂತಿ’ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಪೋಸ್ಟ್​ ಮಾಡಿದ್ದಾರೆ. ರಿತುರಾಜ್​ ಸಿಂಗ್​ ಅವರ ಜೊತೆಗಿನ ಒಡನಾಟವನ್ನು ಹನ್ಸಲ್​ ಮೆಹ್ತಾ ಅವರು ಮೆಲುಕು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us