ನಿರ್ಮಾಪಕರಿಗೆ ನಿರಾಳ ತಂದ ಸುಪ್ರೀಂ ಕೋರ್ಟ್ ತೀರ್ಪು: ಪ್ರಕರಣ ಏನು?
Film producers criminal case: ಸಿನಿಮಾ ನಿರ್ಮಾಣ ಎನ್ನುವುದು ಅಲುಗಿನ ಮೇಲಿನ ನಡುಗೆ, ವರ್ಷಕ್ಕೆ ಚಿತ್ರರಂಗವೊಂದರಲ್ಲಿ 1000 ಸಿನಿಮಾಗಳು ಬಿಡುಗಡೆ ಆದರೆ ಗೆಲ್ಲುವುದು ಬೆರಳೆಣಿಕೆಯಷ್ಟು ಮಾತ್ರ. ನಿರ್ಮಾಪಕರು, ಫೈನ್ಯಾನ್ಶಿಯರ್ಗಳು, ವಿತರಕರು, ಚಿತ್ರಮಂದಿರ ಮಾಲೀಕರು ಹೀಗೆ ಹಲವರೊಟ್ಟಿಗೆ ಹಣಕಾಸಿನ ವ್ಯವಹಾರ ಇಟ್ಟುಕೊಂಡಿರುತ್ತಾರೆ. ಸಿನಿಮಾ ಸೋತರೆ ಎಲ್ಲರೂ ಮುಗಿಬೀಳುತ್ತಾರೆ. ಕೇಸುಗಳು ಸಹ ಹಾಕುವುದು ಸಾಮಾನ್ಯ. ಆದರೆ ಇದೀಗ ಅಂಥಹುದೇ ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನಿರ್ಮಾಪಕರಿಗೆ ಸಣ್ಣ ನಿರಾಳತೆ ಒದಗಿಸಿದೆ.

ಚಲನಚಿತ್ರ (Movie) ನಿರ್ಮಾಣ ಅತ್ಯಂತ ಏರಿಳಿತ ಇರುವ ವ್ಯವಹಾರ. ಸಿನಿಮಾ ನಿರ್ಮಾಣ ಎನ್ನುವುದು ಅಲುಗಿನ ಮೇಲಿನ ನಡುಗೆ, ಅಲ್ಲಿ ಲಾಭ ಆಗುವುದಕ್ಕಿಂತಲೂ ನಷ್ಟ ಆಗುವ ಸಾಧ್ಯತೆಗಳು ಬಹಳ ಹೆಚ್ಚು. ಸಿನಿಮಾಗಳ ಗೆಲುವಿನ ಸರಾಸರಿ ಸಹ ಬಹಳ ಕಡಿಮೆ. ವರ್ಷಕ್ಕೆ ಚಿತ್ರರಂಗವೊಂದರಲ್ಲಿ 1000 ಸಿನಿಮಾಗಳು ಬಿಡುಗಡೆ ಆದರೆ ಗೆಲ್ಲುವುದು ಬೆರಳೆಣಿಕೆಯಷ್ಟು ಮಾತ್ರ. ಸಿನಿಮಾ ಗೆದ್ದರೆ ನಟ, ನಿರ್ದೇಶಕರ ಗೆಲುವಾಗುತ್ತದೆ, ಆದರೆ ಸೋತರೆ ನಷ್ಟ ನಿರ್ಮಾಪಕನಿಗೆ ಮಾತ್ರ. ನಿರ್ಮಾಪಕರು, ಫೈನ್ಯಾನ್ಶಿಯರ್ಗಳು, ವಿತರಕರು, ಚಿತ್ರಮಂದಿರ ಮಾಲೀಕರು ಹೀಗೆ ಹಲವರೊಟ್ಟಿಗೆ ಹಣಕಾಸಿನ ವ್ಯವಹಾರ ಇಟ್ಟುಕೊಂಡಿರುತ್ತಾರೆ. ಸಿನಿಮಾ ಸೋತರೆ ಎಲ್ಲರೂ ಮುಗಿಬೀಳುತ್ತಾರೆ. ಕೇಸುಗಳು ಸಹ ಹಾಕುವುದು ಸಾಮಾನ್ಯ. ಆದರೆ ಇದೀಗ ಅಂಥಹುದೇ ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನಿರ್ಮಾಪಕರಿಗೆ ಸಣ್ಣ ನಿರಾಳತೆ ಒದಗಿಸಿದೆ.
ಚಲನಚಿತ್ರವೊಂದರ ನಿರ್ಮಾಣಕ್ಕಾಗಿ ಹೂಡಿಕೆ ಮಾಡಿದ್ದ ಹಣವನ್ನು ಮರಳಿ ನೀಡಲಿಲ್ಲ ಎಂಬ ಕಾರಣಕ್ಕೆ ಚಿತ್ರ ನಿರ್ಮಾಪಕರೊಬ್ಬರ ವಿರುದ್ಧ ಕ್ರಿಮಿನಲ್ ವಂಚನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿರ್ಮಾಪಕನ ವಿರುದ್ಧದ ಕ್ರಿಮಿನಲ್ ನಡಾವಳಿಗಳನ್ನು ರದ್ದುಗೊಳಿಸಿದೆ. ಸಿನಿಮಾ ನಿರ್ಮಾಣದ ವ್ಯವಹಾರದ ಸ್ವರೂಪದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಅವಲೋಕನ ಮಾಡಿದ್ದು. ಚಿತ್ರವೊಂದು ಬಾಕ್ಸ್ ಆಫೀಸ್ನಲ್ಲಿ ವಿಫಲವಾದರೆ ಅಥವಾ ನಷ್ಟ ಅನುಭವಿಸಿದರೆ, ಅದನ್ನು ವಂಚನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಸನ್ನ ಬಿ ವರಾಳೆ ಅವರ ಪೀಠವು, ‘ಚಲನಚಿತ್ರ ನಿರ್ಮಾಣವು ಮೂಲಭೂತವಾಗಿ ಹೆಚ್ಚಿನ ಅಪಾಯವನ್ನು ಹೊಂದಿರುವ ವ್ಯವಹಾರವಾಗಿದೆ. ಇಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಲಾಭ ಸಿಗುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ:‘ಧುರಂಧರ್ 2’ ಅಬ್ಬರಕ್ಕೂ ಜಗ್ಗಿಲ್ಲ ‘ಉಸ್ತಾದ್ ಭಗತ್ ಸಿಂಗ್’; ಪವನ್ ಸಿನಿಮಾ ಗಳಿಕೆ ಎಷ್ಟು?
ಸಿನಿಮಾ ಸೋತು ಹಣ ಕಳೆದುಕೊಂಡರೆ ಅದನ್ನು ‘ಕ್ರಿಮಿನಲ್ ವಂಚನೆ’ ಎಂದು ಕರೆಯಲಾಗದು. ಹೂಡಿಕೆದಾರರು ಲಾಭದ ನಿರೀಕ್ಷೆಯಲ್ಲಿ ಹಣ ಹಾಕುತ್ತಾರೆ, ಆದರೆ ವ್ಯವಹಾರದಲ್ಲಿ ನಷ್ಟ ಉಂಟಾದಾಗ ಅದು ಕೇವಲ ಸಿವಿಲ್ ವಿವಾದವಾಗುತ್ತದೆಯೇ ಹೊರತು ಕ್ರಿಮಿನಲ್ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ನಿರ್ಮಾಪಕನು ಮೊದಲಿನಿಂದಲೇ ಹೂಡಿಕೆದಾರರಿಗೆ ವಂಚಿಸುವ ಉದ್ದೇಶ ಹೊಂದಿದ್ದನೆಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲದ ಕಾರಣ, ಕೇವಲ ಹಣಕಾಸಿನ ನಷ್ಟದ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ತೀರ್ಪು ಬಾಲಿವುಡ್ ಮತ್ತು ಇತರ ಚಿತ್ರರಂಗದ ನಿರ್ಮಾಪಕರಿಗೆ ದೊಡ್ಡ ಸಮಾಧಾನ ತಂದಿದೆ. ಸಿನಿಮಾ ವಿತರಣೆ ಅಥವಾ ಹೂಡಿಕೆಯಲ್ಲಿ ನಷ್ಟ ಉಂಟಾದಾಗ ನಿರ್ಮಾಪಕರನ್ನು ಗುರಿಯಾಗಿಸಿ ದಾಖಲಿಸಲಾಗುವ ಅನಗತ್ಯ ಕ್ರಿಮಿನಲ್ ಪ್ರಕರಣಗಳಿಗೆ ಇದು ತಡೆ ಒಡ್ಡುವ ಸಾಧ್ಯತೆಯಿದೆ. ಸಿನಿಮಾ ಉದ್ಯಮದಲ್ಲಿ ಹಣಕಾಸಿನ ವಹಿವಾಟುಗಳು ಹೆಚ್ಚಾಗಿರುವುದರಿಂದ, ಈ ತೀರ್ಪು ಸಿವಿಲ್ ಒಪ್ಪಂದಗಳು ಮತ್ತು ಕ್ರಿಮಿನಲ್ ಹೊಣೆಗಾರಿಕೆಗಳ ನಡುವಿನ ವ್ಯತ್ಯಾಸವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:22 pm, Fri, 20 March 26




