ಗುಂಡಿನ ದಾಳಿ ಬಳಿಕ ಮೊದಲ ಬಾರಿ ಮನೆಯಿಂದ ಹೊರಬಂದ ಸಲ್ಮಾನ್​ ಖಾನ್​; ಹೇಳಿಕೆ ಬಿಡುಗಡೆ

‘ಸಲೀಂ ಖಾನ್​ ಕುಟುಂಬದವರ ನಿವಾಸವಾದ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಮೇಲೆ ಗುಂಡಿನ ದಾಳಿ ನಡೆದಿದ್ದು ಆಘಾತಕಾರಿ ಸಂಗತಿ. ಈ ಘಟನೆಯಿಂದ ನಮ್ಮ ಕುಟುಂಬಕ್ಕೆ ಆತಂಕ ಉಂಟಾಗಿದೆ’ ಎಂದು ಸಲ್ಮಾನ್​ ಖಾನ್​ ಫ್ಯಾಮಿಲಿಯವರು ಹೇಳಿದ್ದಾರೆ. ಜೀವ ಬೆದರಿಕೆ ನಡುವೆಯೂ ಸಲ್ಮಾನ್​ ಖಾನ್​ ಅವರು ಸಿನಿಮಾ ಕೆಲಸಗಳಲ್ಲಿ ಮುಂದುವರಿಯುವುದು ಅನಿವಾರ್ಯ.

ಗುಂಡಿನ ದಾಳಿ ಬಳಿಕ ಮೊದಲ ಬಾರಿ ಮನೆಯಿಂದ ಹೊರಬಂದ ಸಲ್ಮಾನ್​ ಖಾನ್​; ಹೇಳಿಕೆ ಬಿಡುಗಡೆ
ಸಲ್ಮಾನ್​ ಖಾನ್​

Updated on: Apr 15, 2024 | 8:07 PM

ಬಾಲಿವುಡ್​ ನಟ ಸಲ್ಮಾನ್​ ಖಾನ್​ (Salman Khan) ಅವರ ಮನೆ ಮೇಲೆ ಭಾನುವಾರ (ಏಪ್ರಿಲ್​ 14) ಗುಂಡಿನ ದಾಳಿ ನಡೆದಿದ್ದು ಎಲ್ಲರಲ್ಲೂ ಆತಂಕ ಮೂಡಿಸಿತು. ಈ ಘಟನೆ ನಡೆದ ಬಳಿಕ ಸಲ್ಮಾನ್​ ಖಾನ್​ ಅವರು ಮನೆಯಿಂದ ಹೊರಬಂದಿರಲಿಲ್ಲ. ಇಂದು (ಏ.15) ಸಂಜೆ ಅವರು ಮೊದಲ ಬಾರಿಗೆ ಮನೆಯಿಂದ ಹೊರಬಂದಿದ್ದಾರೆ. ಅಲ್ಲದೇ, ಗುಂಡಿನ ದಾಳಿ ಬಳಿಕ ಸಲ್ಮಾನ್​ ಖಾನ್​ ಕುಟುಂಬದವರು (Salman Khan Family) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಕೆಲವು ಗಾಳಿಸುದ್ದಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಈ ದಾಳಿಯ ಬಗ್ಗೆ ಸಲ್ಮಾನ್​ ಖಾನ್​ ತಂದೆ ಸಲೀಂ ಖಾನ್​ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಆಗಿತ್ತು. ಆದರೆ ಸಲೀಂ ಖಾನ್​ (Salim Khan) ಆ ರೀತಿ ಯಾವುದೇ ಹೇಳಿಕೆ ನೀಡಿಲ್ಲ ಎಂಬುದನ್ನು ಈಗ ಸ್ಪಷ್ಟಪಡಿಸಲಾಗಿದೆ.

‘ಇಬ್ಬರು ಅಪರಿಚಿತರು ಬೈಕ್​ನಲ್ಲಿ ಬಂದು ಸಲೀಂ ಖಾನ್​ ಕುಟುಂಬದ ನಿವಾಸವಾದ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಮೇಲೆ ಗುಂಡಿನ ದಾಳಿ ಮಾಡಿದ್ದು ಆಘಾತಕಾರಿ ಸಂಗತಿಯಾಗಿದೆ. ಈ ಘಟನೆಯಿಂದ ನಮ್ಮ ಕುಟುಂಬಕ್ಕೆ ಆತಂಕ ಆಗಿದೆ. ದುರದೃಷ್ಟಕರ ವಿಷಯ ಏನೆಂದರೆ, ಕೆಲವು ವ್ಯಕ್ತಿಗಳು ನಮ್ಮ ಕುಟುಂಬದ ಆಪ್ತರು ಎಂದು ಹೇಳಿಕೊಂಡು ಮಾಧ್ಯಮಗಳಲ್ಲಿ ಲಘುವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಘಟನೆ ಒಂದು ಪ್ರಚಾರದ ಗಿಮಿಕ್​ ಮತ್ತು ಇದರಿಂದ ಸಲ್ಮಾನ್​ ಖಾನ್​ ಕುಟುಂಬದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದೆಲ್ಲ ಹೇಳಿದ್ದಾರೆ. ಆದರೆ ಅದು ನಿಜವಲ್ಲ. ಅಂಥವರ ಮಾತನ್ನು ಗಂಭೀರವಾಗಿ ಪರಿಗಣಿಸಬಾರದು’ ಎಂದು ಸಲ್ಲು ಕುಟುಂಬದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ ಮನೆ ಮೇಲೆ ಗುಂಡು ಹಾರಿಸಿದ ಶಂಕಿತರ ಸಿಸಿಟಿವಿ ವಿಡಿಯೋ ವೈರಲ್​

‘ಸಲೀಂ ಖಾನ್​ ಕುಟುಂಬದ ಯಾರೂ ಕೂಡ ಮಾಧ್ಯಮಗಳಿಗೆ ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಈ ಸಮಯದಲ್ಲಿ ಕುಟುಂಬದವರು ಪೊಲೀಸರ ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ನಮಗೆ ಮುಂಬೈ ಪೊಲೀಸರ ಮೇಲೆ ನಂಬಿಕೆ ಇದೆ. ನಮ್ಮ ಕುಟುಂಬಕ್ಕೆ ರಕ್ಷಣೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಬೆಂಬಲ ಮತ್ತು ಪ್ರೀತಿ ನೀಡಿದ ಎಲ್ಲರಿಗೂ ಧನ್ಯವಾದಗಳು’ ಎಂದು ಸಲ್ಮಾನ್ ಖಾನ್​ ಸಹೋದರ ಅರ್ಬಾಜ್​ ಖಾನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸಲ್ಮಾನ್​ ಖಾನ್​ ಅವರು ಬಾಲಿವುಡ್​ನ ಬಹುಬೇಡಿಕೆಯ ನಟ. ಅನೇಕ ಜಾಹೀರಾತು, ಸಿನಿಮಾ ಮುಂತಾದ ಪ್ರಾಜೆಕ್ಟ್​ಗಳನ್ನು ಅವರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಅವುಗಳ ಸಲುವಾಗಿ ಮನೆಯಿಂದ ಹೊರಬರುವುದು ಅನಿವಾರ್ಯ. ಸದ್ಯಕ್ಕೆ ಅವರಿಗೆ ಜೀವ ಬೆದರಿಕೆ ಇದ್ದರೂ ಕೂಡ ಮನೆಯಿಂದ ಹೊರಬಂದಿದ್ದಾರೆ. ಪರಿಸ್ಥಿತಿ ಕಷ್ಟ ಇರುವುದರಿಂದ ಅವರು ಭದ್ರತೆ ಹೆಚ್ಚಿಸಿಕೊಳ್ಳಬೇಕಿದೆ. ಒಟ್ಟಾರೆ ಈ ಘಟನೆಯಿಂದ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us