ಸಲ್ಮಾನ್ ತಂದೆ ಸಲೀಂ ಖಾನ್​ಗೆ ಮತ್ತೆ ಪ್ರಾಣ ಬೆದರಿಕೆ; ಮಹಿಳೆಯಿಂದ ಬಂತು ಲೆಟರ್

|

Updated on: Sep 19, 2024 | 12:27 PM

ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 18’ಗೆ ಆ್ಯಂಕರ್ ಆಗಿ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಈ ಸೀಸನ್​ಗಾಗಿ ಫ್ಯಾನ್ಸ್ ಕಾದಿದ್ದಾರೆ. ಇದರ ಜೊತೆಗೆ ಅವರು ‘ಸಿಖಂದರ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಇವೆಲ್ಲದರ ಮಧ್ಯೆ ಸಲ್ಲು ತಂದೆ ಸಲೀಮ್ ಖಾನ್​ಗೆ ಜೀವ ಬೆದರಿಕೆ ಬಂದಿದೆ.

ಸಲ್ಮಾನ್ ತಂದೆ ಸಲೀಂ ಖಾನ್​ಗೆ ಮತ್ತೆ ಪ್ರಾಣ ಬೆದರಿಕೆ; ಮಹಿಳೆಯಿಂದ ಬಂತು ಲೆಟರ್
ಸಲೀಂ-ಸಲ್ಮಾನ್
Follow us on

ನಟ ಸಲ್ಮಾನ್ ಖಾನ್ ತಂದೆ ಹಾಗೂ ಖ್ಯಾತ ಬರಹಗಾರ ಸಲೀಂ ಖಾನ್ ಅವರಿಗೆ ಪ್ರಾಣ ಬೆದರಿಕೆ ಹಾಕಲಾಗಿದೆ. ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಅವರಿಗೆ ಮತ್ತೊಂದು ಬೆದರಿಕೆ ಬಂದಿದೆ. ಸಲೀಂ ಖಾನ್ ಅವರು ಇಂದು (ಸೆಪ್ಟೆಂಬರ್ 19) ಬೆಳಗಿನ ನಡಿಗೆಗೆ ತೆರಳುತ್ತಿದ್ದಾಗ ಅಪರಿಚಿತ ಮಹಿಳೆಯೊಬ್ಬರು ಅವರಿಗೆ ಬೆದರಿಕೆ ಪತ್ರ ನೀಡಿದ್ದಾರೆ. ‘ಲಾರೆನ್ಸ್ ಬಿಷ್ಣೋಯ್ ಅವರನ್ನು ಕಳುಹಿಸಬೇಕೇ’ ಎಂದು ಪತ್ರದಲ್ಲಿ ಬರೆದಿದೆ.

ಈ ಪ್ರಕರಣದ ಸಂಬಂಧ ಅಪರಿಚಿತ ಮಹಿಳೆಯ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಅಪರಿಚಿತ ಮಹಿಳೆಯಿಂದ ಸಲೀಂ ಖಾನ್‌ಗೆ ಬೆದರಿಕೆ ಬಂದಿದ್ದು ಇದೇ ಮೊದಲು. ಹಾಗಾಗಿ ಸಂಚಲನ ಸೃಷ್ಟಿ ಆಗಿದೆ. ಈ ಮಹಿಳೆ ಯಾರು? ಅವರು ಎಲ್ಲಿಂದ ಬಂದಿದ್ದರು? ಅವರು ನಿಜಕ್ಕೂ ಬಿಷ್ಣೋಯ್ ಗ್ಯಾಂಗ್​ನವರಾ ಎನ್ನುವ ಪ್ರಶ್ನೆಗಳು ಈ ಸಂದರ್ಭದಲ್ಲಿ ಎದ್ದಿವೆ. ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಕೆಲವು ತಿಂಗಳ ಹಿಂದೆ ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್ ಮನೆಯ ಗೋಡೆಗೆ ಇಬ್ಬರು ಯುವಕರು ಗುಂಡಿನ ದಾಳಿ ನಡೆಸಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಗುಂಡಿನ ದಾಳಿಯ ಹೊಣೆ ಹೊತ್ತುಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಜೂನ್‌ನಲ್ಲಿ ಸಲ್ಮಾನ್ ಖಾನ್ ಮತ್ತು ಸಲೀಂ ಖಾನ್‌ಗೆ ಕೊಲೆ ಬೆದರಿಕೆಗಳು ಬಂದಿದ್ದವು. ಈ ಸಂಬಂಧ  ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಲ್ಮಾನ್ ಮತ್ತು ಸಲೀಂ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆದಾಗ್ಯೂ ಈ ರೀತಿಯ ಈ ಬೆದರಿಕೆ ಪತ್ರ ಬರುತ್ತಿದೆ. ಸಲೀಂ ಖಾನ್ ಪ್ರತಿ ದಿನ ಭದ್ರತಾ ಸಿಬ್ಬಂದಿಯೊಂದಿಗೆ ಬೆಳಗಿನ ವಾಕ್​ ಹೋಗುತ್ತಾರೆ.

ಇದನ್ನೂ ಓದಿ: ವಿದೇಶದಲ್ಲೂ ಸಲ್ಮಾನ್ ಖಾನ್ ಹೆಸರಲ್ಲಿ ಮೋಸ; ಖಡಕ್ ಎಚ್ಚರಿಕೆ ನೀಡಿದ ನಟ 

ದ್ವೇಷ ಏಕೆ?

ಸಲ್ಮಾನ್ ಖಾನ್ ಅವರು ಶೂಟಿಂಗ್ ಹೋದ ಸಂದರ್ಭದಲ್ಲಿ ಕೃಷ್ಣ ಮೃಗವನ್ನು ಹತ್ಯೆ ಮಾಡಿದ್ದರು. ಕೃಷ್ಣ ಮೃಗವನ್ನು ಬಿಷ್ಣೋಯ್ ಸಮುದಾಯವನ್ನು ದೇವರಂತೆ ಕಾಣುತ್ತಾರೆ. ಇದನ್ನು ಹತ್ಯೆ ಮಾಡಿರುವುದರಿಂದ ಸಲ್ಲು ವಿರುದ್ಧ ದ್ವೇಷ ತೀರಿಸಿಕೊಳ್ಳಲು ಬಿಷ್ಣೋಯ್ ಗ್ಯಾಂಗ್ ಮುಂದಾಗಿದೆ.

ಸಿನಿಮಾ

ಸಿನಿಮಾ ವಿಚಾರಕ್ಕೆ ಬರೋದಾದರೆ ಸಲ್ಮಾನ್ ಖಾನ್ ಅವರು ‘ಸಿಖಂದರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ 2025ರ ಈದ್ ಸಂದರ್ಭದಲ್ಲಿ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರು ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.