ಸುಶಾಂತ್​ ಸಿಂಗ್​ ನೆರೆ ಮನೆಯವನನ್ನು ಅರೆಸ್ಟ್​ ಮಾಡಿದ ಪೊಲೀಸರು; ಇದಕ್ಕಿದೆ ಡ್ರಗ್ಸ್​ ಲಿಂಕ್​

| Updated By: ರಾಜೇಶ್ ದುಗ್ಗುಮನೆ

Updated on: Jan 29, 2022 | 2:32 PM

31 ವರ್ಸದ ಸಾಹಿಲ್​ ಷಾ ಅಲಿಯಾಸ್ ಫ್ಲಾಕೋ ಬಂಧಿತ ವ್ಯಕ್ತಿ. ಸುಶಾಂತ್​ ಪಕ್ಕದ ಮನೆಯಲ್ಲಿ ಈತ ವಾಸವಾಗಿದ್ದ. ಸುಶಾಂತ್​ ಮರಣಾ ನಂತರ ಸಾಹಿಲ್ ನಾಪತ್ತೆಯಾಗಿದ್ದ.

ಸುಶಾಂತ್​ ಸಿಂಗ್​ ನೆರೆ ಮನೆಯವನನ್ನು ಅರೆಸ್ಟ್​ ಮಾಡಿದ ಪೊಲೀಸರು; ಇದಕ್ಕಿದೆ ಡ್ರಗ್ಸ್​ ಲಿಂಕ್​
ಸುಶಾಂತ್​ ಸಿಂಗ್​ ರಜಪೂತ್​
Follow us on

ನಟ ಸುಶಾಂತ್​ ಸಿಂಗ್ ರಜಪೂತ್ (Sushant Singh Rajput) ​​ ಸಾವಿನ ಪ್ರಕರಣದಲ್ಲಿ ಇನ್ನೂ ಹಲವು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ. ಸುಶಾಂತ್​ ಸಿಂಗ್​ ರಜಪೂತ್​ ಅವರದ್ದು ಹತ್ಯೆಯೋ ಅಥವಾ ಆತ್ಮಹತ್ಯೆಯೋ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಸುಶಾಂತ್​ ನಿಧನದ ನಂತರದಲ್ಲಿ ಅವರ ಪ್ರೇಯಸಿ ರಿಯಾ ಚಕ್ರವರ್ತಿ (Rhea Chakraborty) ಹೆಸರು ಮುಂಚೂಣಿಗೆ ಬಂದಿತ್ತು. ‘ಸುಶಾಂತ್​ ಖಾತೆಯಿಂದ ರಿಯಾ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಸುಶಾಂತ್​ ಸಾವಿಗೆ ಅವರೇ ಕಾರಣ’ ಎನ್ನುವ ಆರೋಪಗಳನ್ನು ಮಾಡಲಾಯಿತು. ಈ ಮಧ್ಯೆ ಸುಶಾಂತ್​ ಸಾವಿಗೂ, ಡ್ರಗ್​ ವಿಚಾರಕ್ಕೂ ನಂಟು ಇದೆ ಎಂಬ ವಿಚಾರ ಬೆಳಕಿಗೆ ಬಂತು. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಡ್ರಗ್​ ಪೆಡ್ಲರ್ ಒಬ್ಬನನ್ನು ಬಂಧಿಸಲಾಗಿದೆ. ಈತ ಸುಶಾಂತ್​ ನೆರೆ ಮನೆಯವನಾಗಿದ್ದ ಎನ್ನಲಾಗಿದೆ.

31 ವರ್ಸದ ಸಾಹಿಲ್​ ಷಾ ಅಲಿಯಾಸ್ ಫ್ಲಾಕೋ ಬಂಧಿತ ವ್ಯಕ್ತಿ. ಸುಶಾಂತ್​ ಪಕ್ಕದ ಮನೆಯಲ್ಲಿ ಈತ ವಾಸವಾಗಿದ್ದ. ಸುಶಾಂತ್​ ಮರಣಾ ನಂತರ ಸಾಹಿಲ್ ನಾಪತ್ತೆಯಾಗಿದ್ದ. ಈಗ ದುಬೈನಿಂದ ಬರುವಾಗ ಆತನನ್ನು ಬಂಧಿಸಲಾಗಿದೆ.  ಈತ ನೀಡುವ ಮಾಹಿತಿ ತನಿಖೆ ದೃಷ್ಟಿಯಲ್ಲಿ ಬಹಳ ಮಹತ್ವ ಪಡೆದುಕೊಳ್ಳಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ನಡೆದ ವಿಚಾರಣೆ ವೇಳೆ ಡ್ರಗ್​ ವಿಚಾರ ಬೆಳಕಿಗೆ ಬಂದಿತ್ತು. ಹಲವರನ್ನು ಕರೆದು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಸಾಹಿಲ್ ಹೆಸರು ಕೇಳಿಬಂದಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ಕಳೆದ ವರ್ಷ ಗಾಂಜಾ ವಶಪಡಿಸಿಕೊಂಡ ಪ್ರಕರಣ ಮತ್ತು 2020ರಲ್ಲಿ ಸುಶಾಂತ್ ಸಾವಿನ ಪ್ರಕರಣದಲ್ಲಿ ಸಾಹಿಲ್​ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ 9 ತಿಂಗಳಿಂದ ಸಾಹಿಲ್​ ತಲೆಮರೆಸಿಕೊಂಡು ಓಡಾಡುತ್ತಿದ್ದ. ಎನ್​ಸಿಬಿ ಅಧಿಕಾರಿಗಳು ಈತನಿಗಾಗಿ ಹುಡುಕಾಟ ನಡೆಸಿದ್ದರು. ಜೂನ್​ 2021ರಂದು ತನ್ನನ್ನು ಬಂಧಿಸದಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಎನ್​ಸಿಬಿ ಅಧಿಕಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ಸಾಹಿಲ್​ ಸಲ್ಲಿಕೆ ಮಾಡಿದ್ದ ಅರ್ಜಿ ರಿಜೆಕ್ಟ್​ ಆಗಿತ್ತು.

2021ರ ಏಪ್ರಿಲ್​ನಲ್ಲಿ ಎನ್‌ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ಅವರು ಸಾಹಿಲ್​ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದರು. ‘ಕರಣ್ ಅರೋರಾ ಮತ್ತು ಅಬ್ಬಾಸ್ ಲಖಾನಿಗೆ ಡ್ರಗ್ಸ್ ಸರಬರಾಜು ಮಾಡಿದ್ದು ಸಾಹಿಲ್​. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಣ್ ಮತ್ತು ಅಬ್ಬಾಸ್ ಇಬ್ಬರನ್ನೂ ಬಂಧಿಸಲಾಗಿತ್ತು’ ಎಂದಿದ್ದರು ಅವರು.

ಹಿಂದಿ ಧಾರಾವಾಹಿಯ ಮೂಲಕ ಪರಿಚಿತರಾದ ಸುಶಾಂತ್ ಸಿಂಗ್ ನಂತರ ಬಾಲಿವುಡ್​ಗೆ ಕಾಲಿಟ್ಟರು. ಎಂ.ಎಸ್. ಧೋನಿ ಬಯೋಪಿಕ್ ಸಿನಿಮಾದ ಮೂಲಕ ಅವರು ಖ್ಯಾತಿ ಹೆಚ್ಚಿಸಿಕೊಂಡರು. ಅವರಿಗೆ ಬಾಲಿವುಡ್​ನಲ್ಲಿ ಸಾಕಷ್ಟು ಬೇಡಿಕೆ ಇತ್ತು. ಆದರೆ, 2020ರ ಜೂನ್ 14 ರಂದು ಅವರು ಆತ್ಮಹತ್ಯೆ ಮಾಡಿಕೊಂಡರು. ಇಂದಿಗೂ ಕೂಡ ಅವರದ್ದು ಸಾವೋ ಅಥವಾ ಆತ್ಮಹತ್ಯೆಯೋ ಎನ್ನುವುದು ನಿಗೂಢವಾಗಿಯೇ ಇದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಅವರ ಜನ್ಮದಿನದಂದು ಕೆಲವರು ಸುಶಾಂತ್​ ಸಿಂಗ್​ಗೆ ನ್ಯಾಯ ಒದಗಿಸುವಂತೆ ಮನವಿ ಇಟ್ಟಿದ್ದಾರೆ.

ಇದನ್ನೂ ಓದಿ: ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ ಧರಿಸಿದ ಈ ಲೆಹೆಂಗಾ ಬೆಲೆ ಕೇಳಿ ಕಣ್ಣರಳಿಸಿದ ಫ್ಯಾನ್ಸ್​

Sushant Birthday: ಸುಶಾಂತ್​ ವಿಡಿಯೋ ಹಂಚಿಕೊಂಡು ಮಿಸ್​ ಯೂ ಎಂದ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ