ಮುಗಿಯಿತು ‘ದಿ ಕೇರಳ ಸ್ಟೋರಿ 2’ ಸಿನಿಮಾದ ಆಟ: ಅಂತಿಮವಾಗಿ ಆದ ಕಲೆಕ್ಷನ್ ಎಷ್ಟು?

‘ದಿ ಕೇರಳ ಸ್ಟೋರಿ 2’ ಸಿನಿಮಾ ಭಾರಿ ಕಲೆಕ್ಷನ್ ಮಾಡಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆ ಊಹೆ ನಿಜವಾಗಲಿಲ್ಲ. 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಕೂಡ ಸಾಧ್ಯವಾಗಿಲ್ಲ. ‘ಧುರಂಧರ್ 2’ ಸಿನಿಮಾ ರಿಲೀಸ್ ಆದ ನಂತರ ‘ದಿ ಕೇರಳ ಸ್ಟೋರಿ 2’ ಆಟ ಅಂತ್ಯವಾಗಿದೆ.

ಮುಗಿಯಿತು ‘ದಿ ಕೇರಳ ಸ್ಟೋರಿ 2’ ಸಿನಿಮಾದ ಆಟ: ಅಂತಿಮವಾಗಿ ಆದ ಕಲೆಕ್ಷನ್ ಎಷ್ಟು?
The Kerala Story 2 Goes Beyond

Updated on: Mar 25, 2026 | 10:01 PM

ಬಾಲಿವುಡ್‌ನ ವಿವಾದಾತ್ಮಕ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾ ಈಗ ಸೈಲೆಂಟ್ ಆಗಿದೆ. ಬಿಡುಗಡೆಗೂ ಮುನ್ನ ಈ ಸಿನಿಮಾ ಸಖತ್ ಸದ್ದು ಮಾಡಿತ್ತು. ಆದರೆ ‘ಧುರಂಧರ್ 2’ (Dhurandhar 2) ಬಿಡುಗಡೆ ಆದ ಬಳಿಕ ‘ದಿ ಕೇರಳ ಸ್ಟೋರಿ 2’ ಸಿನಿಮಾದ ಆಟ ಅಂತ್ಯವಾಗಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾದ ಪ್ರದರ್ಶನ ಬಹುತೇಕ ಕೊನೆಗೊಂಡಿದೆ. ಉಲ್ಕಾ ಗುಪ್ತಾ, ಐಶ್ವರ್ಯಾ ಓಜಾ ಮತ್ತು ಅದಿತಿ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯ ಮಟ್ಟ ತಲುಪುವಲ್ಲಿ ವಿಫಲವಾಗಿದೆ.

ಕಾಮಾಕ್ಯ ನಾರಾಯಣ್ ಸಿಂಗ್ ಅವರು ನಿರ್ದೇಶನ ಮಾಡಿದ ‘ದಿ ಕೇರಳ ಸ್ಟೋರಿ 2’ ಚಿತ್ರವು ಭಾರತದ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 42.10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತನ್ನ ನಾಲ್ಕನೇ ವಾರದಲ್ಲಿ ಸಿನಿಮಾ ಕೇವಲ 60 ಲಕ್ಷ ರೂಪಾಯಿ ಗಳಿಸಿದೆ. ಹಿಂದಿನ ವಾರಗಳಿಗೆ ಹೋಲಿಸಿದರೆ ಇದು ಭಾರಿ ಕುಸಿತ. ಭಾರಿ ಕಲೆಕ್ಷನ್ ಮಾಡುವ ನಿರೀಕ್ಷೆ ಹೊಂದಿದ್ದ ಈ ಸಿನಿಮಾ ಹಾಫ್ ಸೆಂಚುರಿ ಬಾರಿಸಲು ಕೂಡ ಸಾಧ್ಯವಾಗಿಲ್ಲ.

‘ದಿ ಕೇರಳ ಸ್ಟೋರಿ 2’ ಸಿನಿಮಾದ ಈ ದಿಢೀರ್ ಕುಸಿತಕ್ಕೆ ಪ್ರಮುಖ ಕಾರಣ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರ. ಹೌದು, ಈ ಸಿನಿಮಾ ಬಿಡುಗಡೆಯಾದ ನಂತರ ಚಿತ್ರಮಂದಿರಗಳಲ್ಲಿ ‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಇದ್ದ ಹೆಚ್ಚಿನ ಸ್ಕ್ರೀನ್‌ಗಳನ್ನು ಕಸಿದುಕೊಳ್ಳಲಾಯಿತು. ಒಂದು ವೇಳೆ ‘ಧುರಂಧರ್ 2’ ಪೈಪೋಟಿ ಇಲ್ಲದಿದ್ದರೆ, ಈ ಸಿನಿಮಾ ಸುಲಭವಾಗಿ 50 ಕೋಟಿ ರೂಪಾಯಿ ಗಡಿ ದಾಟುತ್ತಿತ್ತು.

2023ರಲ್ಲಿ ಬಿಡುಗಡೆಯಾಗಿದ್ದ ‘ದಿ ಕೇರಳ ಸ್ಟೋರಿ’ ಮೊದಲ ಭಾಗವು 6.75 ಕೋಟಿ ರೂಪಾಯಿ ಓಪನಿಂಗ್ ಪಡೆದುಕೊಂಡಿತ್ತು. ಅಂತಿಮವಾಗಿ 220 ಕೋಟಿ ರೂಪಾಯಿ ಬಾಚಿಕೊಂಡು ಬ್ಲಾಕ್‌ಬಸ್ಟರ್ ಎನಿಸಿಕೊಂಡಿತ್ತು. ಆದರೆ, ಅದರ ಸೀಕ್ವೆಲ್ ಆ ಮಟ್ಟದ ಮ್ಯಾಜಿಕ್ ಮಾಡಲು ಸಾಧ್ಯವಾಗಿಲ್ಲ. ಆದರೂ, ಚಿತ್ರದ ಬಜೆಟ್ ಕಡಿಮೆ ಇದ್ದ ಕಾರಣ ಇದು ಹಿಟ್ ಸಿನಿಮಾ ಎಂದೇ ಪರಿಗಣಿಸಲ್ಪಟ್ಟಿದೆ.

ಇದನ್ನೂ ಓದಿ: ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು

ಬಿಡುಗಡೆಗೂ ಮೊದಲು ‘ದಿ ಕೇರಳ ಸ್ಟೋರಿ 2’ ಸಿನಿಮಾ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಈ ಸಿನಿಮಾಗೆ ಕೇರಳದಲ್ಲಿ ಬಹಳ ವಿರೋಧ ವ್ಯಕ್ತವಾಗಿತ್ತು. ಈ ಪ್ರಕರಣವು ಕೋರ್ಟ್ ಮೆಟ್ಟಿಲೇರಿತ್ತು. ಅನೇಕ ಕಡೆಗಳಲ್ಲಿ ಈ ಸಿನಿಮಾದ ಶೋ ರದ್ದಾಯಿತು. ನೆಗೆಟಿವ್ ವಿಮರ್ಶೆ ಕೂಡ ಸಿಕ್ಕಿದ್ದರಿಂದ ದೊಡ್ಡ ಮಟ್ಟದ ಕಲೆಕ್ಷನ್ ಆಗಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us