ಅಂಬಾನಿ ಪ್ರೀ ವೆಡ್ಡಿಂಗ್​ಗೆ ಕರಣ್ ಜೋಹರ್ ಗೈರಾಗಿದ್ದೇಕೆ? ಇಲ್ಲಿದೆ ಕಾರಣ

Karan Johar: ಬಾಲಿವುಡ್​ನ ಎಲ್ಲ ಮದುವೆಗಳಿಗೂ ಹಾಜರಿ ಹಾಕುವ ಖಾಯಂ ಅತಿಥಿ ಕರಣ್ ಜೋಹರ್ ಅನಂತ್ ಅಂಬಾನಿ-ರಾಧಿಕಾರ ಪ್ರೀ ವೆಡ್ಡಿಂಗ್​ಗೆ ಹಾಜರಾಗಿರಲಿಲ್ಲ ಏಕೆ?

ಅಂಬಾನಿ ಪ್ರೀ ವೆಡ್ಡಿಂಗ್​ಗೆ ಕರಣ್ ಜೋಹರ್ ಗೈರಾಗಿದ್ದೇಕೆ? ಇಲ್ಲಿದೆ ಕಾರಣ

Updated on: Mar 07, 2024 | 6:34 PM

ಕರಣ್ ಜೋಹರ್ (Karan Johar) ಬಾಲಿವುಡ್​ನಲ್ಲಿ (Bollywood) ಬಹುತೇಕ ಎಲ್ಲರಿಗೂ ಅತ್ಯಂತ ಖಾಸಾ ವ್ಯಕ್ತಿ. ಬಾಲಿವುಡ್​ನ ಯಾವುದೇ ಸೆಲೆಬ್ರಿಟಿಗಳ ವಿವಾಹವಾದರು ಕರಣ್ ಜೋಹರ್​ಗೆ ಆಹ್ವಾನವಿದ್ದೇ ಇರುತ್ತದೆ. ಕರಣ್ ಜೋಹರ್ ಮದುವೆಗೆ ಹಾಜರಾಗುವುದು ಸಹ ಖಾಯಂ. ಕರಣ್ ಜೋಹರ್-ಮನೀಷ್ ಮಲ್ಹೋತ್ರಾ ಬಾಲಿವುಡ್ ಮದುವೆಗಳ ಖಾಯಂ ಅತಿಥಿಗಳೆಂದು ಮೀಮ್​ ಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಆದರೆ ಇಡೀ ಬಾಲಿವುಡ್ ಹಾಜರಿ ಹಾಕಿದ್ದ ಅನಂತ್ ಅಂಬಾನಿ-ರಾಧಿಕಾರ ಪ್ರೀ ವೆಡ್ಡಿಂಗ್​ ಕಾರ್ಯಕ್ರಮಕ್ಕೆ ಕರಣ್ ಜೋಹರ್ ಗೈರಾಗಿದ್ದು ಹಲವರಿಗೆ ಆಶ್ಚರ್ಯ ತರಿಸಿದೆ. ಆದರೆ ಕರಣ್ ಗೈರಾಗಿದ್ದಕ್ಕೆ ಕಾರಣವಿದೆ.

ಕರಣ್ ಜೋಹರ್​ಗೆ ಸಹ ಅನಂತ್-ರಾಧಿಕಾರ ಪ್ರೀ ವೆಡ್ಡಿಂಗ್​ಗೆ ಆಹ್ವಾನ ನೀಡಲಾಗಿತ್ತು. ಕರಣ್ ಜೋಹರ್ ಸಹ ಉತ್ಸುಕತೆಯಿಂದ ಪ್ರೀ ವೆಡ್ಡಿಂಗ್​ಗೆ ಹಾಜರಾಗಲು ತಯಾರಿ ಆರಂಭಿಸಿದ್ದರು. ಪ್ರೀ ವೆಡ್ಡಿಂಗ್​ಗಾಗಿ ವಿಶೇಷ ಧಿರಿಸುಗಳನ್ನು ಗೆಳೆಯ ಮನೀಷ್ ಮಲ್ಹೋತ್ರಾ ಇಂದ ಡಿಸೈನ್ ಸಹ ಮಾಡಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಕರಣ್​ ಜೋಹರ್​ಗೆ ಅನಾರೋಗ್ಯ ಉಂಟಾದ ಕಾರಣ ಅವರು ಪ್ರೀ ವೆಡ್ಡಿಂಗ್ ಕಾರ್ಯಕ್ರಮದಿಂದ ದೂರ ಉಳಿದರು.

ಇದನ್ನೂ ಓದಿ:ದೀಪಿಕಾ ಪಡುಕೋಣೆಗಾಗಿ ಬಿಗ್ ಬಜೆಟ್ ಚಿತ್ರ ಹೋಲ್ಡ್ ಮಾಡಿದ ಕರಣ್ ಜೋಹರ್

ಕರಣ್ ಜೋಹರ್​ಗೆ ವೈರಲ್ ಜ್ವರ, ನೆಗಡಿ ಮತ್ತು ಗಂಟಲು ನೋವುಗಳು ಕಾಣಿಸಿಕೊಂಡ ಕಾರಣ, ಇತರೆ ಅತಿಥಿಗಳಿಗೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಕರಣ್ ಜೋಹರ್ ಪ್ರೀ ವೆಡ್ಡಿಂಗ್​ಗೆ ಹೋಗದಿರಲು ನಿರ್ಧರಿಸಿ ಮನೆಯಲ್ಲಿಯೇ ಉಳಿದು ವಿಶ್ರಾಂತಿ ಪಡೆದುಕೊಂಡರು. ತಮ್ಮ ಗೆಳೆಯರಿಂದ ಪ್ರೀ ವೆಡ್ಡಿಂಗ್ ಸಂಭ್ರಮದ ಬಗ್ಗೆ ಕೇಳಿ ತಿಳಿದುಕೊಂಡರಂತೆ. ಅಲ್ಲದೆ, ಅನಂತ್ ಹಾಗೂ ರಾಧಿಕಾರ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡು ಭಾವಪೂರ್ಣ ಸಂದೇಶವನ್ನು ಸಹ ಕರಣ್ ಬರೆದುಕೊಂಡಿದ್ದಾರೆ.

ಆದರೆ ಕರಣ್ ಜೋಹರ್​ರ ಆಪ್ತ ಗೆಳೆಯ, ಬಾಲಿವುಡ್ ಮದುವೆಗಳ ಖಾಯಂ ಅತಿಥಿ, ಜನಪ್ರಿಯ ವಸ್ತ್ರ ವಿನ್ಯಾಸಕ ಮನೀಷ್ ಮಲ್ಹೋತ್ರಾ ಪ್ರೀ ವೆಡ್ಡಿಂಗ್​ಗೆ ಹಾಜರಾಗಿದ್ದರು. ವೇದಿಕೆ ಏರಿ ಕರೀನಾ ಕಪೂರ್, ಸಾರಾ ಅಲಿ ಖಾನ್ ಇನ್ನಿತರೆ ನಟಿಯರೊಡನೆ ಸಖತ್ ಸ್ಟೆಪ್ ಸಹ ಹಾಕಿದರು. ಅನಂತ್ ಹಾಗೂ ರಾಧಿಕಾರ ಮದುವೆ ಕಾರ್ಯಕ್ರಮ ಜೂನ್ ತಿಂಗಳಲ್ಲಿ ನಡೆಯಲಿದ್ದು, ಆಗ ಬಾಲಿವುಡ್​ನ ಅತಿಥಿಗಳ ಜೊತೆಗೆ ದೇಶದ ಅಗ್ರಗಣ್ಯ ರಾಜಕಾರಣಿಗಳು, ಉದ್ಯಮಿಗಳು ಇನ್ನೂ ಹಲವರು ಭಾಗಿಯಾಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us