ಛಿಛೋರೆ ಸಿನಿಮಾ ನಟಿ ಅಭಿಲಾಷಾ ಪಾಟಿಲ್​ ಕೊರೊನಾ ವೈರಸ್​ಗೆ ಬಲಿ

Abhilasha Patil Death: ಕೆಲವೇ ದಿನಗಳ ಹಿಂದೆ ಅಭಿಲಾಷಾ ಅವರು ಬನಾರಸ್​​ನಲ್ಲಿ ಶೂಟಿಂಗ್​ ಮಾಡುತ್ತಿದ್ದರು. ಅಲ್ಲಿಂದ ಹಿಂದಿರುಗಿ ಬಂದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕೊವಿಡ್​ ಪಾಸಿಟಿವ್​ ಎಂಬುದು ತಿಳಿದುಬಂದಿತ್ತು.

ಛಿಛೋರೆ ಸಿನಿಮಾ ನಟಿ ಅಭಿಲಾಷಾ ಪಾಟಿಲ್​ ಕೊರೊನಾ ವೈರಸ್​ಗೆ ಬಲಿ
ಅಭಿಲಾಷಾ ಪಾಟಿಲ್

Updated on: May 07, 2021 | 8:17 AM

ಕೊರೊನಾ ವೈರಸ್​ ಮಹಾಮಾರಿಯ ಮರಣ ಮೃದಂಗ ಮುಂದುವರಿದಿದೆ. ಸಿನಿಮಾ ಕೆಲಸಗಳ ಸಲುವಾಗಿ ಸದಾ ಕಾಲ ಹೊರಗಡೆ ಇರುವ ಸೆಲೆಬ್ರಿಟಿಗಳಿಗೆ ಕೊವಿಡ್​ ಕಾಟ ಕೊಡುತ್ತಿದೆ. ಮರಾಠಿ ಚಿತ್ರರಂಗದ ಖ್ಯಾತ ನಟಿ ಅಭಿಲಾಷಾ ಪಾಟಿಲ್ ಅವರು ಕೊರೊನಾದಿಂದ ಮೃತರಾಗಿದ್ದಾರೆ ಪತಿ ಮತ್ತು ಓರ್ವ ಪುತ್ರನನ್ನು ಅವರು ಅಗಲಿದ್ದಾರೆ. ಸುಶಾಂತ್​ ಸಿಂಗ್​ ರಜಪೂತ್​ ನಟನೆಯ ಛಿಛೋರೆ ಚಿತ್ರದಲ್ಲಿ ಅಭಿಲಾಷಾ ಅಭಿನಯಿಸಿದ್ದರು. ಅವರ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ಅಭಿಲಾಷಾ ಅವರು ಬನಾರಸ್​​ನಲ್ಲಿ ಶೂಟಿಂಗ್​ ಮಾಡುತ್ತಿದ್ದರು. ಅಲ್ಲಿಂದ ಹಿಂದಿರುಗಿ ಬಂದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕೊವಿಡ್​ ಪಾಸಿಟಿವ್​ ಎಂಬುದು ತಿಳಿದುಬಂತು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಅವರು ಮೇ 4ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಿಧನರಾದರು ಎಂದು ಅವರ ಸ್ನೇಹಿತ ಕುಶಾಲ್​ ತಿಳಿಸಿದ್ದಾರೆ.

ಅಭಿಲಾಷಾ ಅವರ ನಿಧನದ ಸುದ್ದಿ ಕೇಳಿ ಚಿತ್ರರಂಗದ ಅನೇಕರಿಗೆ ನೋವುಂಟಾಗಿದೆ. ಅಭಿಲಾಷಾ ನಟಿಸಿದ್ದ ಪರ್ವಾಸ್​ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಶಶಾಂಕ್​ ಉದಪುರಕರ್​ ಅವರು ಕಂಬನಿ ಮಿಡಿದ್ದಾರೆ. ‘ಅಭಿಲಾಷಾ ಅವರು ತುಂಬ ಪರಿಶ್ರಮ ಪಡುವಂತಹ ಕಲಾವಿದೆ ಆಗಿದ್ದರು. ಎನರ್ಜಿಟಿಕ್​ ಆಗಿದ್ದರು. ನೋವು ತೋಡಿಕೊಳ್ಳಲು ಪದಗಳೇ ಸಿಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಶಶಾಂಕ್​ ಹೇಳಿದ್ದಾರೆ.

ಸೆಲೆಬ್ರಿಟಿಗಳ ವಲಯದಲ್ಲಿ ಕೊರೊನಾ ವೈರಸ್​ ಅಟ್ಟಹಾಸ ಮೆರೆಯುತ್ತಿದೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಕೊವಿಡ್​ಗೆ ಬಲಿಯಾದರು. ತಮಿಳು ನಟ ಪಾಂಡು ಅವರು ಮೇ 6ರಂದು ನಿಧನರಾದರು. ಕಾಲಿವುಡ್​ ನಿರ್ದೇಶಕ ಕೆ.ವಿ. ಆನಂದ್, ಕನ್ನಡದ ಖ್ಯಾತ ನಿರ್ಮಾಪಕ ಕೋಟಿ ರಾಮು, ಯುವ ನಟ- ನಿರ್ಮಾಪಕ ಡಿ.ಎಸ್​. ಮಂಜುನಾಥ್​, ಕಾರ್ಯಕಾರಿ ನಿರ್ಮಾಪಕ ರಾಜಶೇಖರ್​, ಪೋಸ್ಟರ್​ ಡಿಸೈನರ್​ ಮಸ್ತಾನ್​, ಪುಟ್ಟಣ್ಣ ಕಣಗಾಲ್ ಪುತ್ರ ರಾಮು, ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಮುಂತಾದವರನ್ನು ಈ ಮಹಾಮಾರಿ ಬಲಿ ಪಡೆದುಕೊಂಡಿದೆ.

ಇದನ್ನೂ ಓದಿ:

 ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ ಸ್ಟಾರ್​ ನಟಿ ಪಿಯಾ ಸಹೋದರ ಕೊರೊನಾದಿಂದ ನಿಧನ

Renuka Sharma Death: ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾದಿಂದ ನಿಧನ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us