ವಿಚ್ಛೇದನ ಬಳಿಕ ಮೊದಲ ಬಾರಿಗೆ ಮಾಜಿ ಪತ್ನಿ ಐಶ್ವರ್ಯಾಗೆ ಶುಭಾಶಯ ತಿಳಿಸಿದ ಧನುಷ್

| Updated By: ರಾಜೇಶ್ ದುಗ್ಗುಮನೆ

Updated on: Mar 18, 2022 | 6:15 PM

ಇತ್ತೀಚೆಗೆ ಚಿತ್ರರಂಗದಲ್ಲಿ ವಿಚ್ಛೇದನ ತುಂಬಾನೇ ಕಾಮನ್​ ಆಗಿಬಿಟ್ಟಿದೆ. ವಿಚ್ಛೇದನ ಪಡೆದ ನಂತರದಲ್ಲಿ ಸಾಮಾನ್ಯವಾಗಿ ಒಬ್ಬರ ಮುಖ ಮತ್ತೊಬ್ಬರು ನೋಡೋಕೆ ಇಷ್ಟಪಡುವುದಿಲ್ಲ. ಆದರೆ, ಚಿತ್ರರಂಗದವರ ವಿಚಾರದಲ್ಲಿ ಆ ರೀತಿ ಇಲ್ಲ.

ವಿಚ್ಛೇದನ ಬಳಿಕ ಮೊದಲ ಬಾರಿಗೆ ಮಾಜಿ ಪತ್ನಿ ಐಶ್ವರ್ಯಾಗೆ ಶುಭಾಶಯ ತಿಳಿಸಿದ ಧನುಷ್
ಐಶ್ವರ್ಯಾ-ಧನುಷ್
Follow us on

ಧನುಷ್ (Dhanush) ಹಾಗೂ ಐಶ್ವರ್ಯಾ ರಜನಿಕಾಂತ್ (Aishwaryaa Rajinikanth)​ ಅವರ 18 ವರ್ಷಗಳ ದಾಂಪತ್ಯ ಜೀವನ ಕಳೆದ ವರ್ಷ ಅಂತ್ಯವಾಗಿತ್ತು. ಇದು ಅವರ ಅಭಿಮಾನಿಗಳಿಗೆ ನಿಜಕ್ಕೂ ಬೇಸರ ಮೂಡಿಸಿತ್ತು. ಇಬ್ಬರೂ ಗೆಳೆಯರಾಗಿ ಮುಂದುವರಿಯುವುದಾಗಿ ತಿಳಿಸಿದ್ದರು. ಇವರು ಬೇರೆ ಆಗುವುದಕ್ಕೆ ಕಾರಣ ಏನು ಎನ್ನುವುದನ್ನು ಅಭಿಮಾನಿಗಳ ಬಳಿ ಊಹೆ ಮಾಡಲೂ ಸಾಧ್ಯವಾಗಿಲ್ಲ. ವಿಚ್ಛೇದನ (Divorce) ಪಡೆದ ಬಳಿಕ ಇಬ್ಬರೂ ಮುಖಾಮುಖಿ ಆಗಿಲ್ಲ. ಅಚ್ಚರಿ ಎಂದರೆ, ಈಗ ಧನುಷ್​ ಅವರು ಮಾಜಿ ಪತ್ನಿ ಐಶ್ವರ್ಯಾಗೆ ಶುಭಾಶಯ ತಿಳಿಸಿದ್ದಾರೆ. ಈ ಟ್ವೀಟ್​ ಸಖತ್​ ವೈರಲ್​ ಆಗುತ್ತಿದೆ.

ಇತ್ತೀಚೆಗೆ ಚಿತ್ರರಂಗದಲ್ಲಿ ವಿಚ್ಛೇದನ ತುಂಬಾನೇ ಕಾಮನ್​ ಆಗಿಬಿಟ್ಟಿದೆ. ವಿಚ್ಛೇದನ ಪಡೆದ ನಂತರದಲ್ಲಿ ಸಾಮಾನ್ಯವಾಗಿ ಒಬ್ಬರ ಮುಖ ಮತ್ತೊಬ್ಬರು ನೋಡೋಕೆ ಇಷ್ಟಪಡುವುದಿಲ್ಲ. ಆದರೆ, ಚಿತ್ರರಂಗದವರ ವಿಚಾರದಲ್ಲಿ ಆ ರೀತಿ ಇಲ್ಲ. ಡಿವೋರ್ಸ್​ ಪಡೆದ ನಂತರವೂ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಒಟ್ಟೊಟ್ಟಿಗೆ ಸಿನಿಮಾ ಮಾಡುತ್ತಾರೆ. ಈಗ ಧನುಷ್ ಹಾಗೂ ಐಶ್ವರ್ಯಾ ಕೂಡ ಮದುವೆ ನಂತರದಲ್ಲಿ ಗೆಳೆಯರಾಗಿ ಮುಂದುವರಿದಿದ್ದಾರೆ ಅನ್ನೋದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ.

ಮಾರ್ಚ್​ 17ರಂದು ಐಶ್ವರ್ಯಾ ನಿರ್ದೇಶನ ಮಾಡಿದ ‘ಪಯಣಿ..’ ಮ್ಯೂಸಿಕ್​ ವಿಡಿಯೋ ರಿಲೀಸ್​ ಆಗಿದೆ. ಈ ಹಾಡು ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಸಿದ್ಧಗೊಂಡಿದೆ. ತಮಿಳಿನ ವಿಡಿಯೋ ಲಿಂಕ್​ ಟ್ವೀಟ್​ ಮಾಡಿರುವ ಧನುಷ್​, ‘ಮ್ಯೂಸಿಕ್​ ವಿಡಿಯೋಗಾಗಿ ಶುಭಾಶಯಗಳು ನನ್ನ ಗೆಳತಿ ಐಶ್ವರ್ಯಾ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಐಶ್ವರ್ಯಾ ಕೂಡ ಉತ್ತರಿಸಿದ್ದಾರೆ. ‘ಧನ್ಯವಾದಗಳು ಧನುಷ್’ ಎಂದು ಉತ್ತರಿಸಿದ್ದಾರೆ.

ಐಶ್ವರ್ಯಾ ಅವರು ನಟ ರಜನಿಕಾಂತ್ ಹಿರಿಯ ಪುತ್ರಿ. ವೃತ್ತಿಯಲ್ಲಿ ಅವರು ನಿರ್ದೇಶಕಿ ಹಾಗೂ ಗಾಯಕಿ. ಇವರು 2004ರ ನವೆಂಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಿಚ್ಛೇದನ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ನೋವು ತರಿಸಿದೆ. ವಿಶೇಷ ಎಂದರೆ, ಐಶ್ವರ್ಯಾ ಹಾಗೂ ಧನುಷ್​ ಅವರದ್ದು ಪ್ರೇಮ ವಿವಾಹ. 21ನೇ ವಯಸ್ಸಿಗೆ ಐಶ್ವರ್ಯಾ ಅವರನ್ನು ಪ್ರೀತಿಸಿ ಧನುಷ್ ಮದುವೆ ಆಗಿದ್ದರು. ಈಗ ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಧನುಷ್​ ಇತ್ತೀಚೆಗೆ ಹೊಸ ಸಿನಿಮಾ ಒಪ್ಪಿಕೊಂಡಿದ್ದರು. ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ಇದಕ್ಕೆ ತಮಿಳಿನಲ್ಲಿ ‘ವಾತಿ’ ಹಾಗೂ ತೆಲುಗಿನಲ್ಲಿ ‘ಸರ್’ ಎಂದು ಹೆಸರಿಡಲಾಗಿದೆ.  ಸಿತಾರಾ ಎಂಟರ್​ಟೇನ್​ಮೆಂಟ್​​ನ​ ಸೂರ್ಯದೇವ ನಾಗವಂಶಿ ಹಾಗೂ ಫಾರ್ಚೂನ್ ಫೋರ್​ ಸಿನೇಮಾಸ್​​ನ ಸಾಯಿ ಸೌಜನ್ಯ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ‘ರಂಗ್​ ದೇ’ ಖ್ಯಾತಿಯ ವೆಂಕಿ ಅಟ್ಲುರಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ವಿಚ್ಛೇದನದ ಬಳಿಕವೂ ಒಂದೇ ಹೋಟೆಲ್​ನಲ್ಲಿ ಉಳಿದುಕೊಳ್ಳುತ್ತಿದ್ದಾರೆ ಧನುಷ್​-ಐಶ್ವರ್ಯಾ?

ಧನುಷ್​ರಿಂದ ಬೇರ್ಪಟ್ಟ ಬಳಿಕ ಮೊದಲ ಬಾರಿಗೆ ಪ್ರೀತಿಯ ಕುರಿತು ಮುಕ್ತವಾಗಿ ಮಾತನಾಡಿದ ಐಶ್ವರ್ಯಾ; ಹೇಳಿದ್ದೇನು?