‘ಧುರಂಧರ್ 2’ ಅಬ್ಬರ: ಭಾರತದಲ್ಲಿ 10 ದಿನಕ್ಕೆ 700 ಕೋಟಿ ರೂಪಾಯಿ ದಾಟಿದ ಕಲೆಕ್ಷನ್

ರಣವೀರ್ ಸಿಂಗ್ ಅವರು ‘ಧುರಂಧರ್ 2’ ಸಿನಿಮಾ ಮೂಲಕ ಅತಿ ದೊಡ್ಡ ಯಶಸ್ಸು ಕಂಡಿದ್ದಾರೆ. ಎಲ್ಲ ಕಡೆಗಳಲ್ಲಿ ಈ ಸಿನಿಮಾ ಭರ್ಜರಿಯಾಗಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಅಬ್ಬರ ಮುಂದುವರಿದಿದೆ. ಈ ಚಿತ್ರದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.

‘ಧುರಂಧರ್ 2’ ಅಬ್ಬರ: ಭಾರತದಲ್ಲಿ 10 ದಿನಕ್ಕೆ 700 ಕೋಟಿ ರೂಪಾಯಿ ದಾಟಿದ ಕಲೆಕ್ಷನ್
Dhurandhar

Updated on: Mar 29, 2026 | 10:39 AM

ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಮತ್ತು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhurandhar 2) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಪ್ರತಿದಿನ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಬಿಡುಗಡೆಯಾದ ಕೇವಲ 9 ದಿನಗಳಲ್ಲಿ 700 ಕೋಟಿ ಕ್ಲಬ್ ಸೇರಿದ್ದ ಈ ಚಿತ್ರ, ಈಗ 10ನೇ ದಿನಕ್ಕೆ ಕಾಲಿಡುತ್ತಲೇ ಭಾರತೀಯ ಚಿತ್ರರಂಗದ ಘಟಾನುಘಟಿ ಚಿತ್ರಗಳ ದಾಖಲೆಯನ್ನು ಪುಡಿಪುಡಿ ಮಾಡಿದೆ. ಮಾರ್ಚ್ 19ರಂದು ತೆರೆಕಂಡ ಈ ಸಿನಿಮಾ, ತನ್ನ 10ನೇ ದಿನವಾದ ಶನಿವಾರದಂದು (ಮಾರ್ಚ್ 28) ಬರೋಬ್ಬರಿ 62.85 ಕೋಟಿ ರೂ. ಗಳಿಸಿದೆ. ಭಾರತದಲ್ಲಿ ಈವರೆಗಿನ ಗಳಿಕೆ 784 ಕೋಟಿ ರೂಪಾಯಿ ಆಗಿದೆ.

ಈ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಎರಡನೇ ಶನಿವಾರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. 10ನೇ ದಿನದ ಗಳಿಕೆಯಲ್ಲಿ ಈ ಹಿಂದೆ ‘ಧುರಂಧರ್’ ಮೊದಲ ಭಾಗ (58 ಕೋಟಿ ರೂ.) ಅಗ್ರಸ್ಥಾನದಲ್ಲಿತ್ತು. ಈಗ ಅದರ ದಾಖಲೆಯನ್ನು ‘ಧುರಂಧರ್ 2’ ಅಳಿಸಿಹಾಕಿದೆ. ಅಷ್ಟೇ ಅಲ್ಲದೆ ಪುಷ್ಪ 2, ಬಾಹುಬಲಿ 2, ಛಾವಾ, ಗದರ್ 2, ಸ್ತ್ರೀ 2 ಮತ್ತು ದಂಗಲ್ ಅಂತಹ ಬ್ಲಾಕ್‌ಬಸ್ಟರ್ ಚಿತ್ರಗಳ 10ನೇ ದಿನದ ಕಲೆಕ್ಷನ್ ಅನ್ನು ಕೂಡ ಇದು ಹಿಂದಿಕ್ಕಿದೆ.

ಕೇವಲ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಈ ಚಿತ್ರದ ಹವಾ ಜೋರಾಗಿದೆ. ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾಗೆ 1,151 ಕೋಟಿ ರೂ. ಕಲೆಕ್ಷನ್ ಆಗಿದೆ. ವಿದೇಶಿ ಮಾರುಕಟ್ಟೆಯಿಂದ ಈವರೆಗೂ 296 ಕೋಟಿ ರೂ. ಬಂದಿದೆ. ಸುಮಾರು 250ರಿಂದ 300 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ, ತನ್ನ ವೆಚ್ಚಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಲಾಭ ಮಾಡುವ ಮೂಲಕ ಅಧಿಕೃತವಾಗಿ ಬ್ಲಾಕ್‌ಬಸ್ಟರ್ ಪಟ್ಟ ಅಲಂಕರಿಸಿದೆ.

ಸಂಜಯ್ ದತ್, ಅರ್ಜುನ್ ರಾಮ್​ಪಾಲ್ ಮತ್ತು ಆರ್. ಮಾಧವನ್ ಅವರಂತಹ ಬಲಿಷ್ಠ ತಾರಾಗಣವಿರುವ ಈ ಚಿತ್ರವು ಭಾನುವಾರದ (ಮಾರ್ಚ್ 29) ಅಂತ್ಯಕ್ಕೆ 800 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ನಿರೀಕ್ಷೆಯಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಶೀಘ್ರದಲ್ಲೇ 300 ಕೋಟಿ ಕ್ಲಬ್ ಸೇರುವತ್ತ ಸಿನಿಮಾ ಹೆಜ್ಜೆ ಹಾಕುತ್ತಿದೆ. ಒಟ್ಟಿನಲ್ಲಿ, ಆದಿತ್ಯ ಧರ್ ಮತ್ತು ರಣವೀರ್ ಸಿಂಗ್ ಜೋಡಿ ಬಾಲಿವುಡ್‌ಗೆ ಮತ್ತೆ ಜೀವ ತುಂಬಿದ್ದು, ‘ಧುರಂಧರ್ 2’ ಗಳಿಕೆಯ ನಾಗಾಲೋಟ ಎಲ್ಲಿಗೆ ನಿಲ್ಲುತ್ತದೆ ಎಂಬ ಕುತೂಹಲ ಎಲ್ಲರಲ್ಲಿದೆ.

ಇದನ್ನೂ ಓದಿ: ಚಾವುಂಡಿ ದೇವಾಲಯದಲ್ಲಿ ರಣವೀರ್ ಸಿಂಗ್ ಕ್ಷಮೆ ಕೇಳಬೇಕು: ದೂರುದಾರರ ಒತ್ತಾಯ

ಈ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ರಜನಿಕಾಂತ್, ಅಲ್ಲು ಅರ್ಜುನ್, ರಿಷಬ್ ಶೆಟ್ಟಿ, ಶಿವರಾಜ್​ಕುಮಾರ್ ಮುಂತಾದ ಸೆಲೆಬ್ರಿಟಿಗಳು ‘ಧುರಂಧರ್ 2’ ಸಿನಿಮಾವನ್ನು ಹೊಗಳಿದ್ದಾರೆ. ಇದರಿಂದಾಗಿ ಚಿತ್ರತಂಡದ ಬಲ ಹೆಚ್ಚಿದಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us