
ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿರುದ್ಧ ಡಿಎಂಕೆಯ ಅಧಿಕೃತ ಪತ್ರಿಕೆ ‘ಮುರಸೋಳಿ’ ತೀವ್ರ ವಾಗ್ದಾಳಿ ನಡೆಸಿದೆ. ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಕೃಷ್ಣನ್ ಅವರ (Trisha Krishnan) ಉಪಸ್ಥಿತಿಯನ್ನು ಮುರಸೋಳಿ ಪತ್ರಿಕೆ ಕಟುವಾಗಿ ಟೀಕಿಸಿದೆ. ಈ ಘಟನೆಯು ಸಾರ್ವಜನಿಕರಲ್ಲಿ ಮತ್ತು ವಿಜಯ್ ಅವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ ಎಂದು ಮುರಸೋಳಿ ತನ್ನ ಸಂಪಾದಕೀಯ ಲೇಖನದಲ್ಲಿ ಉಲ್ಲೇಖಿಸಿದೆ.
ಚೆನ್ನೈನ ಫೋರ್ಟ್ ಸೆಂಟ್ ಜಾರ್ಜ್ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಂದು ಸಿಎಂ ವಿಜಯ್ ಧ್ವಜಾರೋಹಣ ನೆರವೇರಿಸಿದ್ದರು. ಈ ವೇಳೆ ನಟಿ ತ್ರಿಷಾ ಕೃಷ್ಣನ್ ಹಾಗೂ ಅವರ ತಾಯಿ ಉಮಾ ಕೃಷ್ಣನ್ ಮುಂಭಾಗದ ಸಾಲಿನಲ್ಲಿ ಕುಳಿತಿದ್ದರು. ಅವರು ವಿಜಯ್ ಅವರ ಪೋಷಕರ ಪಕ್ಕದಲ್ಲೇ ಆಸೀನರಾಗಿದ್ದರು. ಸಿಎಂ ವಿಜಯ್ ಜೀಪ್ನಲ್ಲಿ ಹಾದುಹೋಗುವಾಗ ತ್ರಿಷಾ ಸಲ್ಯೂಟ್ ಮಾಡುವ ವಿಡಿಯೋ ವೈರಲ್ ಆಗಿತ್ತು. ಈ ನಡವಳಿಕೆಯನ್ನು ಡಿಎಂಕೆ ಕಟುವಾಗಿ ವಿಮರ್ಶಿಸಿದೆ.
ಸಿಎಂ ವಿಜಯ್ ಅವರ ಈ ಕಾರ್ಯವನ್ನು ಮುರಸೋಳಿ ‘ಅಸಹ್ಯಕರ’ ಎಂದು ಬಣ್ಣಿಸಿದೆ. ಮುಖ್ಯಮಂತ್ರಿಯಾಗಿ ಈ ರೀತಿ ಪ್ರದರ್ಶನ ಮಾಡುವುದು ಸರಿಯಲ್ಲ ಎಂದು ಹೇಳಿದೆ. ವಿಜಯ್ ಅವರಿಗೆ ಮತ ಹಾಕಿದ ಜನರೇ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾವುದೇ ಮುಜುಗರವಿಲ್ಲದೆ ಈ ರೀತಿ ನಡೆದುಕೊಂಡಿದ್ದಾರೆ ಎಂದು ಪತ್ರಿಕೆ ಆಕ್ರೋಶ ವ್ಯಕ್ತಪಡಿಸಿದೆ. ಲೇಖನದಲ್ಲಿ ತ್ರಿಷಾ ಹೆಸರು ಉಲ್ಲೇಖಿಸದೆ ‘ನಟಿ’ ಎಂದು ಮಾತ್ರ ಕರೆಯಲಾಗಿದೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನದ ಪರೇಡ್ ವೇಳೆ ವಿಜಯ್ ಕುಟುಂಬದ ಜೊತೆ ಕಾಣಿಸಿಕೊಂಡ ತ್ರಿಷಾ
ಚಿತ್ರರಂಗದ ತಮ್ಮ ಆಪ್ತರಿಗೆ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ ಎಂದು ಡಿಎಂಕೆ ಆರೋಪಿಸಿದೆ. ‘ಜನ ನಾಯಕನ್’ ನಿರ್ಮಾಪಕ ವೆಂಕಟ್ ಕೆ ನಾರಾಯಣ್ ಅವರನ್ನು ದೆಹಲಿಯ ವಿಶೇಷ ಪ್ರತಿನಿಧಿಯಾಗಿ ನೇಮಿಸಲಾಗಿದೆ. ‘ಗೋಟ್’ ಚಿತ್ರದ ನಿರ್ಮಾಪಕಿ ಅರ್ಚನಾ ಕಲ್ಪತಿ ಅವರನ್ನು ಮುಜರಾಯಿ ಇಲಾಖೆಯ ಸಮಿತಿಗೆ ಸೇರಿಸಲಾಗಿದೆ. ‘ಲಿಯೋ’ ನಿರ್ಮಾಪಕ ಜಗದೀಶ್ ಪಳನಿಸ್ವಾಮಿ ಅವರನ್ನು ಸಿಎಂ ಖಾಸಗಿ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.