ರೋಗಿಗಳಿಗೆ ಚಿಕಿತ್ಸೆ ನೀಡೋದನ್ನು ನಿಮ್ಮಿಂದ ಕಲಿಯಬೇಕಿಲ್ಲ; ಸೋನು ಸೂದ್​ ವಿರುದ್ಧ ತಿರುಗಿಬಿದ್ದ ವೈದ್ಯರು

ಕೊರನಾ ಮೊದಲನೇ ಅಲೆ ಸಂದರ್ಭದಲ್ಲಿ ಸೋನು ಸೂದ್​ ಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿದ್ದರು. ಎರಡನೇ ಅಲೆ ಸಂದರ್ಭದಲ್ಲೂ ಅವರು ಅದನ್ನು ಮುಂದುವರಿಸಿದ್ದಾರೆ. ಬೆಡ್​ ಸಿಗದವರಿಗೆ ಬೆಡ್​ ನೀಡುತ್ತಿದ್ದಾರೆ.

ರೋಗಿಗಳಿಗೆ ಚಿಕಿತ್ಸೆ ನೀಡೋದನ್ನು ನಿಮ್ಮಿಂದ ಕಲಿಯಬೇಕಿಲ್ಲ; ಸೋನು ಸೂದ್​ ವಿರುದ್ಧ ತಿರುಗಿಬಿದ್ದ ವೈದ್ಯರು
ಸೋನು ಸೂದ್
Edited By:

Updated on: May 21, 2021 | 7:28 AM

ಬಾಲಿವುಡ್​ ನಟ ಸೋನು ಸೂದ್​ ಕೊವಿಡ್​ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ. ಎಲ್ಲಾ ಸ್ಟಾರ್​ಗಳಿಗಿಂತ ಮುಂದೆ ನಿಂತು ಅವರು ಸಹಾಯ ಮಾಡುತ್ತಿದ್ದಾರೆ. ಆದರೆ, ಒಂದು ವಿಚಾರಕ್ಕೆ ಸೋನು ಸೂದ್​ ವಿರುದ್ಧ ವೈದ್ಯರು ತಿರುಗಿ ಬಿದ್ದಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡೋದನ್ನ ನಿಮ್ಮಿಂದ ಕಲಿಯಬೇಕಿಲ್ಲ ಎಂದು ವೈದ್ಯರುಗಳು ನೇರವಾಗಿಯೇ ಹೇಳಿದ್ದಾರೆ.

ಕೊರೊನಾ ಮೊದಲನೇ ಅಲೆ ಸಂದರ್ಭದಲ್ಲಿ ಸೋನು ಸೂದ್​ ಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿದ್ದರು. ಎರಡನೇ ಅಲೆ ಸಂದರ್ಭದಲ್ಲೂ ಅವರು ಅದನ್ನು ಮುಂದುವರಿಸಿದ್ದಾರೆ. ಬೆಡ್​ ಸಿಗದವರಿಗೆ ಬೆಡ್​ ನೀಡುತ್ತಿದ್ದಾರೆ. ಆಮ್ಲಜನಕದ ಕೊರತೆ ಎದುರಾದರೆ ಅದನ್ನು ಪೂರೈಸುತ್ತಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಅವರು ಮಾಡಿದ ಟ್ವೀಟ್​ ಬಗ್ಗೆ ಕೆಲವರು ಅಸಮಾಧಾನ ಹೊರ ಹಾಕಿದ್ದಾರೆ.

ಮಂಗಳವಾರ (ಮೇ 18) ಸಂಜೆ ಟ್ವೀಟ್​ ಮಾಡಿದ್ದ ಸೋನು, ಒಂದು ಸರಳ ಪ್ರಶ್ನೆ. ಒಂದು ನಿರ್ದಿಷ್ಟ ಇಂಜೆಕ್ಷನ್​ ಎಲ್ಲಿಯೂ ಲಭ್ಯವಿಲ್ಲ ಎಂದು ಎಲ್ಲರಿಗೂ ತಿಳಿದಾಗ, ಪ್ರತೀ ವೈದ್ಯರು ಅದೇ ಇಂಜೆಕ್ಷನ್ ಮಾತ್ರ ಏಕೆ ಶಿಫಾರಸು ಮಾಡುತ್ತಾರೆ? ಅದಕ್ಕೆ ಬದಲಾಗಿ ಬೇರೆ ಔಷಧ ಬಳಸಿ ಏಕೆ ಜೀವ ಉಳಿಸಬಾರದು ಎಂದು ಪ್ರಶ್ನೆ ಮಾಡಿದ್ದರು.

ದೇಶದಲ್ಲಿ ರೆಮಿಡಿಸಿವರ್​ ಹೆಸರಿನ ಇಂಜೆಕ್ಷನ್​ ಕೊರತೆ ಉಂಟಾಗಿದೆ. ಈ ಇಂಜೆಕ್ಷನ್​ ಕಾಳಸಂತೆಯಲ್ಲಿ ಕನಿಷ್ಠ 20-30 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಇದೇ ಇಂಜೆಕ್ಷನ್​ಅನ್ನು ಎಲ್ಲಾ ವೈದ್ಯರು ಶಿಫಾರಸು ಮಾಡುತ್ತಿದ್ದಾರೆ. ಈ ದೃಷ್ಟಿಯಿಂದ ಸೋನು ಸೂದ್​ ಟ್ವೀಟ್​ ಮಾಡಿದ್ದಾರೆ ಎನ್ನಲಾಗಿತ್ತು.

ಈ ಟ್ವೀಟ್​ ಕೆಲ ವೈದ್ಯರ ಕೋಪಕ್ಕೆ ಕಾರಣವಾಗಿದೆ. ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿದರೂ ಸೆಲೆಬ್ರಿಟಿ ಆಗಿ ಈ ರೀತಿ ಆರೋಪ ಮಾಡುತ್ತಿದ್ದಾರಲ್ಲ ಎಂದು ವೈದ್ಯರು ಬೇಸರ ಹೊರ ಹಾಕಿದ್ದರು. ಇನ್ನೂ ಕೆಲವರು ಸೋನು ಸೂದ್​ ಮೇಲೆ ಕೋಪ ಕಾರಿದ್ದಾರೆ. ನಿಮಗೆ ನಾವು ನಟನೆ ಹೇಳಿಕೊಡಲು ಬಂದಿಲ್ಲ. ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದನ್ನು ನಮಗೆ ನೀವು ಹೇಳಿಕೊಡಬೇಕಿಲ್ಲ ಎಂದು ಕಿಡಿಕಾರಿದ್ದಾರೆ.

ನಟ ಸೋನು ಸೂದ್​ ಅವರು ಅನೇಕರ ಪಾಲಿಗೆ ರಿಯಲ್​ ಹೀರೋ ಆಗಿದ್ದಾರೆ. ಕಷ್ಟ ಎಂದು ಹೇಳಿದ ಎಲ್ಲರಿಗೂ ಅವರು ಸಹಾಯ ಮಾಡುತ್ತಿದ್ದಾರೆ. ಸದ್ಯದ ಕೊರೊನಾ ಸಂಕಷ್ಟದಲ್ಲಿ ಹಗಲಿರುಳು ಅವರು ಶ್ರಮಿಸುತ್ತಿದ್ದಾರೆ. ಅದರಲ್ಲೂ ಆಸ್ಪತ್ರೆಯ ಬೆಡ್​ ಸಿಗದೇ ಒದ್ದಾಡುತ್ತಿರುವ, ಆಕ್ಸಿಜನ್​ ಸಿಲಿಂಡರ್​ ಕೊರತೆ ಅನುಭವಿಸುತ್ತಿರುವ ಕೊವಿಡ್​ ಸೋಂಕಿತರಿಗಾಗಿ ಸೋನು ಸೂದ್​ ಹಲವು ಬಗೆಯಲ್ಲಿ ನೆರವು ನೀಡುತ್ತಿದ್ದಾರೆ. ಕೊರೊನಾದಿಂದ ಅತಿ ಹೆಚ್ಚು ಕಷ್ಟ ಅನುಭವಿಸುತ್ತಿರುವ ನಾಲ್ಕು ರಾಜ್ಯಗಳಲ್ಲಿ ಆಕ್ಸಿಜನ್​ ಪ್ಲಾಂಟ್​ಗಳನ್ನು ಸ್ಥಾಪಿಸಲು ಸೋನು ಸೂದ್​ ತೀರ್ಮಾನಿಸಿದ್ದರು. ಅದಕ್ಕಾಗಿ ಅವರು ಆಕ್ಸಿಜನ್​ ಪ್ಲಾಂಟ್​ಗಳನ್ನು ಫ್ರಾನ್ಸ್​ನಿಂದ ಆಮದು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.

ಇದನ್ನೂ ಓದಿ: ಬೆಂಗಳೂರಿಗರ ಸಹಾಯಕ್ಕೆ ನಿಂತ ಸೋನು ಸೂದ್​; ಈ ಸಂಖ್ಯೆಗೆ ಸಂಪರ್ಕಿಸಿದರೆ ಮನೆಬಾಗಿಲಿಗೆ ಬರುತ್ತೆ ಆಕ್ಸಿಜನ್​ ಸಿಲಿಂಡರ್

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us