ಸಿನಿಮಾ ಪ್ರಚಾರಕ್ಕೆ ಮದುವೆ ವಿಚಾರ ಎಳೆತಂದ ಪ್ರಭಾಸ್​? ಸ್ಟೇಟಸ್​ ಅರ್ಥ ಏನು?

ಪ್ರೇಕ್ಷಕರನ್ನು ಸೆಳೆಯಲು ಸಿನಿಮಾಗಳ ಪ್ರಚಾರಕ್ಕೆ ಸಾಕಷ್ಟು ತಲೆ ಕೆಡಿಸಿಕೊಳ್ಳಬೇಕು. ‘ಕಲ್ಕಿ 2898 ಎಡಿ’ ಸಿನಿಮಾ ತಂಡ ಕೂಡ ವಿಶೇಷ ರೀತಿಯಲ್ಲಿ ಪ್ರಚಾರ ಮಾಡಲು ಸಜ್ಜಾಗಿದೆ. ಪ್ರಭಾಸ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡ ಸಾಲುಗಳನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಅನೇಕರು ಇದು ಮದುವೆ ವಿಷಯ ಎಂದು ಊಹಿಸಿದ್ದಾರೆ. ಆದರೆ ಅದು ಸಿನಿಮಾದ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟ್​ ಎನ್ನಲಾಗಿದೆ.

ಸಿನಿಮಾ ಪ್ರಚಾರಕ್ಕೆ ಮದುವೆ ವಿಚಾರ ಎಳೆತಂದ ಪ್ರಭಾಸ್​? ಸ್ಟೇಟಸ್​ ಅರ್ಥ ಏನು?
ಪ್ರಭಾಸ್​

Updated on: May 17, 2024 | 7:23 PM

ನಟ ಪ್ರಭಾಸ್​ ಅವರ ಮದುವೆ (Prabhas Marriage) ಬಗ್ಗೆ ಈಗ ಏಕಾಏಕಿ ಸುದ್ದಿ ಹಬ್ಬಿದೆ. ಅದಕ್ಕೆ ಕಾರಣ ಆಗಿರುವುದು ಅವರು ಹಾಕಿರುವ ಸೋಶಿಯಲ್​ ಮೀಡಿಯಾ ಸ್ಟೇಟಸ್​. ‘ಕಡೆಗೂ ವಿಶೇಷ ವ್ಯಕ್ತಿಯೊಬ್ಬರು ನಮ್ಮ ಜೀವನದಲ್ಲಿ ಪ್ರವೇಶಿಸುತ್ತಿದ್ದಾರೆ’ ಎಂದು ಪ್ರಭಾಸ್ (Prabhas) ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಎಲ್ಲರೂ ಇದು ಮದುವೆ ಸಮಾಚಾರ ಎಂದೇ ಊಹಿಸಿದ್ದಾರೆ. ಆದರೆ ಟಾಲಿವುಡ್​ ಮೂಲಗಳ ಪ್ರಕಾರ ಇದು ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಪ್ರಚಾರಕ್ಕಾಗಿ ಮಾಡಿದ ತಂತ್ರ. ಆ ಬಗ್ಗೆ ಶೀಘ್ರದಲ್ಲೇ ಅಸಲಿ ವಿಷಯ ಹೊರಬರಲಿದೆ.

ಪ್ರಭಾಸ್​ ಅವರ ವೃತ್ತಿ ಜೀವನದಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ತುಂಬ ವಿಶೇಷವಾದದ್ದು. ಇದರಲ್ಲಿ ಸೈನ್ಸ್​ ಫಿಕ್ಷನ್​ ಕಥಾಹಂದರ ಇರಲಿದೆ. ನಾಗ್​ ಅಶ್ವಿನ್​ ಅವರು ಇದಕ್ಕೆ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್​ ಜೊತೆ ಕಮಲ್​ ಹಾಸನ್​, ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್​, ದಿಶಾ ಪಟಾನಿ ಮುಂತಾದವರು ನಟಿಸಿದ್ದಾರೆ. ರಿಲೀಸ್​ ದಿನಾಂಕ ಹತ್ತಿರ ಆಗಿರುವ ಈ ಸಂದರ್ಭದಲ್ಲಿ ಪ್ರಚಾರ ಕಾರ್ಯವನ್ನು ಭರ್ಜರಿಯಾಗಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

‘ಕಲ್ಕಿ 2898 ಎಡಿ’ ಸಿನಿಮಾದ ಪ್ರಚಾರಕ್ಕಾಗಿ ಒಂದು ವಿಶೇಷ ಕಾರನ್ನು ವಿನ್ಯಾಸಗೊಳಿಸಲಾಗಿದೆ ಎಂಬ ಮಾಹಿತಿ ಇದೆ. ಅದನ್ನು ಸದ್ಯದಲ್ಲೇ ಪರಿಚಯಿಸಲು ಚಿತ್ರತಂಡ ಸಿದ್ಧವಾಗಿದೆ. ಆ ವಿಚಾರದ ಬಗ್ಗೆ ಜನರಿಗೆ ಕೌತುಕ ಮೂಡಿಸುವ ಸಲುವಾಗಿ ಪ್ರಭಾಸ್​ ಅವರು ಈ ರೀತಿ ಪೋಸ್ಟ್​ ಮಾಡಿದ್ದಾರೆ ಎನ್ನಲಾಗಿದೆ. ಇದು ಅವರ ಸಿನಿಮಾ ಕರಿಯರ್​ನಲ್ಲೇ ವಿಶೇಷ ರೀತಿಯ ಪ್ರಚಾರ ತಂತ್ರ ಆದ್ದರಿಂದ ‘ವಿಶೇಷವಾದ ವ್ಯಕ್ತಿ’ ಎಂದು ಅವರು ಹೇಳಿರಬಹುದು ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಕಣ್ಣಪ್ಪ’ ಶೂಟಿಂಗ್​ ಸೆಟ್​ಗೆ ಬಂದ ಪ್ರಭಾಸ್​; ಪೋಸ್ಟರ್​ ಮೂಲಕ ಗುಡ್​ ನ್ಯೂಸ್​

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮೇ 9ರಂದು ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ರಿಲೀಸ್​ ದಿನಾಂಕ ಮುಂದೂಡಲಾಯಿತು. ಜೂನ್​ 27ರಂದು ಈ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅದಕ್ಕೂ ಮುನ್ನ ಪ್ರಚಾರಕ್ಕಾಗಿ ವಿವಿಧ ತಂತ್ರಗಳನ್ನು ಮಾಡಲಾಗುತ್ತಿದೆ. ‘ವೈಜಯಂತಿ ಮೂವೀಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಈ ಸಿನಿಮಾದಿಂದ ಪ್ರಭಾಸ್​ ಅವರು ದೊಡ್ಡ ಗೆಲುವು ಪಡೆಯಬಹುದು ಎಂಬ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us