‘ನೇಹಾ ಹಿರೇಮಠ್ ಹತ್ಯೆ ಅತ್ಯಂತ ಹೀನ ಕೃತ್ಯ’: ಧ್ರುವ ಸರ್ಜಾ ಆಕ್ರೋಶ

|

Updated on: Apr 19, 2024 | 11:03 PM

ಕನ್ನಡ ಚಿತ್ರರಂಗದ ಖ್ಯಾತ ನಟ ಧ್ರುವ ಸರ್ಜಾ ಅವರು ನೇಹಾ ಹಿರೇಮಠ್ ಹತ್ಯೆಯ ಘಟನೆಯನ್ನು ಖಂಡಿಸಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅವರು ಧ್ವನಿ ಎತ್ತಿದ್ದಾರೆ. ಅಪರಾಧಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಅವರು ತಾಕೀತು ಮಾಡಿದ್ದಾರೆ. ಘಟನೆಯ ಬಗ್ಗೆ ಟ್ವೀಟ್​ ಮಾಡಿದ್ದಕ್ಕೆ ಧ್ರುವ ಸರ್ಜಾ ಅವರ ಅಭಿಮಾನಿಗಳು ಭೇಷ್​ ಎಂದಿದ್ದಾರೆ. ಬೇರೆ ಸೆಲೆಬ್ರಿಟಿಗಳು ಈ ಬಗ್ಗೆ ಮೌನವಾಗಿದ್ದಾರೆ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನೇಹಾ ಹಿರೇಮಠ್ ಹತ್ಯೆ ಅತ್ಯಂತ ಹೀನ ಕೃತ್ಯ’: ಧ್ರುವ ಸರ್ಜಾ ಆಕ್ರೋಶ
ನೇಹಾ ಹಿರೇಮಠ್​, ಧ್ರುವ ಸರ್ಜಾ
Follow us on

‘ಸಹೋದರಿ ನೇಹಾ ಹಿರೇಮಠ್ ಅವರ ಹತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್​ನಲ್ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಇದನ್ನು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ’ ಎಂದು ನಟ ಧ್ರುವ ಸರ್ಜಾ  (Dhruva Sarja) ಅವರು ‘ಎಕ್ಸ್​’ (ಟ್ವಿಟರ್​) ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಆ ಮೂಲಕ ಅವರು ನೇಹಾ ಹಿರೇಮಠ್​ (Neha Hiremath) ಸಾವಿಗೆ ನ್ಯಾಯ ಸಿಗಬೇಕು ಎಂದು ಧ್ವನಿ ಎತ್ತಿದ್ದಾರೆ.

ಘಟನೆಯ ಕುರಿತಂತೆ ಧ್ರುವ ಸರ್ಜಾ ಪೋಸ್ಟ್​ ಮಾಡಿರುವುದಕ್ಕೆ ಅಭಿಮಾನಿಗಳು ಪ್ರಶಂಸೆ ಸೂಚಿಸಿದ್ದಾರೆ. ‘ತಮ್ಮ ಸಾಮಾಜಿಕ ಕಾಳಜಿಗೆ ಧನ್ಯವಾದಗಳು. ಅಪರಾಧಿಗೆ ಇನ್ನೂ ಜೀವಂತವಾಗಿ ಇಟ್ಟಿರುವುದೇ ಒಂದು ವಿಪರ್ಯಾಸ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ‘ಕೊಲೆ ಮಾಡಿದ್ದಕ್ಕೆ ವಿಡಿಯೋ ಇದೆ. ಸಾಕ್ಷಿ ಇನ್ನೇನು ಬೇಕು’ ಎಂದು ‘ಎಕ್ಸ್​’ ಬಳಕೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ರೀತಿಯ ಘಟನೆಗಳು ನಡೆದಾಗ ಕನ್ನಡ ಚಿತ್ರರಂಗದ ಯಾರೊಬ್ಬರೂ ತಮಗೆ ಸಂಬಂಧವೇ ಇಲ್ಲ ಎಂಬಂತೆ ಇರುತ್ತಾರೆ. ಆದರೆ ಧ್ರುವ ಸರ್ಜಾ ಹಾಗಲ್ಲ. ಅವರು ಯಾವಾಗಲೂ ಸೂಕ್ಷ್ಮ ಸಂವೇದಿ ಸಮಾಜಮುಖಿ. ಹಿಂದೆ ತಮ್ಮದೊಂದು ಚಲನಚಿತ್ರದಲ್ಲಿ ನಿರ್ದೇಶಕನ ತರಲೆಯಿಂದ ಒಂದು ಸಮಾಜಕ್ಕೆ ಅವಮಾನಕರವಾದ ರೀತಿಯಲ್ಲಿ ದೃಶ್ಯಗಳು ಮೂಡಿಬಂದಾಗ ತಾವೇ ಕ್ಷಮೆ ಕೇಳಿ ದೊಡ್ಡತನ ಮೆರೆದಿದ್ದರು’ ಎಂದು ಕೂಡ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ನೇಹಾ ಹತ್ಯೆ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸುತ್ತೇನೆ: ಹಂತಕ ಫಯಾಜ್‌ ತಂದೆ ಕಣ್ಣೀರು

ನೇಹಾ ಹಿರೇಮಠ್ ಹತ್ಯೆ ಹಿನ್ನೆಲೆ:

ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಕೊಲೆಯಾದ ಯುವತಿ. ಈ ಪ್ರಕರಣ ಈಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರೀತಿಸಲು‌ ನಿರಾಕರಿಸಿದ ಕಾರಣಕ್ಕಾಗಿ ಫಯಾಜ್ ಎಂಬಾತ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾಗೆ ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ. ಘಟನೆ ನಡೆದ ಒಂದೇ ಗಂಟೆಯಲ್ಲಿ ವಿದ್ಯಾನಗರ ಠಾಣೆ‌ಯ ಪೊಲೀಸರು ಆರೋಪಿಯನ್ನು ಬಂಧಿಸಿದರು. ಈತನ ಕೃತ್ಯಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.