Kiran Raj: ಕೊರೊನಾ ಸಂಕಷ್ಟದಲ್ಲಿ ಪ್ರತಿದಿನ ಸಾವಿರ ಜನರಿಗೆ ಊಟ ಹಾಕುತ್ತಿರುವ ‘ಕನ್ನಡತಿ’ ಕಿರಣ್ ರಾಜ್

| Updated By: ಮದನ್​ ಕುಮಾರ್​

Updated on: May 13, 2021 | 3:11 PM

'ಕಿರಣ್ ರಾಜ್ ಫೌಂಡೇಷನ್' ಅಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಹಾಯ ಮಾಡುತ್ತಾ ಬಂದಿರುವ ಕಿರಣ್​ ರಾಜ್​ ಅವರು ಈಗ ತಮ್ಮ ಸಹಾಯ ಹಸ್ತವನ್ನು ಮತ್ತಷ್ಟು ವಿಸ್ತಾರ ಮಾಡಿದ್ದಾರೆ.

Kiran Raj: ಕೊರೊನಾ ಸಂಕಷ್ಟದಲ್ಲಿ ಪ್ರತಿದಿನ ಸಾವಿರ ಜನರಿಗೆ ಊಟ ಹಾಕುತ್ತಿರುವ ‘ಕನ್ನಡತಿ’ ಕಿರಣ್ ರಾಜ್
ಕಿರಣ್​ ರಾಜ್​
Follow us on

ಕೊರೊನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಜನರ ಸಹಾಯಕ್ಕೆ ನಿಂತಿದ್ದಾರೆ. ಕೆಲವರು ಬಡವರಿಗೆ ಫುಡ್ ಕಿಟ್ ನೀಡುತ್ತಿದ್ದಾರೆ. ಇನ್ನೂ ಕೆಲವರು ಕಷ್ಟದಲ್ಲಿರುವವರಿಗೆ ವೈದ್ಯಕೀಯ ವ್ಯವಸ್ಥೆ ಮಾಡುತ್ತಿದ್ದಾರೆ. ಇದಕ್ಕೆ ‘ಕನ್ನಡತಿ’ ಧಾರಾವಾಹಿ ನಟ ಕಿರಣ್ ರಾಜ್ ಕೂಡ ಹೊರತಾಗಿಲ್ಲ. ‘ಕಿರಣ್ ರಾಜ್ ಫೌಂಡೇಷನ್’ ಅಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಹಾಯ ಮಾಡುತ್ತಾ ಬಂದಿರುವ ಅವರು ಈಗ ತಮ್ಮ ಸಹಾಯ ಹಸ್ತವನ್ನು ಮತ್ತಷ್ಟು ವಿಸ್ತಾರ ಮಾಡಿದ್ದಾರೆ.

ನಿತ್ಯ 1000 ಜನಕ್ಕೆ ಊಟ
ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಕೆಲವರು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಅಂಥವರನ್ನ ಗುರುತಿಸಿ ಕಿರಣ್ ರಾಜ್ ಊಟ ನೀಡುತ್ತಿದ್ದಾರೆ. ‘ನಿತ್ಯ ಒಂದು ಸಾವಿರ ಜನಕ್ಕೆ ಊಟ ನೀಡುತ್ತಿದ್ದೇನೆ. ನಾಗರಬಾವಿ, ಉಲ್ಲಾಳ ಭಾಗದಲ್ಲಿ ಊಟ ನೀಡುವ ಕೆಲಸ ಮಾಡುತ್ತಿದ್ದೇನೆ. ಬೇರೆ ನಗರದಿಂದ ಬಂದು ಇಲ್ಲಿ ಕೆಲಸ ಮಾಡುವವರಿಗೆ, ಮಂಗಳಮುಖಿಯರಿಗೆ ಫುಡ್ ಕಿಟ್ ಕೊಡುತ್ತಿದ್ದೇನೆ. ಅನೇಕ ಕುಟುಂಬದವರು ಕೊರೊನಾದಿಂದ ಮನೆಯಲ್ಲೇ ಕ್ವಾರಂಟೈನ್ ಆಗಿರುತ್ತಾರೆ. ಅಂಥವರು ಸಹಾಯ ಕೇಳಿದರೆ ಆಹಾರ ನೀಡಲಾಗುತ್ತಿದೆ ಎಂದು ಕಿರಣ್ ರಾಜ್ ಮಾಹಿತಿ ನೀಡಿದರು.

ತಾವೇ ರಸ್ತೆಗೆ ಇಳಿದ ಕಿರಣ್ ರಾಜ್
ಕೊರೊನಾದಿಂದ ಅನೇಕರು ಭಯಗೊಂಡು ಮನೆಯಲ್ಲೇ ಕೂತಿದ್ದಾರೆ. ಕಿರಣ್ ರಾಜ್​ಗೂ ಹಾಯಾಗಿ ಮನೆಯಲ್ಲಿ ಕೂರುವ ಆಯ್ಕೆ ಇತ್ತು. ಆದರೆ, ಅವರು ಆ ಆಯ್ಕೆಯನ್ನು ತೆಗೆದುಕೊಂಡಿಲ್ಲ. ತಾವು ವಿತರಣೆ ಮಾಡುತ್ತಿರುವ ಆಹಾರದ ಕ್ವಾಲಿಟಿ ನೋಡೋಕೆ ಅವರೇ ರಸ್ತೆಗೆ ಇಳಿದಿದ್ದಾರೆ. ಫುಡ್ ಕಿಟ್ ಕೊಡುವುದಕ್ಕೂ ಮೊದಲು ಅದರ ಗುಣಮಟ್ಟ ಪರಿಶೀಲಿಸುತ್ತಿದ್ದಾರೆ. ‘ಈ ಸಂದರ್ಭದಲ್ಲಿ ಆಹಾರ ಸಿಗುತ್ತದೆ ಎಂದರೆ ಕಷ್ಟದಲ್ಲಿರುವವರು ಮುಂದೆ ಬಂದೇ ಬರುತ್ತಾರೆ. ಆದರೆ, ನಾವು ಕೊಡುವ ಆಹಾರದ ಗುಣಮಟ್ಟ ಸರಿ ಇಲ್ಲದಿದ್ದರೆ ಅದನ್ನು ಸೇವಿಸಿದವರಿಗೆ ಸಮಸ್ಯೆ ಆಗಬಹುದು. ಹೀಗಾಗಿ, ನಾನೇ ಗುಣಮಟ್ಟ ಪರಿಶೀಲನೆ ಮಾಡುತ್ತಿದ್ದೇನೆ ಎಂದಿದ್ದಾರೆ ಅವರು.

ಕಿರಣ್ ರಾಜ್ ಫೌಂಡೇಷನ್ ಹುಟ್ಟಿದ್ದೇಕೆ?
ಅನೇಕ ಸೆಲೆಬ್ರಿಟಿಗಳು ತಮ್ಮದೇ ಫೌಂಡೇಷನ್ ಮಾಡಿಕೊಂಡು ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ಕಿರಣ್ ರಾಜ್, ‘ಕಿರಣ್ ರಾಜ್ ಫೌಂಡೇಷನ್’ ಆರಂಭಿಸಿದ್ದಾರೆ. ಇದನ್ನು ಆರಂಭಿಸೋಕೆ ಒಂದು ಕಾರಣವಿದೆ. ‘ನಾನು ಆಗ ಮುಂಬೈನಲ್ಲಿದ್ದೆ. ಅಲ್ಲಿ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುವವರು ಹಾಗೂ ಐಷಾರಾಮಿಯಾಗಿ ಬದುಕುವವರು ಈ ಎರಡೂ ವರ್ಗದವರಿದ್ದಾರೆ. ಅದನ್ನು ನೋಡಿದಾಗ ನನಗೆ ಅನ್ನಿಸಿದ್ದು ಒಂದೇ, ನಾನು ಜೀವನದಲ್ಲಿ ಒಂದು ಹಂತಕ್ಕೆ ತಲುಪಿದ ಮೇಲೆ ಏನಾದರೂ ಮಾಡಬೇಕು ಎಂದು. ಕಿರಣ್ ರಾಜ್ ಫೌಂಡೇಷನ್ ಸ್ಥಾಪಿಸಿದೆ. ಎಲ್ಲರಿಗೂ ಸಹಾಯ ಮಾಡುತ್ತಾ ಬರುತ್ತಿದ್ದೇನೆ. ಕೊರೊನಾ ಆರಂಭವಾದ ನಂತರದಲ್ಲಿ ಸಹಾಯ ಮಾಡುವುದನ್ನು ಸ್ವಲ್ಪ ಹೆಚ್ಚಿಸಿದ್ದೇನೆ. ನನ್ನ ಒಟ್ಟೂ ಸಂಪಾದನೆಯ ಶೇ. 40 ಹಣವನ್ನು ಕಷ್ಟದಲ್ಲಿರುವವರ ಸಹಾಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದೇನೆ ಎಂದರು ಕಿರಣ್.

ಧಾರಾವಾಹಿ ಸಿನಿಮಾ ಕೆಲಸ?
ನನ್ನ ಸಿನಿಮಾ ಕೆಲಸಗಳು ಪೂರ್ಣಗೊಂಡಿದ್ದವು. ಪೋಸ್ಟ್ ಪ್ರೊಡಕ್ಷನ್ ಕೂಡ ಮುಗಿದಿದೆ. ಇನ್ನೇನು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಲಾಕ್ಡೌನ್ ಘೋಷಣೆ ಆಗಿದೆ. ಪ್ರೇಕ್ಷಕರು ಚಿತ್ರಮಂದಿರದಿಂದ ಒಮ್ಮೆ ದೂರವಾದರೆ ನಂತರ ಮತ್ತೆ ಬರೋಕೆ ಸಮಯ ಹಿಡಿಯುತ್ತದೆ. ಕನ್ನಡತಿ ಧಾರಾವಾಹಿ ಶೂಟಿಂಗ್ ಬ್ಯಾಂಕಿಂಗ್ ಇದೆ. ಮತ್ತೆ ಲಾಕ್​ಡೌನ್ ವಿಸ್ತರಣೆ ಆದರೆ ಮುಂದೇನು ಎಂದು ಚಿಂತಿಸಬೇಕು ಎನ್ನುತ್ತಾರೆ ಕಿರಣ್.

ನೀವೂ ಸಹಾಯ ಮಾಡಬಹುದು
ಕಿರಣ್ ರಾಜ್ ಆರಂಭದಲ್ಲಿ ಯಾರೊಬ್ಬರ ಸಹಾಯವನ್ನೂ ಕೇಳಿಲ್ಲ. ಅವರದೇ ದುಡಿಮೆಯಲ್ಲಿ ಕಷ್ಟದಲ್ಲಿದ್ದವರಿಗೆ ನೆರವಾಗಿದ್ದಾರೆ. ಆದರೆ, ಈಗ ಅನೇಕರು ತಾವೇ ಮುಂದೆ ಬಂದು ಕಿರಣ್​ಗೆ ಬೆಂಬಲ ನೀಡಿದ್ದಾರೆ. ‘ಕೊರೊನಾ ಸಂದರ್ಭದಲ್ಲಿ ಎಲ್ಲರೂ ಅವರವರದೇ ಕಷ್ಟದಲ್ಲಿರುತ್ತಾರೆ. ಆದಾಗ್ಯೂ ಕೆಲವರು ಸಹಾಯ ಮಾಡಿದ್ದಾರೆ. kiranraj.me ವೆಬ್​ಸೈಟ್​ನಲ್ಲಿ ಸ್ಕ್ಯಾನರ್ ಇದೆ. ಅದರ ಮೂಲಕ ಯಾರು ಬೇಕಿದ್ದರೂ ಸಹಾಯ ಮಾಡಬಹುದು ಎಂದು ಕಿರಣ್ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ಕಡಿಮೆ ಆದ ನಂತರ ಮತ್ತೆ ಮುಂದುವರಿಯಲಿದೆ ಸೀಸನ್ 8? ಕೊನೇ ದಿನ ಸೂಚನೆ ಕೊಟ್ರು ಬಿಗ್ ಬಾಸ್