
ಝೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಮತ್ತು ಕುತೂಹಲ ಕೆರಳಿಸಿರುವ ‘ಕರ್ಣ’ ಧಾರಾವಾಹಿಯಲ್ಲಿ ಕೊನೆಗೂ ವೀಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಮಹಾ ತಿರುವು ಎದುರಾಗಿದೆ. ಕಥೆಯ ನಾಯಕ ಕರ್ಣ ಹಾಗೂ ನಿಧಿ ನಡುವಿನ ವಿವಾಹ ಮಹೋತ್ಸವವು ಹಿರಿಯರ ಸಮ್ಮುಖದಲ್ಲಿ ಅತ್ಯಂತ ನಾಟಕೀಯವಾಗಿ ಮತ್ತು ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈ ಮಹತ್ವದ ಬೆಳವಣಿಗೆಯು ಸೀರಿಯಲ್ ಪ್ರೇಕ್ಷಕರಲ್ಲಿ ಭಾರಿ ರೋಮಾಂಚನ ಉಂಟುಮಾಡಿದೆ.
ಈ ಹಿಂದೆ ಕಥೆಯಲ್ಲಿ ಕರ್ಣ ಮತ್ತು ನಿತ್ಯಾ ಮದುವೆ ನಡೆದಂತೆ ಬಿಂಬಿಸಲಾಗಿದ್ದರೂ, ಅದು ಕೇವಲ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ನಡೆದ ನಾಟಕವಾಗಿತ್ತೇ ಹೊರತು ಅಧಿಕೃತವಾಗಿರಲಿಲ್ಲ. ಕರ್ಣನ ನಿಜವಾದ ಪ್ರೀತಿ ನಿಧಿಯಾಗಿದ್ದರಿಂದ, ಇಬ್ಬರ ಮದುವೆ ಯಾವಾಗ ಆಗುತ್ತದೆ ಎಂಬ ತಳಮಳ ವೀಕ್ಷಕರಲ್ಲಿತ್ತು. ಈಗ ಆ ಎಲ್ಲಾ ಗೊಂದಲಗಳು ಹಾಗೂ ಅಡೆತಡೆಗಳಿಗೆ ಸಂಪೂರ್ಣವಾಗಿ ತೆರೆ ಬಿದ್ದಿದೆ. ವಿಶೇಷವೆಂದರೆ, ಸ್ವತಃ ನಿತ್ಯಾ ಸಮ್ಮುಖದಲ್ಲೇ ಕರ್ಣ ಮತ್ತು ನಿಧಿ ಇಬ್ಬರೂ ಹಸೆಮಣೆ ಏರಿ ಸಪ್ತಪದಿ ತುಳಿದಿದ್ದಾರೆ.
ಕರ್ಣ ತನ್ನ ಪ್ರೀತಿಯ ನಿಧಿಯ ಕೊರಳಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ಅವಳನ್ನು ತನ್ನ ಅಧಿಕೃತ ಧರ್ಮಪತ್ನಿಯನ್ನಾಗಿ ಸ್ವೀಕರಿಸಿದ್ದಾನೆ. ಇಡೀ ಕುಟುಂಬ ಸಡಗರದಿಂದ ಈ ಮದುವೆಯಲ್ಲಿ ಭಾಗಿಯಾಗಿದೆ.
ಕರ್ಣ-ನಿಧಿ ಕಲ್ಯಾಣ’ದ ಈ ವಿಶೇಷ ಸಂಚಿಕೆಯು ಜೀ ಕನ್ನಡದಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಈ ಶುಭ ಮುಹೂರ್ತದ ಬಳಿಕ ಇವರ ದಾಂಪತ್ಯ ಜೀವನದಲ್ಲಿ ಯಾವೆಲ್ಲಾ ಹೊಸ ಸವಾಲುಗಳು ಎದುರಾಗಲಿವೆ ಮತ್ತು ಕಥೆ ಯಾವ ಹೊಸ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ನಿತ್ಯಾಗೆ ಗೊತ್ತಾಯ್ತ ಪ್ರೀತಿಯ ಸತ್ಯ; ಕರ್ಣ-ನಿಧಿ ವಿವಾಹ ಮಾಡಿಸಲು ಮುಂದಾದ ಸಹೋದರಿ
ರಮೇಶ್ಗೆ ಈಗಾಗಲೇ ಕರ್ಣ ಹಾಗೂ ನಿಧಿ, ನಿತ್ಯಾ ಮೇಲೆ ದ್ವೇಷ ಇದೆ. ಮಗನ ಯಶಸ್ಸನ್ನು ಅವನು ಎಂದಿಗೂ ಸಹಿಸೋದಿಲ್ಲ. ಕರ್ಣ ಬೀದಿಯಲ್ಲಿ ಸಿಕ್ಕ ಮಗ ಎಂದು ಅವನು ಭಾವಿಸಿದ್ದಾನೆ. ಆದರೆ, ಕರ್ಣನೇ ಅವನ ನಿಜವಾದ ಮಗ ಎಂಬ ವಿಷಯ ಇನ್ನೂ ಆತನಿಗೆ ತಿಳಿದಿಲ್ಲ. ಅದು ತಿಳಿದ ಬಳಿಕ ಕಥೆಗೆ ಮತ್ತಷ್ಟು ತಿರುವು ಎದುರಾಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.