ಸಮಂತಾ, ನಾಗಾರ್ಜುನ ಬಗ್ಗೆ ಅಶ್ಲೀಲ ಹೇಳಿಕೆ ನೀಡಿ ವಿವಾದ ಎಬ್ಬಿಸಿದ ಸಚಿವೆ ಕೊಂಡ ಸುರೇಖಾ

|

Updated on: Oct 02, 2024 | 8:34 PM

ಮಾವ-ಸೊಸೆಯ ಬಗ್ಗೆ ಸಚಿವೆ ಕೊಂಡ ಸುರೇಖಾ ಅವರು ಕೀಳು ಮಟ್ಟದ ಹೇಳಿಕೆ ನೀಡಿದ್ದು, ಭಾರಿ ವಿವಾದಕ್ಕೆ ಕಾರಣ ಆಗಿದೆ. ಸಮಂತಾ ರುತ್​ ಪ್ರಭು ಬಗ್ಗೆ ಸುರೇಖಾ ನೀಡಿದ ಹೇಳಿಕೆಯನ್ನು ಅಕ್ಕಿನೇನಿ ನಾಗಾರ್ಜುನ ಅವರು ತೀವ್ರವಾಗಿ ಖಂಡಿಸಿದ್ದಾರೆ. ಅಕ್ಕಿನೇನಿ ಕುಟುಂಬದ ಅಭಿಮಾನಿಗಳು ಕೂಡ ಸುರೇಖಾ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ.

ಸಮಂತಾ, ನಾಗಾರ್ಜುನ ಬಗ್ಗೆ ಅಶ್ಲೀಲ ಹೇಳಿಕೆ ನೀಡಿ ವಿವಾದ ಎಬ್ಬಿಸಿದ ಸಚಿವೆ ಕೊಂಡ ಸುರೇಖಾ
ಕೊಂಡ ಸುರೇಖಾ, ಸಮಂತಾ, ನಾಗಾರ್ಜುನ
Follow us on

ತೆಲಂಗಾಣ ಅರಣ್ಯ ಸಚಿವೆ ಕೊಂಡ ಸುರೇಖಾ ಅವರು ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ಸಮಂತಾ ರುತ್​ ಪ್ರಭು, ನಾಗಾರ್ಜುನ ಮತ್ತು ನಾಗ ಚೈತನ್ಯ ಅವರ ಬಗ್ಗೆ ತೀರಾ ಅಸಭ್ಯ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಸಾರ್ವಜನಿಕವಾಗಿ ಕೊಂಡ ಸುರೇಖಾ ಆಡಿರುವ ಮಾತುಗಳಿಗೆ ಎಲ್ಲರಿಂದ ತೀವ್ರ ವಿರೋಧ್ಯ ವ್ಯಕ್ತವಾಗುತ್ತಿದೆ. ಕೆ.ಟಿ. ರಾಮ ರಾವ್​ ಅವರನ್ನು ವಿರೋಧಿಸುವ ಭರದದಲ್ಲಿ ಸುರೇಖಾ ಅವರು ಇಲ್ಲಸಲ್ಲದ ವಿಚಾರಗಳನ್ನು ಎಳೆದು ತಂದಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆಯಲು ಕೆ.ಟಿ. ರಾಮ ರಾವ್​ ಕಾರಣ ಎಂದು ಸುರೇಖಾ ಹೇಳಿದ್ದಾರೆ.

‘ಎನ್ ಕನ್ವೆನ್ಷನ್​ನ ಒಡೆಯಬಾರದು ಎಂದರೆ ಸಮಂತಾನ ನನ್ನ ಬಳಿ ಕಳಿಸಿ ಅಂತ ನಾಗಾರ್ಜುನಗೆ ಕೆ.ಟಿ. ರಾಮ ರಾವ್ ಹೇಳಿದ್ದರು. ಕೆ.ಟಿ. ರಾಮ ರಾವ್ ಬಳಿ ಹೋಗು ಅಂತ ಸಮಂತಾಗೆ ನಾಗಾರ್ಜನ ಒತ್ತಾಯ ಮಾಡಿದರು. ಆದರೆ ಸಮಂತಾ ಒಪ್ಪಿಕೊಳ್ಳಲಿಲ್ಲ. ಒಪ್ಪದಿದ್ದರೆ ಮನೆ ಬಿಟ್ಟುಹೋಗು ಅಂತ ನಾಗಾರ್ಜುನ ಹೇಳಿದರು. ಅದಕ್ಕಾಗಿ ನಾಗ ಚೈತನ್ಯಗೆ ಸಮಂತಾ ಡಿವೋರ್ಸ್​ ನೀಡಿದರು’ ಎಂದು ಕೊಂಡ ಸುರೇಖಾ ಹೇಳಿದ್ದಾರೆ.

ಕೊಂಡ ಸುರೇಖಾ ಹೇಳಿದ ಈ ಮಾತಿನಿಂದ ನಾಗಾರ್ಜುನ ಅವರು ಗರಂ ಆಗಿದ್ದಾರೆ. ‘ಗೌರವಾನ್ವಿತ ಸಚಿವೆ ಕೊಂಡ ಸುರೇಖಾ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಿಮ್ಮ ವಿರೋಧಿಗಳನ್ನು ಟೀಕಿಸಲು, ರಾಜಕೀಯದಿಂದ ದೂರ ಇರುವ ಸಿನಿಮಾ ತಾರೆಯರನ್ನು ಬಳಸಿಕೊಳ್ಳಬೇಡಿ. ಇನ್ನೊಬ್ಬರ ಖಾಸಗಿತನವನ್ನು ಗೌರವಿಸಿ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಮಹಿಳೆಯಾಗಿ ನಮ್ಮ ಕುಟುಂಬದ ಮೇಲೆ ನೀವು ಮಾಡಿದ ಆರೋಪಗಳು ಸಂಪೂರ್ಣ ತಪ್ಪು. ಕೂಡಲೇ ನಿಮ್ಮ ಹೇಳಿಕೆ ವಾಪಸ್ಸು ಪಡೆದುಕೊಳ್ಳಿ ಅಂತ ಮನವಿ ಮಾಡುತ್ತೇನೆ’ ಎಂದು ನಾಗಾರ್ಜುನ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ‘ಹೇಮಾ ಸಮಿತಿ ರೀತಿ ಟಾಲಿವುಡ್​ನಲ್ಲೂ ವರದಿ ಪ್ರಕಟವಾಗಲಿ’: ಸಮಂತಾ ಒತ್ತಾಯ

ಸುರೇಖಾ ನೀಡಿದ ಹೇಳಿಕೆಯಿಂದ ಎಲ್ಲರಿಗೂ ಶಾಕ್ ಆಗಿದೆ. ಇಷ್ಟು ದಿನ ಕಳೆದರೂ ಸಮಂತಾ ಮತ್ತು ನಾಗ ಚೈತನ್ಯ ಅವರ ವಿಚ್ಛೇದನಕ್ಕೆ ಕಾರಣ ಏನು ಎಂಬುದು ಬಹಿರಂಗ ಆಗಿಲ್ಲ. ಆ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಕುತೂಹಲ ಇದೆ. ಈ ನಡುವೆ ಕೊಂಡ ಸುರೇಖಾ ಅವರು ಇಂಥ ಹೇಳಿಕೆ ನೀಡಿದ್ದರಿಂದ ಅಕ್ಕಿನೇನಿ ಕುಟುಂಬಕ್ಕೆ ಅವಮಾನ ಮಾಡಿದಂತಾಗಿದೆ. ಈ ಬಗ್ಗೆ ನಾಗ ಚೈತನ್ಯ, ಸಮಂತಾ ಮತ್ತು ಕೆ.ಟಿ. ರಾಮ ರಾವ್​ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.