‘ಕಲ್ಕಿ 2898 ಎಡಿ’ ಸೀಕ್ವೆಲ್​ನಲ್ಲಿ ಏನಾಗಲಿದೆ? ಊಹೆ ಮಾಡಿದ ‘ಮಹಾಭಾರತ’ ನಟ

|

Updated on: Jul 08, 2024 | 10:58 PM

ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುತ್ತಿರುವ ಪ್ರಭಾಸ್‌ ನಟನೆಯ, ಫ್ಯಾಂಟಸಿ ಕಥಾಹಂದರದ ‘ಕಲ್ಕಿ 2898 ಎಡಿ’ ಸಿನಿಮಾಗೆ ಸೀಕ್ವೆಲ್​ ಕೂಡ ಬರಲಿದೆ. ಆ ಸೀಕ್ವೆಲ್​ನಲ್ಲಿ ಕಥೆ ಏನಾಗಬಹುದು ಎಂಬುದನ್ನು ‘ಮಹಾಭಾರತ’ ಧಾರಾವಾಹಿ ಖ್ಯಾತಿಯ ನಟ ನಿತೀಶ್ ಭಾರದ್ವಾಜ್ ಅವರು ಊಹಿಸಿದ್ದಾರೆ. ಸೀರಿಯಲ್​ನಲ್ಲಿ ಶ್ರೀಕೃಷ್ಣನ ಪಾತ್ರ ಮಾಡಿ ಫೇಮಸ್​ ಆಗಿದ್ದ ಅವರು ‘ಕಲ್ಕಿ 2898 ಎಡಿ’ ಸೀಕ್ವೆಲ್​ನಲ್ಲೂ ತಾವು ಆ ಪಾತ್ರ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

‘ಕಲ್ಕಿ 2898 ಎಡಿ’ ಸೀಕ್ವೆಲ್​ನಲ್ಲಿ ಏನಾಗಲಿದೆ? ಊಹೆ ಮಾಡಿದ ‘ಮಹಾಭಾರತ’ ನಟ
ಪ್ರಭಾಸ್​, ನಿತೀಶ್​ ಭಾರದ್ವಾಜ್​
Follow us on

ಕಳೆದ ವಾರವಷ್ಟೇ ಬಿಡುಗಡೆಗೊಂಡಿದ್ದ ನಾಗ ಅಶ್ವಿನ್‌ ನಿರ್ದೇಶನದ ‘ಕಲ್ಕಿ 2898 ಎಡಿ’ ಸಿನಿಮಾಗೆ ಜಗತ್ತಿನಾದ್ಯಂತ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರ ಜೊತೆಗೆ ಸಿನಿಮಾದ ಸೀಕ್ವೆಲ್ ಮೇಲೆ ಭಾರಿ ನಿರೀಕ್ಷೆಗಳು ಹುಟ್ಟುತ್ತಿವೆ. ಇವುಗಳ ನಡುವೆಯೇ 1988ರಲ್ಲಿ ಪ್ರಸಾರವಾದ ‘ಮಹಾಭಾರತ’ ಧಾರಾವಾಹಿ ನಟ ನಿತೀಶ್ ಭಾರದ್ವಾಜ್ ಅವರು ‘ಕಲ್ಕಿ 2898 ಎಡಿ’ ಸಿನಿಮಾವನ್ನು ನೋಡಿ ಬಹಳ ಮೆಚ್ಚಿಕೊಂಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಕೆಲವು ಇಂಟರೆಸ್ಟಿಂಗ್ ವಿವಾರಗಳನ್ನು ಹಂಚಿಕೊಂಡಿದ್ದಾರೆ.

‘ನಮ್ಮ ಪುರಾಣ ಕಥೆಯನ್ನು ಬಹಳ ಬುದ್ಧಿವಂತಿಕೆಯಿಂದ ಈಗಿನ ಕಾಲಕ್ಕೆ ಹೊಂದಾಣಿಕೆ ಆಗುವಂತೆ ಈ ಸಿನಿಮಾದಲ್ಲಿ ಚಿತ್ರಿಸಿದ್ದಾರೆ. ದಕ್ಷಿಣದವರು ಸಿನಿಮಾ ಮಾಡುವುದನ್ನು ನೋಡಿ ಬಾಲಿವುಡ್‌ ಮಂದಿ ಕಲಿಯಬೇಕು. ‘ಕಲ್ಕಿ 2898 ಎಡಿ’ ಸಿನಿಮಾಕ್ಕಾಗಿ ನಿರ್ದೇಶಕ ನಾಗ ಅಶ್ವಿನ್‌ ಅವರು ‘ಮ್ಯಾಡ್ ಮ್ಯಾಕ್ಸ್’ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಅನೇಕ ದೃಶ್ಯಗಳನ್ನು ನಿರ್ಮಿಸಿರುವುದಂತೂ ಹೌದು. ಆದರೂ ಈ ಸಿನಿಮಾ ವಿಭಿನ್ನವಾಗಿದೆ ಏಕೆಂದರೆ, ಈ ಸಿನಿಮಾದ ಸೆಟ್‌ ಮತ್ತು ನಿರ್ಮಾಣವೂ ಕಥೆಗಿಂತ ಹೆಚ್ಚು ಮಹತ್ವ ಅನ್ನಿಸಲಿಲ್ಲʼ ಎಂದು ನಿತೀಶ್ ಹೇಳಿದ್ದಾರೆ.

ಇದಷ್ಟೇ ಅಲ್ಲದೆ, ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್‌ನಲ್ಲಿ ಏನಾಗಬಹುದು ಎಂಬುದನ್ನು ಊಹಿಸಿರುವ ನಿತೀಶ್‌ ಅವರು ‘ಕರ್ಣನ ಪಾತ್ರ ಅಂದರೆ ಪ್ರಭಾಸ್‌ ಮುಂದಿನ ಅಧ್ಯಾಯದಲ್ಲಿ ಮರಣ ಹೊಂದಬಹುದು. ಅಶ್ವತ್ಥಾಮ ಮತ್ತು ಕೃಷ್ಣನು ಕರ್ಣನಿಗೆ ಮುಕ್ತಿಯ ಮಾರ್ಗ ತೋರಿಸುವುದರಿಂದ, ಕರ್ಣ ಮರಣ ಹೊಂದಬಹುದು. ನಾಗ್‌ ಅಶ್ವಿನ್‌ ಅವರು ಸೀಕ್ವೆಲ್‌ನಲ್ಲಿ ಕೃಷ್ಣನ ಮುಖವನ್ನು ಮರೆಮಾಡುವ ಅಗತ್ಯವಿಲ್ಲ. ನಾನು ಲಭ್ಯವಿದ್ದೇನೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್ ಮಾತು

ಇತ್ತೀಚೆಗೆ ನಿರ್ದೇಶಕ ನಾಗ್‌ ಅಶ್ವಿನ್‌ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಕೃಷ್ಣನ ಪಾತ್ರದ ಕುರಿತು ಮಾತನಾಡಿದ್ದು, ‘ಕೃಷ್ಣನು ನಿರಾಕಾರನು ಮತ್ತು ಅವನನ್ನು ನೆರಳಿನ ರೀತಿಯಲ್ಲಿಯೇ ತೋರಿಸಬೇಕು ಎನ್ನುವುದು ನಮ್ಮ ನಿಲುವಾಗಿತ್ತು. ಇಲ್ಲದಿದ್ದರೆ, ಆ ಪಾತ್ರ ಕೇವಲ ವ್ಯಕ್ತಿ ಅಥವಾ ನಟ ಆಗಿರುತ್ತದೆ. ನಮ್ಮ ಕಲ್ಪನೆ ಇದಿದ್ದು, ಕೃಷ್ಣನನ್ನು ಕಪ್ಪುವರ್ಣದವನಾಗಿ ಮತ್ತು ಸಿಲೋಟ್‌ನಲ್ಲಿ ತೋರಿಸುವುದೇ ಆಗಿತ್ತು. ನಿಗೂಢ ವ್ಯಕ್ತಿಯ ತರಹ. ಹಾಗಾಗಿ ಕೃಷ್ಣನ ಪಾತ್ರಕ್ಕೆ ನಟನನ್ನು ಆಯ್ಕೆ ಮಾಡುವುದು ನಮ್ಮ ನಿಲುವಿನ ವಿರುದ್ಧವಾಗುತ್ತದೆʼ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:55 pm, Mon, 8 July 24