ಕನ್ನಡ ಸಿನಿಮಾಕ್ಕೆ ಶುಭ ಕೋರಿದ ಪದ್ಮವಿಭೂಷಣ ಮೆಗಾಸ್ಟಾರ್ ಚಿರಂಜೀವಿ

Chiranjeevi: ಇತ್ತೀಚೆಗಷ್ಟೆ ಪದ್ಮವಿಭೂಷಣ ಗೌರವ ಪಡೆದಿರುವ ಮೆಗಾಸ್ಟಾರ್ ಚಿರಂಜೀವಿ, ಕನ್ನಡ ಸಿನಿಮಾ ‘ಆರಾಮ್ ಅರವಿಂದ ಸ್ವಾಮಿ’ಗೆ ಶುಭ ಹಾರೈಸಿದ್ದಾರೆ.

ಕನ್ನಡ ಸಿನಿಮಾಕ್ಕೆ ಶುಭ ಕೋರಿದ ಪದ್ಮವಿಭೂಷಣ ಮೆಗಾಸ್ಟಾರ್ ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ

Updated on: Jan 30, 2024 | 7:10 PM

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಇತ್ತೀಚೆಗಷ್ಟೆ ಭಾರತದ ಎರಡನೇ ಅತ್ಯುತ್ತಮ ನಾಗರೀಕ ಪ್ರಶಸ್ತಿ ಪದ್ಮ ವಿಭೂಷಣಕ್ಕೆ ಭಾಜನರಾಗಿದ್ದಾರೆ. ಚಿರಂಜೀವಿ ಅವರಿಗೆ ಕನ್ನಡ ಚಿತ್ರರಂಗದೊಂದಿಗೆ ದಶಕಗಳಿಂದಲೂ ನಂಟಿದೆ. ಕನ್ನಡದ ‘ಸಿಪಾಯಿ’ ಹಾಗೂ ‘ಶ್ರೀ ಮಂಜುನಾಥ’ ಸಿನಿಮಾಗಳಲ್ಲಿ ಚಿರಂಜೀವಿ ನಟಿಸಿದ್ದಾರೆ. ಕನ್ನಡದ ಕೆಲವು ಸಿನಿಮಾ ಕಾರ್ಯಕ್ರಮಕ್ಕೆ ಅತಿಥಿಯಾಗಿಯೂ ಆಗಮಿಸಿದ್ದಾರೆ. ಇದೀಗ ಕನ್ನಡ ಸಿನಿಮಾ ಒಂದಕ್ಕೆ ಚಿರಂಜೀವಿ ಶುಭ ಹಾರೈಸಿದ್ದಾರೆ.

ನಟ ಮತ್ತು ನಿರ್ದೇಶಕ ಅನೀಶ್ ತೇಜೇಶ್ವರ್ ಕೆಲ ಕಮರ್ಶಿಯಲ್ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದರು. ಇದೀಗ ‘ಆರಾಮ್ ಅರವಿಂದ್ ಸ್ವಾಮಿ’ ಸಿನಿಮಾ ಮೂಲಕ ರೊಮ್ಯಾಂಟಿಕ್ ಹೀರೋ ಆಗಿದ್ದಾರೆ. ತಮ್ಮ ಸಿನಿಮಾದ ಪ್ರಚಾರ ಕಾರ್ಯ ಪ್ರಾರಂಭಿಸಿರುವ ಅನೀಶ್ ತೇಜೇಶ್ವರ್, ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಭೇಟಿಯಾಗಿದ್ದಾರೆ. ಚಿರಂಜೀವಿ ಅವರ ಹೈದ್ರಾಬಾದ್ ನಿವಾಸದಲ್ಲಿ ಭೇಟಿಯಾಗಿರುವ ಅವರು, ಮೆಗಾಸ್ಟಾರ್ ಗೆ ಶುಭಾಶಯ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಬಹುನಿರೀಕ್ಷಿತ ಆರಾಮ್ ಅರವಿಂದ ಸ್ವಾಮಿ ಚಿತ್ರದ ಕಂಟೆಂಟ್ ತೋರಿಸಿದ್ದಾರೆ. ಸಿನಿಮಾದ ಕಂಟೆಂಟ್ ನೋಡಿ ಮೆಚ್ಚಿಕೊಂಡ ಚಿರಂಜೀವಿ ಅನೀಶ್ ಚಿತ್ರಕ್ಕೆ ಶುಭ ಕೋರಿದ್ದಾರೆ.

ಅನೀಶ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾಗಿದ್ದ ಆರಾಮ್ ಅರವಿಂದ ಸ್ವಾಮಿ ಟೈಟಲ್ ಟ್ರ್ಯಾಕ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅರ್ಜುನ್ ಜನ್ಯ ಸಂಗೀತ, ನಾಗಾರ್ಜುನ್ ಶರ್ಮಾ ಸಾಹಿತ್ಯದ ಹಾಡಿಗೆ ಅನೀಶ್ ಹಾಗೂ ಬಳಗ ಉತ್ತಮವಾಗಿ ಸ್ಟೆಪ್ಸ್ ಹಾಕಿದ್ದಾರೆ. ಬಾಬಾ ಭಾಸ್ಕರ್ ಮಾಸ್ಟರ್ ಕೊರಿಯೋಗ್ರಾಫಿಯಲ್ಲಿ ಮೂಡಿಬಂದಿರುವ ಟೈಟಲ್ ಟ್ರ್ಯಾಕ್ ಯೂಟ್ಯೂಬ್​ನಲ್ಲಿ 10 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ.

ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ, ಧನ್ಯವಾದ ಹೇಳಿದ ನಟ

ತನ್ನ ಪ್ರಮೋಷನ್ ಕಂಟೆಂಟ್ ನಿಂದಲೇ ಈಗಾಗಲೇ ಸದ್ದು ಮಾಡುತ್ತಿರುವ ‘ಆರಾಮ ಅರವಿಂದ ಸ್ವಾಮಿ’ ಸಿನಿಮಾಗೆ ಅಭಿಷೇಕ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೂರನೇ ಸಿನಿಮಾ ಇದು. ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ‘ಆರಾಮ ಅರವಿಂದ ಸ್ವಾಮಿ’ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಸಜ್ಜಾಗಿದೆ.

‘ಅಕಿರ’ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನ ಚಿತ್ರಕ್ಕಿದೆ. ಆದಷ್ಟು ಶೀಘ್ರವೇ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us