Drishya 2 Movie Review: ಕೊನೇ ದೃಶ್ಯದವರೆಗೂ ಕೊಲೆ ಕೌತುಕ; ಈ ಬಾರಿ ಕ್ಲೈಮ್ಯಾಕ್ಸ್​ ಇನ್ನಷ್ಟು ರೋಚಕ

|

Updated on: Dec 10, 2021 | 4:18 PM

Ravichandran | Drishya 2 Movie: ರಾಜೇಂದ್ರ ಪೊನ್ನಪ್ಪನ ಕುಟುಂಬದ ಮೇಲೆ ಇರುವ ಕೊಲೆ ಕೇಸ್​ 7 ವರ್ಷಗಳ ಬಳಿಕ ‘ದೃಶ್ಯ 2’ ಚಿತ್ರದಲ್ಲಿ ರೀ-ಓಪನ್​ ಆಗುತ್ತದೆ. ಮೊದಲಿಗಿಂತಲೂ ಹೆಚ್ಚು ಚಾಲೆಂಜ್​ಗಳನ್ನು ಕಥಾನಾಯಕ ಎದುರಿಸಬೇಕಾಗುತ್ತದೆ.

Drishya 2 Movie Review: ಕೊನೇ ದೃಶ್ಯದವರೆಗೂ ಕೊಲೆ ಕೌತುಕ; ಈ ಬಾರಿ ಕ್ಲೈಮ್ಯಾಕ್ಸ್​ ಇನ್ನಷ್ಟು ರೋಚಕ
‘ದೃಶ್ಯ 2’ ಕನ್ನಡ ಸಿನಿಮಾ
Follow us on

ಚಿತ್ರ: ದೃಶ್ಯ 2
ನಿರ್ಮಾಣ: ಮುಕೇಶ್​ ಮೆಹ್ತಾ, ಜೀ ಸ್ಡುಡಿಯೋಸ್​
ನಿರ್ದೇಶನ: ಪಿ. ವಾಸು
ಪಾತ್ರವರ್ಗ: ರವಿಚಂದ್ರನ್​, ನವ್ಯಾ ನಾಯರ್​, ಆರೋಹಿ ನಾರಾಯಣ್​, ಉನ್ನತಿ, ಪ್ರಮೋದ್​ ಶೆಟ್ಟಿ, ಅನಂತ್​ ನಾಗ್​, ಸಾಧುಕೋಕಿಲ ಮುಂತಾದವರು.
ಸ್ಟಾರ್​: 3.5/5

ರವಿಚಂದ್ರನ್​ ನಟನೆಯ ‘ದೃಶ್ಯ’ ಸಿನಿಮಾ 2014ರಲ್ಲಿ ಬಿಡುಗಡೆಯಾಗಿ ಮೋಡಿ ಮಾಡಿತ್ತು. ಒಂದು ಮರ್ಡರ್​ ಮಿಸ್ಟರಿ ಕಥೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರು ನಿರ್ದೇಶಕ ಪಿ. ವಾಸು. ರವಿಚಂದ್ರನ್​, ನವ್ಯಾ ನಾಯರ್​, ಆರೋಹಿ ನಾರಾಯಣ್​ ಮುಂತಾದವರು ನಟಿಸಿದ್ದ ಆ ಸಿನಿಮಾದ ಕ್ಲೈಮ್ಯಾಕ್ಸ್​ ನೋಡಿ ಪ್ರೇಕ್ಷಕರು ಅಚ್ಚರಿಪಟ್ಟಿದ್ದರು. ಈಗ ಆ ಚಿತ್ರದ 2ನೇ ಪಾರ್ಟ್​ ರಿಲೀಸ್​ ಆಗಿದೆ. ‘ದೃಶ್ಯ 2’ ಸಿನಿಮಾದಲ್ಲೂ ಅದೇ ಪಾತ್ರಧಾರಿಗಳು ಮುಂದುವರಿದಿದ್ದಾರೆ. ‘ದೃಶ್ಯ’ ಚಿತ್ರದ ಕ್ಲೈಮ್ಯಾಕ್ಸ್​ ನೋಡಿ ಹುಬ್ಬೇರಿಸಿದ್ದವರಿಗೆ ‘ದೃಶ್ಯ 2’ ಸಿನಿಮಾದ ಕ್ಲೈಮ್ಯಾಕ್ಸ್​ ಇನ್ನಷ್ಟು ಥ್ರಿಲ್​ ನೀಡಲಿದೆ. ಹಾಗಾದರೆ ಈ ಸಿನಿಮಾ ಒಟ್ಟಾರೆಯಾಗಿ ಹೇಗಿದೆ? ಈ ವಿಮರ್ಶೆ ಓದಿ..

ಗಟ್ಟಿಯಾದ ಕಥಾಹಂದರ:

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಇದು ಮಲಯಾಳಂ ಸಿನಿಮಾದ ರಿಮೇಕ್​. ಮಾಲಿವುಡ್​ನಲ್ಲಿ ನಿರ್ದೇಶಕ ಜೀತೂ ಜೋಸೆಫ್​ ಮಾಡಿದ ‘ದೃಶ್ಯಂ’ ಚಿತ್ರವನ್ನು ಕನ್ನಡಕ್ಕೆ ‘ದೃಶ್ಯ’ ಎಂದು ರಿಮೇಕ್​ ಮಾಡಲಾಗಿತ್ತು. ಈಗ ಮತ್ತದೇ ಜೀತೂ ಜೋಸೆಫ್​ ಅವರು ನಿರ್ದೇಶಿಸಿದ ‘ದೃಶ್ಯಂ 2’ ಸಿನಿಮಾವನ್ನು ಕನ್ನಡದಲ್ಲಿ ‘ದೃಶ್ಯ 2’ ಎಂದು ರಿಮೇಕ್​ ಮಾಡಲಾಗಿದೆ. ಈ ಚಿತ್ರದಲ್ಲಿನ ದೊಡ್ಡ ಶಕ್ತಿಯೇ ಜೀತೂ ಜೋಸೆಫ್​ ಬರೆದಿರುವ ಅದ್ಭುತವಾದ ಕಥೆ.

‘ದೃಶ್ಯ’ ಸಿನಿಮಾದಲ್ಲಿ ಪೊಲೀಸ್​ ರಾಣೆಯ ಒಳಗೆ ಹೆಣ ಹೂತಿಡುವ ಮೂಲಕ ರಾಜೇಂದ್ರ ಪೊನ್ನಪ್ಪ ತನ್ನ ಕುಟುಂಬವನ್ನು ಕಾಪಾಡಿದ್ದ. ಆದರೆ ‘ದೃಶ್ಯ 2’ ಸಿನಿಮಾದಲ್ಲಿ ಆ ಕೇಸ್​ ರೀ-ಓಪನ್​ ಆಗುತ್ತದೆ. ಈ ಬಾರಿ ರಾಜೇಂದ್ರ ಪೊನ್ನಪ್ಪನಿಗಿಂತಲೂ ಬುದ್ಧಿವಂತಿಕೆಯಿಂದ ಪೊಲೀಸರು ಕೆಲಸ ಮಾಡುತ್ತಾರೆ. ಅದಕ್ಕೆ ಎದುರಾಗಿ ರಾಜೇಂದ್ರ ಪೊನ್ನಪ್ಪ ಬೇರೆ ರೀತಿಯಲ್ಲಿ ಪ್ಲಾನ್​ ಮಾಡುತ್ತಾನೆ. ಹಾಗಾದರೆ ಆತ ಈ ಬಾರಿ ಸಿಕ್ಕಿಬೀಳುತ್ತಾನಾ ಅಥವಾ ತಪ್ಪಿಸಿಕೊಳ್ಳುತ್ತಾನಾ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಪೂರ್ತಿ ಸಿನಿಮಾ ನೋಡಬೇಕು.

‘ದೃಶ್ಯ’ಕ್ಕಿದೆ ತನ್ನತನದ ಫ್ಲೇವರ್​:

‘ದೃಶ್ಯ’ ಚಿತ್ರದಲ್ಲೊಂದು ಫ್ಲೇವರ್​ ಇತ್ತು. ಅದರ ಕಥಾನಾಯಕನ ಸ್ವಭಾವ ಎಲ್ಲರಿಗೂ ಇಷ್ಟವಾಗುವಂತಿತ್ತು. ಬಾಕಿ ಕಮರ್ಷಿಯಲ್​ ಹೀರೋಗಳಂತೆ ಆತ ವರ್ತಿಸುವುದಿಲ್ಲ. ಈಗ ‘ದೃಶ್ಯ 2’ ಸಿನಿಮಾದಲ್ಲೂ ಆ ಗುಣವನ್ನು ಕಾಯ್ದುಕೊಳ್ಳಲಾಗಿದೆ. ಪಾರ್ಟ್​ ಒಂದರಲ್ಲಿ ಇದ್ದ ನಿರೂಪಣಾ ಶೈಲಿಯನ್ನೇ ಎರಡನೇ ಪಾರ್ಟ್​ನಲ್ಲೂ ಮುಂದುವರಿಸಿರುವುದಕ್ಕೆ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಆಪ್ತವಾಗುತ್ತದೆ.

ಕಲಾವಿದರ ಅಭಿನಯಕ್ಕೆ ಮೆಚ್ಚುಗೆ:

ರವಿಚಂದ್ರನ್​ ಅವರು 7 ವರ್ಷಗಳ ಬಳಿಕ ರಾಜೇಂದ್ರ ಪೊನ್ನಪ್ಪನಾಗಿ ಆ ಪಾತ್ರವನ್ನು ಮತ್ತೊಮ್ಮೆ ಜೀವಿಸಿದ್ದಾರೆ. ಆರೋಹಿ ನಾರಾಯಣ್​, ನವ್ಯಾ ನಾಯರ್​, ಉನ್ನತಿ, ಆಶಾ ಶರತ್​, ಶಿವಾಜಿ ಪ್ರಭು ಮುಂತಾದವರ ಅಭಿನಯ ಕೂಡ ಮೆಚ್ಚುವಂತಿದೆ. ಈ ಬಾರಿ ಸಾಧುಕೋಕಿಲ ಅವರ ಕಾಮಿಡಿ ಸನ್ನಿವೇಶಗಳು ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ. ಗಂಭೀರ ಕಥೆಯ ನಡುವೆಯೂ ಅವರು ನಗು ಮೂಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ಚಿತ್ರತಂಡಕ್ಕೆ ಹೊಸದಾಗಿ ಸೇರಿಕೊಂಡಿರುವ ಪ್ರಮೋದ್​ ಶೆಟ್ಟಿ ಅವರು ಖಡಕ್​ ಪೊಲೀಸ್​ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅನಂತ್​ ನಾಗ್​ ಅವರ ಪಾತ್ರ ಕೂಡ ಕಥೆಗೆ ಬಹುಮುಖ್ಯ ತಿರುವು ನೀಡುತ್ತದೆ. ಚಿಕ್ಕ ಪಾತ್ರದಲ್ಲೂ ಸಂಪತ್​ ಕುಮಾರ್​ ಗಮನ ಸೆಳೆಯುತ್ತಾರೆ.

ತಾಂತ್ರಿಕವಾಗಿ ‘ದೃಶ್ಯ 2’ ಅಚ್ಚುಕಟ್ಟು:

ಸುರೇಶ್​ ಅರಸ್​ ಸಂಕಲನ, ಜಿಎಸ್​ವಿ ಸೀತಾರಾಮ್​ ಛಾಯಾಗ್ರಹಣ, ಅಜನೀಶ್​ ಬಿ. ಲೋಕನಾಥ್​ ಹಿನ್ನೆಲೆ ಸಂಗೀತದಿಂದಾಗಿ ‘ದೃಶ್ಯ 2’ ಸಿನಿಮಾದ ತಾಂತ್ರಿಕ ಗುಣಮಟ್ಟ ಹೆಚ್ಚಿದೆ. ಪಿ. ವಾಸು ತುಂಬ ಅಚ್ಚುಕಟ್ಟಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಮಲಯಾಳಂ ಸಿನಿಮಾವನ್ನು ಅವರು ಯಥಾವತ್ತಾಗಿ ಕನ್ನಡಕ್ಕೆ ರಿಮೇಕ್​ ಮಾಡಿದ್ದಾರೆ. ಕನ್ನಡದ ಸೊಗಡಿಗೆ ಈ ಕಥೆ ತುಂಬ ಚೆನ್ನಾಗಿ ಹೊಂದಿಕೊಂಡಿದೆ. ಮಲಯಾಳಂ ಅಥವಾ ತೆಲುಗಿನಲ್ಲಿ ಈಗಾಗಲೇ ಬಂದಿರುವ ‘ದೃಶ್ಯಂ​ 2’ ಚಿತ್ರವನ್ನು ನೋಡದೇ ಇರುವವರಿಗೆ ಕನ್ನಡ ‘ದೃಶ್ಯ 2’ ಸಖತ್​ ರೋಚಕ ಅನುಭವ ನೀಡಲಿದೆ. ಏನಾದರೂ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದರೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗುತ್ತಿತ್ತು.

ಇದನ್ನೂ ಓದಿ:

‘ರಾಜೇಂದ್ರ ಪೊನ್ನಪ್ಪ ಎಂಥಾ ಬುದ್ಧಿವಂತ ರೀ..’: ‘ದೃಶ್ಯ 2’ ಸಿನಿಮಾ ಬಗ್ಗೆ ರವಿಚಂದ್ರನ್​ ಮಾತು

ರವಿಚಂದ್ರನ್​ ಪುತ್ರ ಕನ್ನಡ ಸರಿಯಾಗಿ ಕಲಿತಿದ್ದು ಹೇಗೆ? ಮನುರಂಜನ್​ ನೀಡಿದ ವಿವರಣೆ ಇಲ್ಲಿದೆ..

Published On - 4:06 pm, Fri, 10 December 21