ನನ್ನಿಂದ ತಪ್ಪಾಗಿದೆ: ತ್ರಿಷಾ ಬಗ್ಗೆ ಮಾತನಾಡಿ ಕ್ಷಮೆ ಕೇಳಿದ ಬಿಜೆಪಿ ಮುಖಂಡ ನೈನಾರ್ ನಾಗೇಂದ್ರನ್

ಟಿವಿಕೆ ಪಕ್ಷದ ದಳಪತಿ ವಿಜಯ್ ಅವರನ್ನು ಟೀಕಿಸುವ ಭರದಲ್ಲಿ ನೈನಾರ್ ನಾಗೇಂದ್ರನ್ ನಾಲಿಗೆ ಹರಿಬಿಟ್ಟಿದ್ದರು. ‘ನಟಿ ತ್ರಿಷಾ ಮನೆಯಿಂದ ವಿಜಯ್ ಮೊದಲು ಹೊರಬರಲಿ’ ಎಂದು ನೈನಾರ್ ನಾಗೇಂದ್ರನ್ ಹೇಳಿದ್ದರು. ಎಲ್ಲ ಕಡೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ.

ನನ್ನಿಂದ ತಪ್ಪಾಗಿದೆ: ತ್ರಿಷಾ ಬಗ್ಗೆ ಮಾತನಾಡಿ ಕ್ಷಮೆ ಕೇಳಿದ ಬಿಜೆಪಿ ಮುಖಂಡ ನೈನಾರ್ ನಾಗೇಂದ್ರನ್
Thalapathy Vijay, Trisha Krishnan, Nainar Nagendran

Updated on: Feb 16, 2026 | 6:21 PM

ಖ್ಯಾತ ನಟಿ ತ್ರಿಷಾ (Trisha Krishnan) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಈಗ ಕ್ಷಮೆ ಕೇಳಿದ್ದಾರೆ. ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ (Thalapathy Vijay) ಬಗ್ಗೆ ಟೀಕೆ ಮಾಡುವಾಗ ನಾಗೇಂದ್ರನ್ ಅವರು ನಾಲಿಗೆ ಹರಿಬಿಟ್ಟಿದ್ದರು. ‘ವಿಜಯ್ ಅವರಿಗೆ ರಾಜಕೀಯದ ಅನುಭವ ಕಡಿಮೆ. ರಾಜಕೀಯದ ಅನುಭವ ಆಗಬೇಕಾದ್ರೆ ತ್ರಿಷಾ ಮನೆಯಿಂದ ವಿಜಯ್ ಹೊರಬರಲಿ’ ಎಂದು ನೈನಾರ್ ನಾಗೇಂದ್ರನ್ (Nainar Nagendran) ಹೇಳಿದ್ದರು. ಅವರ ಆ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಒಂದು ದಿನದ ಬಳಿಕ ಅವರು ಕ್ಷಮೆ ಕೇಳಿದ್ದಾರೆ.

ನೈನಾರ್ ನಾಗೇಂದ್ರನ್ ಅವರ ಹೇಳಿಕೆಗೆ ತಮಿಳುನಾಡಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಾಗೇಂದ್ರನ್ ಹೇಳಿಕೆಯನ್ನು ನಟಿ ತ್ರಿಷಾ ಕೃಷ್ಣನ್ ಅವರು ಕಟು ಶಬ್ದಗಳಲ್ಲಿ ಖಂಡಿಸಿದ್ದರು. ‘ಉನ್ನತ ಸ್ಥಾನದಲ್ಲಿರುವವರಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲ’ ಎಂದು ತ್ರಿಷಾ ಕೃಷ್ಣನ್ ಹೇಳಿದ್ದರು. ನೈನಾರ್ ನಾಗೇಂದ್ರನ್ ವಿರುದ್ಧ ಡಿಎಂಕೆ, ಕಾಂಗ್ರೆಸ್ ಕೂಡ ಆಕ್ರೋಶ ವ್ಯಕ್ತಪಡಿಸಿತ್ತು.

ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ ಎಂದು ಡಿಎಂಕೆ ನಾಯಕರು ಟೀಕಿಸಿದ್ದರು. ರಾಜಕೀಯ ಸಂಘರ್ಷದ ನಡುವೆ ತ್ರಿಷಾ ಹೆಸರು ಎಳೆದುತಂದಿದ್ದಕ್ಕೆ ಖಂಡನೆ ವ್ಯಕ್ತವಾಗಿತ್ತು. ಬಳಿಕ ಕೆ. ಅಣ್ಣಾಮಲೈ, ವಾನತಿ ಶ್ರೀನಿವಾಸನ್ ಅವರ ಸೂಚನೆ ಮೇರೆಗೆ ನೈನಾರ್ ನಾಗೇಂದ್ರನ್ ಕ್ಷಮೆ ಕೇಳಿದ್ದಾರೆ. ‘ನನ್ನ ಹೇಳಿಕೆ ತಪ್ಪು ಅರ್ಥದಿಂದ ಕೂಡಿದೆ’ ಎಂದು ನೈನಾರ್ ನಾಗೇಂದ್ರನ್ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್​ ಜತೆಗಿನ ‘ಲಿಯೋ’ ಚಿತ್ರದ ಸೆಟ್​ನಿಂದ ತ್ರಿಷಾ ವಾಪಸ್​ ಬಂದಿದ್ದೇಕೆ? ಇಲ್ಲಿದೆ ಅಸಲಿ ವಿಷಯ

‘ತಪ್ಪಾಗಿ ನಾನು ಹೇಳಿಕೆ ನೀಡಿದ್ದೆ. ಕೆ. ಅಣ್ಣಾಮಲೈ ಮತ್ತು ವಾನತಿ ಶ್ರೀನಿವಾಸನ್ ಅವರು ಈ ವಿಷಯದ ಬಗ್ಗೆ ನನ್ನ ಬಳಿ ಮಾತನಾಡಿದರು. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ’ ಎಂದು ನೈನಾರ್ ನಾಗೇಂದ್ರನ್ ಅವರು ಕ್ಷಮೆ ಯಾಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.