RGV: ‘ಗರುಡ ಗಮನ ವೃಷಭ ವಾಹನ’ ನೋಡಿ ಫಿದಾ ಆದ ರಾಮ್ ಗೋಪಾಲ್ ವರ್ಮಾ; ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಹೇಳಿದ್ದೇನು?

Garuda Gamana Vrishabha Vahana: ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಗರುಡ ಗಮನ ವೃಷಭ ವಾಹನ’ ಜೀ5ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಚಿತ್ರವನ್ನು ವಿಶೇಷವಾಗಿ ಹೊಗಳಿದ್ದಾರೆ.

RGV: ‘ಗರುಡ ಗಮನ ವೃಷಭ ವಾಹನ’ ನೋಡಿ ಫಿದಾ ಆದ ರಾಮ್ ಗೋಪಾಲ್ ವರ್ಮಾ; ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಹೇಳಿದ್ದೇನು?
‘ಗರುಡ ಗಮನ ವೃಷಭ ವಾಹನ’ ಸಿನಿಮಾ ಪೋಸ್ಟರ್​
Edited By:

Updated on: Jan 18, 2022 | 12:35 PM

ಗರುಡ ಗಮನ ವೃಷಭ ವಾಹನ’ ಚಿತ್ರ ಇದೀಗ ಜೀ5 ನಲ್ಲಿ ಪ್ರದರ್ಶನವಾಗುತ್ತಿದ್ದು, ದೇಶಾದ್ಯಂತ ಜನರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಚಿತ್ರದ ಕುರಿತು ಮೆಚ್ಚುಗೆಯ ಮಹಾಪೂರ ಹರಿಸುತ್ತಿದ್ದಾರೆ. ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಚಿತ್ರವನ್ನು ನೋಡಿದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಫಿದಾ ಆಗಿದ್ದು, ಚಿತ್ರತಂಡಕ್ಕೆ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಶಹಬ್ಬಾಸ್​ಗಿರಿ ನೀಡಿದ್ದಾರೆ. ಟ್ವಿಟರ್​​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಚಿತ್ರವನ್ನು, ರಾಜ್ ಬಿ ಶೆಟ್ಟಿ ಅಭಿನಯವನ್ನು ಹೊಗಳಲು ವಿನೂತನ ಪದಪುಂಜಗಳನ್ನು ಬಳಸಿದ್ದಾರೆ. ಚಿತ್ರ ಮತ್ತೊಂದು ಲೆವೆಲ್​ನಲ್ಲಿದೆ (stratospheric) ಎಂದಿರುವ ರಾಮ್ ಗೋಪಾಲ್ ವರ್ಮಾ, ರಾಜ್ ಬಿ ಶೆಟ್ಟಿ ಪಾತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಈ ಮೂಲಕ ಅವರು ಸಂಪೂರ್ಣ ರೂಪಾಂತರ (metamorphic) ಹೊಂದಿದ್ದಾರೆ ಎಂದಿದ್ದಾರೆ ಆರ್​ಜಿವಿ. ಅಲ್ಲದೇ ಇಡೀ ಚಿತ್ರ ‘ಅಲ್ಟ್ರಾಸ್ಕೋಪಿಕ್’ (ULTRASCOPIC) ಎಂದು ಹಾಡಿಹೊಗಳಿದ್ದಾರೆ.

ರಾಮ್ ಗೋಪಾಲ್ ವರ್ಮಾ ಟ್ವೀಟ್ ಇಲ್ಲಿದೆ:

ಕೆಲ ಸಮಯದ ಹಿಂದೆ ಬಾಲಿವುಡ್​ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ‘ಗರುಡ ಗಮನ..’ವನ್ನು ಇಷ್ಟಪಟ್ಟಿದ್ದರು. ಚಿತ್ರಕ್ಕೆ ಐದಕ್ಕೆ ನಾಲ್ಕೂವರೆ ಸ್ಟಾರ್​ಗಳನ್ನು ಅವರು ನೀಡಿದ್ದರು. ರಾಮ್ ಗೋಪಾಲ್ ವರ್ಮಾ ಹಾಗೂ ಅನುರಾಗ್ ಕಶ್ಯಪ್ ಇಬ್ಬರೂ ಗ್ಯಾಂಗ್​ಸ್ಟರ್ ಮಾದರಿಯ ಕ್ರೈಂ ಸಿನಿಮಾಗಳನ್ನು ನಿರ್ದೇಶಿಸಿ ಜನಪ್ರಿಯತೆ ಪಡೆದವರು. ಈರ್ವರೂ ಮೆಚ್ಚುಗೆ ಸೂಚಿಸಿದ ‘ಗರುಡ ಗಮನ…’ ಇದೀಗ ಮತ್ತೆ ದೇಶಾದ್ಯಂತ ಸುದ್ದಿಯಾಗಿದೆ.

ಜೀ5ನಲ್ಲಿ ದಾಖಲೆಯ ವೀಕ್ಷಣೆ:
ಜನವರಿ 13ರಂದು ಒಟಿಟಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ರಿಲೀಸ್​ ಆಗಿತ್ತು. ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 8 ಕೋಟಿ ನಿಮಿಷಗಳ ವೀಕ್ಷಣೆ ಕಂಡಿದೆ. ಈ ಮೂಲಕ ಭಾರೀ ಜನಮನ್ನಣೆ ಪಡೆದು ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.

‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ರಾಜ್​ ಬಿ. ಶೆಟ್ಟಿ, ರಿಷಬ್​ ಶೆಟ್ಟಿ ಅವರೊಂದಿಗೆ ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು ಕಾಣಿಸಿಕೊಂಡಿದ್ದಾರೆ. ಕಾಫಿ ಗ್ಯಾಂಗ್​ ಸ್ಡುಡಿಯೋ, ಲೈಟರ್​ ಬುದ್ಧ ಫಿಲ್ಮ್ಸ್​ ಬ್ಯಾನರ್​ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಪ್ರವೀಣ್​ ಶ್ರಿಯಾನ್ ಛಾಯಾಗ್ರಹಣ, ಮಿಥುನ್​ ಮುಕುಂದನ್​ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ಇದನ್ನೂ ಓದಿ:

ಒಟಿಟಿಯಲ್ಲೂ ಧೂಳೆಬ್ಬಿಸಿದ ‘ಗರುಡ ಗಮನ ವೃಷಭ ವಾಹನ’ ಚಿತ್ರ

Sreeja: ಚಿರಂಜೀವಿ ಕಿರಿಯ ಪುತ್ರಿಯ ವೈವಾಹಿಕ ಜೀವನದಲ್ಲಿ ಬಿರುಕು? ವದಂತಿಗೆ ಪುಷ್ಠಿ ನೀಡಿದ ಶ್ರೀಜಾ ನಡೆ