
ಭಾರತ ಚಿತ್ರರಂಗದ ಇತಿಹಾಸ ಬರೆದಲ್ಲಿ, ‘ಬಾಹುಬಲಿ’ಗೆ ಮೊದಲು, ‘ಬಾಹುಬಲಿ’ಯ ನಂತರ ಎಂದು ಬರೆಯಬೇಕಾಗುತ್ತದೆ. ರಾಜಮೌಳಿ (Rajamouli) ನಿರ್ದೇಶನದ ಈ ಸಿನಿಮಾಗಳು ಭಾರತೀಯ ಸಿನಿಮಾ ಇತಿಹಾಸದಲ್ಲಿ ಅಷ್ಟು ಪ್ರಾಮುಖ್ಯತೆ ಪಡೆದುಕೊಂಡಿವೆ. ನಟ ಪ್ರಭಾಸ್, ‘ಬಾಹುಬಲಿ’ ಸಿನಿಮಾದ ಬಳಿಕ ಸಂಪೂರ್ಣ ಬದಲಾದರು. ಅವರ ಸಿನಿಮಾಗಳ ಆಯ್ಕೆಯ ವಿಧಾನ, ಅವರ ಸ್ಟಾರ್ಡಮ್, ಬೇಡಿಕೆ, ಅವರು ವರ್ತಿಸುವ ರೀತಿ ಎಲ್ಲವೂ ಬದಲಾಯ್ತು. ಇದೀಗ ‘ಬಾಹುಬಲಿ: ದಿ ಟಾರ್ಚ್ ಬೇರರ್’ ಡಾಕ್ಯುಮೆಂಟರಿಯಲ್ಲಿ ಮಾತನಾಡಿರುವ ಪ್ರಭಾಸ್, ‘ಬಾಹುಬಲಿ’ ಸಿನಿಮಾದ ಬಳಿಕ ತಾವು ಒತ್ತಡಕ್ಕೆ ಸಿಲುಕಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
‘ಬಾಹುಬಲಿ’ ಚಿತ್ರದ ಯಶಸ್ಸಿನ ನಂತರ ತಮ್ಮ ಮುಂದಿನ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಅತೀವ ಒತ್ತಡಕ್ಕೆ ಸಿಲುಕಿದ್ದರಂತೆ. ‘ಬಾಹುಬಲಿ’ ಮೂಲಕ ಅತಿ ದೊಡ್ಡ ಯಶಸ್ಸು ಕಂಡಿದ್ದ ಪ್ರಭಾಸ್ಗೆ ತಮ್ಮ ಮುಂದಿನ ಸಿನಿಮಾ ಆಗಿ ಯಾವ ರೀತಿಯ ಕತೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಸಹ ಗೊತ್ತಾಗಿರಲಿಲ್ಲವಂತೆ. ಈ ಚಿತ್ರದ ಯಶಸ್ಸಿನಿಂದಾಗಿ ತಮಗೆ ಉಂಟಾದ ಒತ್ತಡ ಮತ್ತು ಆತಂಕದಿಂದಾಗಿ ಸುಮಾರು ಎರಡರಿಂದ ಮೂರು ವರ್ಷಗಳ ಕಾಲ ಸರಿಯಾಗಿ ನಿದ್ದೆ ಸಹ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.
‘ಬಾಹುಬಲಿ’ ನಂತರ ಜೀವನ ಗೊಂದಲಮಯವಾಗಿತ್ತು ಎಂಬುದನ್ನು ನಟ ಪ್ರಭಾಸ್ ವಿವರಿಸಿದ್ದಾರೆ. ‘ಬಾಹುಬಲಿ’ ಸಿನಿಮಾದ ವ್ಯಾಪ್ತಿಯು ತೆಲುಗು ಚಿತ್ರರಂಗದ ವ್ಯವಹಾರವನ್ನೇ ರಾತ್ರೋರಾತ್ರಿ ಬದಲಾಯಿಸಿತು. ಇಷ್ಟು ದೊಡ್ಡ ಯಶಸ್ಸಿನ ನಂತರ ಏನು ಮಾಡಬೇಕು ಎಂಬ ಗೊಂದಲದಲ್ಲಿ ತಾನು ಹಲವು ವರ್ಷಗಳ ಕಾಲ ನಿದ್ರೆಯಿಲ್ಲದೆ ಕಷ್ಟಪಟ್ಟಿದ್ದಾಗಿ ಅವರು ಹೇಳಿದ್ದಾರೆ.
‘ಬಾಹುಬಲಿ’ ತನ್ನ ವೃತ್ತಿಜೀವನದ ಮೇಲೆ ಬೀರಿದ ಪ್ರಭಾವದ ಬಗ್ಗೆಯೂ ಮಾತನಾಡಿದ ಪ್ರಭಾಸ್, ‘ಬಾಹುಬಲಿ’ ಬಳಿಕ ತಮ್ಮ ಮುಂದಿನ ಚಿತ್ರ ‘ಸಾಹೋ’ ಉತ್ತರ ಭಾರತದಲ್ಲಿ ಪಡೆದ ಓಪನಿಂಗ್ ಕಲೆಕ್ಷನ್ ಅನ್ನು ಪ್ರಭಾಸ್ ಉಲ್ಲೇಖಿಸಿದ್ದಾರೆ. ‘ಉತ್ತರ ಭಾರತದಲ್ಲಿ ‘ಸಾಹೋ’ ಚಿತ್ರದ ಮೊದಲ ದಿನದ ಗಳಿಕೆ ಸುಮಾರು 26 ಕೋಟಿ ರೂ. ಆಗಿತ್ತು’, ಇದು ಬಲು ದೊಡ್ಡ ಸಂಖ್ಯೆ. ಆ ಸಮಯದಲ್ಲಿ ಈ ಅಂಕಿಅಂಶವು ನಿಜಕ್ಕೂ ಆಘಾತಕಾರಿ ಆಗಿತ್ತು, ಈ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ‘ಬಾಹುಬಲಿ’ಗೆ ಸಲ್ಲಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ:‘ವಾರಣಾಸಿ’ ದೃಶ್ಯಕ್ಕಾಗಿ ಮಹೇಶ್ ಬಾಬುಗೆ 100 ಟೇಕ್; ಸಿಟ್ಟು ಬಂದು ಪ್ಯಾಕಪ್ ಎಂದ ರಾಜಮೌಳಿ
“ಇದು ಕೇವಲ ಬಾಹುಬಲಿಯ ಕಾರಣದಿಂದಲೇ ಸಂಭವಿಸಿತು. ಇದರಲ್ಲಿ ಬೇರೆ ಏನೂ ಇಲ್ಲ. ಯಾವುದೇ ಭಾಷೆಯಲ್ಲಿ ಮೊದಲ ದಿನದ ಗಳಿಕೆ ಬಂದಿದ್ದರೆ ಅದು ಕೇವಲ ‘ಬಾಹುಬಲಿ’ಯ ಕಾರಣದಿಂದ ಮಾತ್ರ. ‘ಸಾಹೋ’, ‘ರಾಧೇಶ್ಯಾಮ್’ ಚಿತ್ರದ ಹಡಗು ಸನ್ನಿವೇಶ ಮತ್ತು ಆ ನಂತರ ತಾವು ಮಾಡಿದ ಪ್ರತಿಯೊಂದು ಚಿತ್ರದ ಬಜೆಟ್ ಕೂಡ ‘ಬಾಹುಬಲಿ’ಯ ಯಶಸ್ಸಿನಿಂದ ಸಿಕ್ಕ ಆರ್ಥಿಕ ಸ್ವಾತಂತ್ರ್ಯದಿಂದಲೇ ಸಾಧ್ಯವಾಯಿತು ಎಂದು ಅವರು ತಿಳಿಸಿದರು. ಅದಕ್ಕೂ ಮುನ್ನ ತಮ್ಮ ಚಿತ್ರಗಳು ಸಾಮಾನ್ಯವಾಗಿ 20 ರಿಂದ 40 ಕೋಟಿ ರೂ ಬಜೆಟ್ನಲ್ಲಿ ನಡೆಯುತ್ತಿದ್ದವು ಎಂದು ಅವರು ಒಪ್ಪಿಕೊಂಡಿದ್ದಾರೆ.
‘ಬಾಹುಬಲಿ’ ನಂತರದ ಅವಧಿಯನ್ನು ತಮ್ಮ ವೃತ್ತಿಜೀವನದ ಅತ್ಯಂತ ಒತ್ತಡದ ದಿನಗಳೆಂದು ಪ್ರಭಾಸ್ ಬಣ್ಣಿಸಿದ್ದು, ’ಮುಂದೆ ಏನು ಮಾಡಬೇಕು? ಬಾಹುಬಲಿಯಂತಹ ಹೈ-ಪ್ಯಾಕ್ಡ್ ಡ್ರಾಮಾನಾ? ಅಥವಾ ಹೆಚ್ಚು ದೃಶ್ಯ ವೈಭವದ ಚಿತ್ರವೇ? ಆದರೆ ಅದು ರಾಜಮೌಳಿ ಅವರ ಶೈಲಿಯಾ ಎಂದು ನಿರ್ಣಯಿಸುವುದೇ ಕಷ್ಟವಾಗಿತ್ತು. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ತಂಡವು ಹಲವಾರು ವಿಭಿನ್ನ ದಾರಿಗಳನ್ನು ಯೋಚಿಸಿತು. ‘ನಾವು ಚಿತ್ರಕಥೆ ಆಧಾರಿತ ಚಿತ್ರವನ್ನು ಮಾಡಬೇಕೆಂದುಕೊಂಡಿದ್ದೆವು. ನಂತರ ಪ್ರೇಮಕಥೆಯನ್ನು ಮಾಡೋಣ ಎಂದುಕೊಂಡೆವು. ಪ್ರಶಾಂತ್ ನೀಲ್ ಮತ್ತು ನಾಗ್ ಅಶ್ವಿನ್ ಅವರೊಂದಿಗೆ ಚರ್ಚೆಗಳು ನಡೆದಿದ್ದವು’ ಎಂದು ಅವರು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ