
ನವದೆಹಲಿ: ಇಂಟರ್ನೆಟ್ನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ‘370 ರೂಪಾಯಿ ಬಿರಿಯಾನಿ’ (Rs 370 Biryani) ವಿವಾದಕ್ಕೆ ಸಂಬಂಧಿಸಿದಂತೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪ್ರಣೀತ್ ಮೋರೆ ಹಾಗೂ ಹಿಮಾಂಶು ಜಾಂಗ್ರಾ ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾಗಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಹಂಚಿಕೊಂಡಿರುವ ವಿಡಿಯೋದಲ್ಲಿ, ಆಯೋಗದ ಕಚೇರಿಗೆ ಆಗಮಿಸಿದ ಪ್ರಣೀತ್ ಮೋರೆ (Pranit More) ಮಾಸ್ಕ್ ಧರಿಸಿದ್ದು, ಮಾಧ್ಯಮ ಪ್ರತಿನಿಧಿಗಳು ಕೇಳಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ ಮೌನವಾಗಿ ಕಚೇರಿಯೊಳಗೆ ಹೆಜ್ಜೆ ಹಾಕಿದ್ದಾರೆ. ಜೂನ್ 22ರ ಸಂಜೆ 4 ಗಂಟೆಗೆ ಇಬ್ಬರ ವಿಚಾರಣೆಯನ್ನು ಆಯೋಗ ನಿಗದಿಪಡಿಸಿತ್ತು.
ಕಾಮಿಡಿ ಶೋಗಳಲ್ಲಿ ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಮತ್ತು ಅತ್ಯಾಚಾರ, ಕೊಲೆಯಂತಹ ಗಂಭೀರ ಅಪರಾಧಗಳನ್ನು ಮನರಂಜನೆಯ ವಸ್ತುವನ್ನಾಗಿ ಬಿಂಬಿಸುವ ಪ್ರವೃತ್ತಿಯ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ. ಮೂಲಗಳ ಪ್ರಕಾರ, ಆಯೋಗದ ಮುಂದೆ ಇಬ್ಬರೂ ಕ್ಷಮೆಯಾಚಿಸಿದರಾದರೂ, ಆಯೋಗ ಅದನ್ನು ತಿರಸ್ಕರಿಸಿದೆ ಎನ್ನಲಾಗಿದೆ.
ವಿಚಾರಣೆ ವೇಳೆ ಆಯೋಗದ ಅಧ್ಯಕ್ಷೆ ವಿಜಯಾ ರಾಹತ್ಕರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ‘ಸೃಜನಶೀಲ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆಯೋಗ ಬೆಂಬಲಿಸುತ್ತದೆ. ಆದರೆ, ಕಾಮಿಡಿ ಹೆಸರಿನಲ್ಲಿ ಮಹಿಳೆಯರ ಘನತೆಗೆ ಧಕ್ಕೆ ತರುವುದನ್ನು ಅಥವಾ ಗಂಭೀರ ಅಪರಾಧಗಳನ್ನು ಸಾಮಾನ್ಯೀಕರಿಸುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಕಡಕ್ ಸಂದೇಶ ನೀಡಿದ್ದಾರೆ.
ಜೂನ್ ತಿಂಗಳ ಆರಂಭದಲ್ಲಿ ಪ್ರಣೀತ್ ಮೋರೆ ಅವರ ಕಾಮಿಡಿ ಶೋ ಒಂದರಲ್ಲಿ ಪ್ರೇಕ್ಷಕರ ಸಾಲಿನಲ್ಲಿದ್ದ ಹಿಮಾಂಶು ಜಾಂಗ್ರಾ ಎಂಬ 23 ವರ್ಷದ ಯುವಕನು ಮಹಿಳೆಯರ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದ. ‘ನಾನು ಯುವತಿಯೊಬ್ಬಳನ್ನು ಡೇಟ್ಗೆ ಕರೆದೊಯ್ದು 370 ರೂಪಾಯಿ ನೀಡಿ ಚಿಕನ್ ಬಿರಿಯಾನಿ ಕೊಡಿಸಿದ್ದೆ. ಹಾಗಾಗಿ ಆ ಹೂಡಿಕೆಗೆ ನನಗೆ ಲಾಭ ಸಿಗಬೇಕಿತ್ತು’ ಎಂದು ಆತ ಹೇಳಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಇನ್ಸ್ಟಾಗ್ರಾಮ್ ಖಾತೆ ಡಿಆಕ್ಟಿವೇಟ್ ಮಾಡಿದ ಪ್ರಣಿತ್ ಮೋರೆ
ವಿವಾದ ದೊಡ್ಡದಾಗುತ್ತಿದ್ದಂತೆ ಹಿಮಾಂಶು ತನ್ನ ಸೋಶಿಯಲ್ ಮೀಡಿಯಾ ಖಾತೆಗಳನ್ನು ಡಿಲೀಟ್ ಮಾಡಿ ಕ್ಷಮೆ ಕೇಳಿದ್ದ. ಇತ್ತ ಕಾಮಿಡಿಯನ್ ಪ್ರಣೀತ್ ಕೂಡ ‘ಆತನ ಕಾಮೆಂಟ್ ನನ್ನ ವೈಯಕ್ತಿಕ ನಿಲುವಲ್ಲ’ ಎಂದು ಕ್ಷಮೆಯಾಚಿಸಿದ್ದರಾದರೂ, ರಾಷ್ಟ್ರೀಯ ಮಹಿಳಾ ಆಯೋಗವು ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.