AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಣೀತ್ ಮೋರೆ ಶೋನಲ್ಲಿ ಮತ್ತೊಂದು ಕರ್ಮಕಾಂಡ; ಮೃತದೇಹದ ಖಾಸಗಿ ಅಂಗಗಳ ಬಗ್ಗೆ ಲೇವಡಿ

ಪ್ರಣೀತ್ ಮೋರ್ ಶೋ ಸರಣಿ ವಿವಾದಗಳ ಸುಳಿಯಲ್ಲಿದೆ. ಇತ್ತೀಚೆಗೆ ಡಾ. ಸೆಜಲ್ ಪವಾರ್ ಶವಪರೀಕ್ಷೆ ವೇಳೆ ಪುರುಷರ ಖಾಸಗಿ ಅಂಗಗಳ ಬಗ್ಗೆ ಮಾಡಿದ ಅಸಭ್ಯ ಕಾಮೆಂಟ್‌ಗಳು ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಮೃತದೇಹಕ್ಕೆ ಅಗೌರವ ತೋರಿದ್ದಕ್ಕೆ ನೆಟ್ಟಿಗರು ಕಠಿಣ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಹಿಂದಿನ '370 ರೂಪಾಯಿ ಬಿರಿಯಾನಿ' ವಿವಾದದ ಬೆನ್ನಲ್ಲೇ ಈ ಹೊಸ ವಿವಾದ ಪ್ರಣೀತ್ ಮೋರ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

ಪ್ರಣೀತ್ ಮೋರೆ ಶೋನಲ್ಲಿ ಮತ್ತೊಂದು ಕರ್ಮಕಾಂಡ; ಮೃತದೇಹದ ಖಾಸಗಿ ಅಂಗಗಳ ಬಗ್ಗೆ ಲೇವಡಿ
ಪ್ರಣಿತ್-ವೈದ್ಯೆ
ರಾಜೇಶ್ ದುಗ್ಗುಮನೆ
|

Updated on: Jun 11, 2026 | 2:48 PM

Share

ರಿಯಾಲಿಟಿ ಶೋ ‘ಬಿಗ್ ಬಾಸ್ 19’ರ ಸೆಕೆಂಡ್ ರನ್ನರ್ ಅಪ್ ಹಾಗೂ ಸ್ಟ್ಯಾಂಡ್-ಅಪ್ ಕಮಿಡಿಯನ್ ಪ್ರಣೀತ್ ಮೋರೆ ಅವರ ಶೋ ಈಗ ಸಾಲು ಸಾಲು ವಿವಾದಗಳ ಮೂಲಕ ಭಾರಿ ಆಕ್ರೋಶಕ್ಕೆ ಈಡಾಗಿದೆ. ತಮ್ಮ ಶೋನಲ್ಲಿ ಅಸಭ್ಯ ಹಾಗೂ ಕೀಳು ಮಟ್ಟದ ಸಂಭಾಷಣೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಪ್ರಣೀತ್ ಮೋರೆಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಇತ್ತೀಚೆಗಷ್ಟೇ ವೈರಲ್ ಆಗಿದ್ದ ‘370 ರೂಪಾಯಿ ಬಿರಿಯಾನಿ’ ವಿವಾದ ತಣ್ಣಗಾಗುವ ಮುನ್ನವೇ, ಅದೇ ಶೋನ ಮತ್ತೊಂದು ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕಿಚ್ಚು ಹೊತ್ತಿಸಿದೆ.

ಪ್ರಸ್ತುತ ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ ಭಾಗವಹಿಸಿರುವ ಡಾ. ಸೆಜಲ್ ಪವಾರ್ ಎಂಬ ಯುವ ಮಹಿಳಾ ವೈದ್ಯೆ, ಶವಪರೀಕ್ಷೆ ನಡೆಸುವಾಗ ಪುರುಷರ ಶವಗಳ ಖಾಸಗಿ ಅಂಗಗಳನ್ನು ವೈದ್ಯರು ಹೇಗೆ ಲೇವಡಿ ಮಾಡುತ್ತಾರೆ ಮತ್ತು ತಮಾಷೆ ಮಾಡುತ್ತಾರೆ ಎಂಬ ವಿಷಯವನ್ನು ನಗುತ್ತಾ ಹಂಚಿಕೊಂಡಿದ್ದಾರೆ. ಅತ್ಯಂತ ಗೌರವಾನ್ವಿತ ವೃತ್ತಿಯಲ್ಲಿದ್ದುಕೊಂಡು, ಮೃತದೇಹಕ್ಕೆ ಕನಿಷ್ಠ ಗೌರವ ನೀಡದೆ ಈ ರೀತಿ ಸಾರ್ವಜನಿಕವಾಗಿ ಹಾಸ್ಯ ಮಾಡಿರುವುದು ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಬೆನ್ನಲ್ಲೇ ಡಾ. ಸೆಜಲ್ ಕ್ಷಮೆಯಾಚಿಸಿದ್ದು, ‘ನನ್ನ ಮಾತಿನ ಅರ್ಥ ಬೇರೆಯೇ ಇತ್ತು. ಆದರೆ ಅದು ತಪ್ಪಾಗಿ ಬಿಂಬಿತವಾಗಿದೆ. ಇದಕ್ಕೆ ನಾನು ಜವಾಬ್ದಾರಿ ಹೊರುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಕಾಮಿಡಿಯನ್ ಪ್ರಣೀತ್‌ಗೆ ಮೊದಲೇ ವಾರ್ನಿಂಗ್ ನೀಡಿದ್ದ ಸಲ್ಮಾನ್ ಖಾನ್

ಡಾ. ಸೆಜಲ್ ಅವರ ಈ ವರ್ತನೆಗೆ ಸಿನಿಮಾ ಗಣ್ಯರು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ‘ವೈದ್ಯಕೀಯ ವಿದ್ಯಾರ್ಥಿಗಳು ಕಲಿಯಲಿ ಮತ್ತು ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಕುಟುಂಬದವರು ತಮ್ಮವರ ಮೃತದೇಹವನ್ನು ದಾನ ಮಾಡುತ್ತಾರೆ. ಅದು ಅತ್ಯಂತ ದೊಡ್ಡ ನಂಬಿಕೆ. ಇಂತಹ ಕೀಳು ಮಟ್ಟದ ವರ್ತನೆಗಳಿಂದಾಗಿ ಜನರು ದೇಹದಾನ ಮಾಡುವುದನ್ನೇ ನಿಲ್ಲಿಸಿದರೆ ವೈದ್ಯಕೀಯ ಶಿಕ್ಷಣಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಇದು ಕಾಮಿಡಿಯೂ ಅಲ್ಲ, ಕಂಟೆಂಟ್ ಕೂಡ ಅಲ್ಲ’ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಏನಿದು ಬಿರಿಯಾನಿ ವಿವಾದ?

ಇದಕ್ಕೂ ಮುನ್ನ ಇದೇ ಶೋನಲ್ಲಿ ಹಿಮಾಂಶು ಜಾಂಗ್ರಾ ಎಂಬ 23 ವರ್ಷದ ಯುವಕ, ತಾನು ಯುವತಿಯೊಬ್ಬಳನ್ನು ಡೇಟ್‌ಗೆ ಕರೆದೊಯ್ದು 370 ರೂಪಾಯಿ ಬಿರಿಯಾನಿ ಕೊಡಿಸಿದ್ದಾಗಿ ಹೇಳಿದ್ದನು. ‘ನಾನು 370 ರೂಪಾಯಿ ಖರ್ಚು ಮಾಡಿದ್ದೇನೆ, ಅದನ್ನು ವಸೂಲಿ ಮಾಡಬೇಕಲ್ಲ’ ಎಂದು ಹೇಳಿ, ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ಅತ್ಯಂತ ಅಸಭ್ಯವಾಗಿ ಮತ್ತು ಸಾರ್ವಜನಿಕವಾಗಿ ವಿವರಿಸಿದ್ದನು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಯುವಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿವಾದದ ಬೆನ್ನಲ್ಲೇ ಹಿಮಾಂಶು ತನ್ನ ಕೆಲಸವನ್ನು ಕಳೆದುಕೊಂಡಿದ್ದನು. ಈಗ ಅದೇ ರೀತಿ ಈ ಮಹಿಳಾ ವೈದ್ಯೆಯ ಮೇಲೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More