ನಮ್ಮಪ್ಪನ ಬಗ್ಗೆ ಮಾತನಾಡೋಕೆ ನೀನ್ಯಾರೋ? ಪ್ರಶಾಂತ್​-ಮಂಜು ಜಗಳದಿಂದ ರಣರಂಗವಾದ ಮನೆ

ಮಂಜು ಹೀಗೆ ಹೇಳುವುದನ್ನೇ ಕಾಯುತ್ತಿದ್ದ ಪ್ರಶಾಂತ್​ ಸಂಬರಗಿ, ನಿನ್ನ ಡವ್​ಗೆ ಹೇಳಬೇಕಿತ್ತು ಎಂದಿದ್ದಾರೆ. ಇದಕ್ಕೆ ದಿವ್ಯಾ ಸುರೇಶ್​ ತಿರುಗಿ ಬಿದ್ದಿದ್ದಾರೆ.

ನಮ್ಮಪ್ಪನ ಬಗ್ಗೆ ಮಾತನಾಡೋಕೆ ನೀನ್ಯಾರೋ? ಪ್ರಶಾಂತ್​-ಮಂಜು ಜಗಳದಿಂದ ರಣರಂಗವಾದ ಮನೆ
ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ-ಪ್ರಶಾಂತ್​ ನಡುವಿನ ಜಗಳ
Edited By:

Updated on: Apr 07, 2021 | 3:44 PM

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಕಡಿಮೆ ಆಗುತ್ತಿದ್ದಾರೆ. ಇದರ ಜತೆಗೆ ಸ್ಪರ್ಧಿಗಳ ನಡುವೆ ಕಾಂಪಿಟೇಷನ್​ ಕೂಡ ಹೆಚ್ಚುತ್ತಿದೆ. ಯಾರನ್ನು ಹೇಗೆ ಮಣಿಸಬೇಕು ಎನ್ನುವ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಿವೆ. ಹೀಗಿರುವಾಗಲೇ ಮನೆಯಲ್ಲಿ ಜಗಳಗಳು ಕೂಡ ಹೆಚ್ಚುತ್ತಿದೆ. ಪ್ರಶಾಂತ್​ ಸಂಬರಗಿ ಹಾಗೂ ಮಂಜು ಪಾವಗಡ ನಡುವೆ ಘನಘೋರ ವಾಕ್​ಸಮರ ನಡೆದು ಹೋಗಿದೆ.

ಬಿಗ್ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಮೂಲಕ ಚಕ್ರವರ್ತಿ ಚಂದ್ರಚೂಡ್​ ಎಂಟ್ರಿ ಕೊಟ್ಟ ನಂತರದಲ್ಲಿ ಪ್ರಶಾಂತ್​ ಸಂಬರಗಿ ಶಕ್ತಿ ಹೆಚ್ಚಿದೆ. ಇಬ್ಬರೂ ಸೇರಿ ಮನೆಯ ಎಲ್ಲಾ ಸದಸ್ಯರ ಫೇವರಿಟ್​ ಆಗಿರುವ ಮಂಜು ಶಕ್ತಿ ಕುಗ್ಗಿಸಲು ಪ್ಲ್ಯಾನ್​ ರೂಪಿಸುತ್ತಿದ್ದಾರೆ. ಇತ್ತೀಚೆಗೆ, ಮಂಜು ಆಪ್ತೆ ಎನಿಸಿಕೊಂಡಿರುವ ದಿವ್ಯಾ ಸುರೇಶ್​ ಬಳಿ ಪ್ರಶಾಂತ್​ ಹೋಗಿ ಇಲ್ಲದ್ದನ್ನು ಇದ್ದ ರೀತಿಯಲ್ಲಿ ಹೇಳಿದ್ದರು. ಕೊನೆಗೆ ಶಮಂತ್ ಬಳಿ ಹೋಗಿ, ದಿವ್ಯಾ ವಿರುದ್ಧವೇ ಮಾತನಾಡಿದ್ದರು.

ಈಗ ದಿವ್ಯಾ ಹಾಗೂ ಮಂಜು ಇಬ್ಬರನ್ನೂ ಕುಗ್ಗಿಸುವ ಪ್ರಯತ್ನವನ್ನು ಪ್ರಶಾಂತ್​ ಮಾಡಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ದಿವ್ಯಾ ವಿಚಾರವಾಗಿ ಪ್ರಶಾಂತ್​ ಹಾಗೂ ಮಂಜು ನಡುವೆ ಜಗಳ ನಡೆದಿರುವುದು ಕಂಡು ಬಂದಿದೆ.

ರಾತ್ರಿ ಸಮಯದಲ್ಲಿ ಪ್ರಶಾಂತ್​ ಸಂಬರಗಿ, ಚಕ್ರವರ್ತಿ ಚಂದ್ರಚೂಡ್​ ಸ್ವಿಮ್ಮಿಂಗ್​ಪೂಲ್​ನಲ್ಲಿ ಸ್ನಾನ ಮಾಡುತ್ತಿದ್ದರು. ಆಗ ಸೌಂಡ್​ ಸ್ವಲ್ಪ ಕಡಿಮೆ ಇದ್ದರೆ ಉತ್ತಮವಾಗಿರುತ್ತದೆ ಎಂದು ದಿವ್ಯಾ ಸುರೇಶ್​ ಹೇಳಿದ್ದಾರೆ. ಆಗ, ಮಂಜು ಪಾವಗಡ ಬೆಡ್​ರೂಂನಲ್ಲಿ ಗಲಾಟೆ ಮಾಡಿದ ವಿಚಾರವನ್ನು ಪರೋಕ್ಷವಾಗಿ ತೆಗೆದುಕೊಂಡು ಚಂದ್ರಚೂಡ್​ ಮಾತನಾಡಿದ್ದಾರೆ. ಬೆಡ್​ರೂಂನಲ್ಲಿ ಗಲಾಟೆ ಮಾಡಿದರೆ ಹೇಳಬೇಕು, ಇಲ್ಲಲ್ಲ ಎಂದು ಚಂದ್ರಚೂಡ್​ ಮಂಜುಗೆ ಟಾಂಗ್ ಕೊಟ್ಟಿದ್ದಾರೆ. ಆಗ, ಮಂಜು, ನಾನೇನಾದರೂ ಹೇಳಿದ್ದೀನಾ ಎಂದು ಪ್ರಶ್ನೆ ಮಾಡಿದ್ದಾರೆ.

ಮಂಜು ಹೀಗೆ ಹೇಳುವುದನ್ನೇ ಕಾಯುತ್ತಿದ್ದ ಪ್ರಶಾಂತ್​ ಸಂಬರಗಿ, ನಿನ್ನ ಡವ್​ಗೆ ಹೇಳಬೇಕಿತ್ತು ಎಂದಿದ್ದಾರೆ. ಇದಕ್ಕೆ ದಿವ್ಯಾ ಸುರೇಶ್​ ತಿರುಗಿ ಬಿದ್ದಿದ್ದಾರೆ. ಆಗ ಪ್ರಶಾಂತ್​, ಡವ್​ ಅಂತಾನೂ ಹೇಳ್ತೀನಿ, ಲವರ್​ ಅಂತಾನೂ ಹೇಳ್ತೀನಿ ಎಂದು ಆವಾಜ್​ ಹಾಕಿದ್ದಾರೆ.

ಇದಕ್ಕೆ ಸಿಟ್ಟಾದ ಮಂಜು, ಮಾವ ಎಂದು ಪ್ರಶಾಂತ್​ ಅವರನ್ನು ಸಂಬೋಧಿಸುತ್ತಿದ್ದಂತೆ ಅವರು ಸಿಟ್ಟಾಗಿದ್ದಾರೆ. ಯಾರು ಮಾವ? ನಿಮ್ಮಪ್ಪ ಮಾವ ಎಂದು ಸಂಬರಗಿ ಕೂಗಾಡಿದ್ದಾರೆ. ನಮ್ಮಪ್ಪನ ಬಗ್ಗೆ ಮಾತನಾಡೋಕೆ ನೀನ್ಯಾರೋ ಎಂದು ಮಂಜು ಪ್ರಶ್ನೆ ಮಾಡಿದ್ದಾರೆ. ಇವರ ನಡುವೆ ಏನೆಲ್ಲ ಆಯ್ತು ಎಂಬುದನ್ನು ತಿಳಿದುಕೊಳ್ಳೋಕೆ ಇಂದಿನ (ಏಪ್ರಿಲ್​ 7) ಎಪಿಸೋಡ್​ ನೋಡಬೇಕು.

ಇದನ್ನೂ ಓದಿ: ಪ್ರಶಾಂತ್​ ಸಂಬರಗಿ ಎದುರು ತಪ್ಪು ಒಪ್ಪಿಕೊಂಡ ನಿಧಿ; ದ್ವೇಷ ಕಳೆದುಕೊಂಡು ಒಂದಾದರು!

ದಿವ್ಯಾ ಉರುಡುಗ ನನಗೆ ತಂಗಿ ಇದ್ದಂತೆ; ಎಲ್ಲರೆದುರು ಒಪ್ಪಿಕೊಂಡ ಪ್ರಶಾಂತ್​ ಸಂಬರಗಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us