ಗಾಯಗೊಂಡ ಅಭಿಮಾನಿಯ ಭೇಟಿ ಈಗ ಸಾಧ್ಯವಿಲ್ಲ: ಕಾರಣ ತಿಳಿಸಿದ ಅಲ್ಲು ಅರ್ಜುನ್

ನಟ ಅಲ್ಲು ಅರ್ಜುನ್ ಅವರು ಸಂದಿಗ್ಧ ಸ್ಥಿತಿಯಲ್ಲಿ ಇದ್ದಾರೆ. ಒಂದೆಡೆ ‘ಪುಷ್ಪ 2’ ಸಿನಿಮಾದ ಯಶಸ್ಸಿನ ಖುಷಿ, ಇನ್ನೊಂದೆಡೆ ಅಭಿಮಾನಿಯ ಸಾವಿನ ನೋವು. ಈ ನಡುವೆ ಕಾಲ್ತುಳಿತದಲ್ಲಿ ಗಾಯಗೊಂಡ ಅಭಿಮಾನಿಯನ್ನು ಅವರು ಭೇಟಿ ಮಾಡುವಂತೆಯೂ ಇಲ್ಲ. ಈ ಪರಿಸ್ಥಿತಿಯ ಬಗ್ಗೆ ಅಲ್ಲು ಅರ್ಜುನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಗಾಯಗೊಂಡ ಅಭಿಮಾನಿಯ ಭೇಟಿ ಈಗ ಸಾಧ್ಯವಿಲ್ಲ: ಕಾರಣ ತಿಳಿಸಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್

Updated on: Dec 15, 2024 | 9:59 PM

ಟಾಲಿವುಡ್​ ಹೀರೋ ಅಲ್ಲು ಅರ್ಜುನ್​ ಅವರಿಗೆ ಇದು ಕಷ್ಟದ ಕಾಲ. ‘ಪುಷ್ಪ 2’ ಸಿನಿಮಾ ಪ್ರದರ್ಶನ ಕಾಣುತ್ತಿದ್ದ ‘ಸಂಧ್ಯಾ’ ಚಿತ್ರಮಂದಿರದಲ್ಲಿ ಕಾಲ್ತುಳಿತದಿಂದ 39ರ ಪ್ರಾಯದ ರೇವತಿ ಎಂಬ ಅಭಿಮಾನಿ ನಿಧನರಾದರು. ರೇವತಿ ಪುತ್ರ, 9ನೇ ವಯಸ್ಸಿನ ಶ್ರೀತೇಜ್​ ಪರಿಸ್ಥಿತಿ ಗಂಭೀರವಾಗಿದೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತನ ಬಗ್ಗೆ ಅಲ್ಲು ಅರ್ಜುನ್​ ಅವರಿಗೆ ಅಪಾರ ಕಾಳಜಿ ಇದೆ. ಆದರೆ ಶ್ರೀತೇಜ್​ ಭೇಟಿ ಮಾಡಲು ಅಲ್ಲು ಅರ್ಜುನ್​ ಅವರಿಗೆ ಸಾಧ್ಯವಿಲ್ಲ. ಈ ಕುರಿತು ಅಲ್ಲು ಅರ್ಜುನ್​ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಸ್ಪಷ್ಟನೆ ನೀಡಿದ್ದಾರೆ.

‘ದುರದೃಷ್ಟಕರ ಘಟನೆಯ ಬಳಿಕ ನಿರಂತರ ವೈದ್ಯಕೀಯ ನಿಗಾದಲ್ಲಿ ಇರುವ ಬಾಲಕ ಶ್ರೀತೇಜ್​ ಬಗ್ಗೆ ನನಗೆ ಅಪಾರ ಕಾಳಜಿ ಇದೆ. ಆದರೆ ಕಾನೂನು ಪ್ರಕ್ರಿಯೆಯ ಕಾರಣದಿಂದ ಆತನನ್ನಾಗಲೀ ಅಥವಾ ಅವನ ಕುಟುಂಬದವರನ್ನಾಗಲೀ ನಾನು ಭೇಟಿಯಾಗಬಾರದು ಎಂದು ಸೂಚಿಸಿದ್ದಾರೆ’ ಎಂದು ಅಲ್ಲು ಅರ್ಜುನ್ ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಪ್ರಕರಣ: ಜೂ ಎನ್​ಟಿಆರ್, ರಾಮ್ ಚರಣ್, ಶಾರುಖ್ ಅನ್ನು ಬಂಧಿಸಲಿಲ್ಲ ಏಕೆ?

‘ಶ್ರೀತೇಜ್​ ಕುಟುಂಬಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಆ ಕುಟುಂಬದ ಅಗತ್ಯತೆಗಳನ್ನು ಪೂರೈಸಿ, ಚಿಕಿತ್ಸೆ ಕೊಡಿಸುವ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ. ಆತ ಬೇಗ ಚೇತರಿಕ ಕಾಣಲಿ ಅಂತ ನಾನು ಪ್ರಾರ್ಥನೆ ಮಾಡುತ್ತೇನೆ. ಆದಷ್ಟು ಬೇಗ ಆತನನ್ನು ಮತ್ತು ಆತನ ಕುಟುಂಬದವರನ್ನು ಭೇಟಿ ಮಾಡಲು ಕಾಯುತ್ತಿದ್ದೇನೆ’ ಎಂದು ಅಲ್ಲು ಅರ್ಜುನ್ ಅವರು ಬರಹ ಪೂರ್ಣಗೊಳಿಸಿದ್ದಾರೆ.

ಕಾಲ್ತುಳಿದ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್​ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಆದೇಶಿಸಲಾಗಿತ್ತು. ಆದರೆ ಮಧ್ಯಂತರ ಜಾಮೀನು ಸಿಕ್ಕಿದ್ದರಿಂದ ಅಲ್ಲು ಅರ್ಜುನ್ ಅವರಿಗೆ ರಿಲೀಫ್​ ಸಿಕ್ಕಿತು. ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಕ್ಕೆ ತೆಲಂಗಾಣ ಸರ್ಕಾರವನ್ನು ಅನೇಕರು ಟೀಕಿಸಿದ್ದಾರೆ. ಇನ್ನೊಂದೆಡೆ, ‘ಪುಷ್ಪ 2’ ಸಿನಿಮಾ ಸೂಪರ್​ ಹಿಟ್​ ಆಗಿದೆ. ವಿಶ್ವಾದ್ಯಂತ 1200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಅಲ್ಲು ಅರ್ಜುನ್ ಅವರ ವೃತ್ತಿಜೀವನದ ಅತಿ ದೊಡ್ಡ ಸಕ್ಸಸ್​ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us