ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್​ಮೇಲ್ ಮಾಡಿದ್ದಕ್ಕೆ ಮಹಿಳೆ ಆತ್ಮಹತ್ಯೆ​; ‘ಪುಷ್ಪ’ ಚಿತ್ರದ ನಟ ಅರೆಸ್ಟ್​

ಕಿರುಕುಳಕ್ಕೆ ಒಳಗಾದ ಮಹಿಳೆ ನವೆಂಬರ್​ 29ರಂದು ಹೈದರಾಬಾದ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಜಗದೀಶ್ ಕೈವಾಡ ಇರುವುದು ತಿಳಿಯಿತು. ಪೊಲೀಸರ ಕೈಗೆ ಸಿಗದಂತೆ ತಲೆ ಮರೆಸಿಕೊಂಡು ಜಗದೀಶ್​ ಓಡಾಡುತ್ತಿದ್ದರು. ಆದರೆ ಬುಧವಾರ (ಡಿಸೆಂಬರ್ 6) ಅವರನ್ನು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಲಾಗಿದೆ.

ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್​ಮೇಲ್ ಮಾಡಿದ್ದಕ್ಕೆ ಮಹಿಳೆ ಆತ್ಮಹತ್ಯೆ​; ‘ಪುಷ್ಪ’ ಚಿತ್ರದ ನಟ ಅರೆಸ್ಟ್​
ಅಲ್ಲು ಅರ್ಜುನ್​, ಜಗದೀಶ್​

Updated on: Dec 07, 2023 | 7:13 AM

‘ಪುಷ್ಪ’ ಸಿನಿಮಾ (Pushpa Movie) ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡಿದ್ದರಿಂದ ಆ ಚಿತ್ರದಲ್ಲಿ ನಟಿಸಿದ ಹಲವು ಕಲಾವಿದರಿಗೆ ಒಳ್ಳೆಯ ಹೆಸರು ಬಂತು. ಅದರಲ್ಲೂ ಕೆಲವು ಪಾತ್ರಧಾರಿಗಳು ಹೆಚ್ಚು ಫೇಮಸ್​ ಆದರು. ಅಲ್ಲು ಅರ್ಜುನ್​ (Allu Arjun) ಅವರ ಸ್ನೇಹಿತನ ಪಾತ್ರ ಮಾಡಿದ್ದ ನಟ ಜಗದೀಶ್​ ಕೂಡ ಖ್ಯಾತಿ ಗಳಿಸಿದರು. ಆದರೆ ಈಗ ಅವರು ಅರೆಸ್ಟ್​ ಆಗಿದ್ದಾರೆ. ಮಹಿಳೆಗೆ ಕಿರುಕುಳು ನೀಡಿದ ಆರೋಪ ಅವರ ಮೇಲೆ ಎದುರಾಗಿದೆ. ಈ ಘಟನೆಯಿಂದ ಟಾಲಿವುಡ್​ ಮಂದಿಗೆ ಶಾಕ್​ ಆಗಿದೆ. ಜಗದೀಶ್​ ನೀಡಿದ ಕಿರುಕುಳ ತಾಳಲಾಗದೇ ಆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರುಕುಳು ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ‘ಪುಷ್ಪ’ ಸಿನಿಮಾದ ನಟ ಜಗದೀಶ್ (Pushpa actor Jagadish) ಬಂಧನಕ್ಕೆ ಒಳಗಾಗಿದ್ದಾರೆ.

ಸಹ ನಟಿಯು ಬೇರೆ ಪುರುಷನ ಜೊತೆ ಖಾಸಗಿಯಾಗಿದ್ದ ಕ್ಷಣದ ಕೆಲವು ಫೋಟೋಗಳನ್ನು ಜಗದೀಶ್​ ಕ್ಲಿಕ್ಕಿಸಿಕೊಂಡಿದ್ದರು. ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ಮಹಿಳೆಯು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರರಂಗದಲ್ಲಿ ಜಗದೀಶ್​ ಈಗತಾನೆ ಗುರುತಿಸಿಕೊಳ್ಳುತ್ತಿದ್ದಾರೆ. ಪೋಷಕ ಪಾತ್ರಗಳಿಂದ ಅವರು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಇಂಥ ಸಮಯದಲ್ಲಿ ಗಂಭೀರ ಆರೋಪ ಎದುರಾಗಿರುವುದು ಅವರ ವೃತ್ತಿಜೀವನಕ್ಕೆ ಖಂಡಿತ ಪೆಟ್ಟು ನೀಡಲಿದೆ.

ಇದನ್ನೂ ಓದಿ: ಡೆತ್​​ ನೋಟ್​ ಬರೆದಿಟ್ಟು ಕಿರುತೆರೆ ನಟಿ ಆತ್ಮಹತ್ಯೆ

ಜಗದೀಶ್​ ಅವರಿಂದ ಕಿರುಕುಳಕ್ಕೆ ಒಳಗಾದ ಮಹಿಳೆ ನವೆಂಬರ್​ 29ರಂದು ಹೈದರಾಬಾದ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಜಗದೀಶ್ ಕೈವಾಡ ಇರುವುದು ತಿಳಿಯಿತು. ಪೊಲೀಸರ ಕೈಗೆ ಸಿಗದಂತೆ ತಲೆ ಮರೆಸಿಕೊಂಡು ಜಗದೀಶ್​ ಓಡಾಡುತ್ತಿದ್ದರು. ಆದರೆ ಬುಧವಾರ (ಡಿಸೆಂಬರ್ 6) ಅವರನ್ನು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ: ‘ಅವಳ ಜೊತೆ ನಾನೂ ಸತ್ತು ಹೋದೆ’; ಮಗಳ ಆತ್ಮಹತ್ಯೆ ಬಗ್ಗೆ ನಟ ವಿಜಯ್ ಪ್ರತಿಕ್ರಿಯೆ

‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಅವರ ಸ್ನೇಹಿತನಾಗಿ ಕೇಶವ್​ ಎಂಬ ಪಾತ್ರವನ್ನು ಜಗದೀಶ್ ಮಾಡಿದ್ದಾರೆ. ‘ಪುಷ್ಪ 2’ ಸಿನಿಮಾದಲ್ಲೂ ಅವರ ಪಾತ್ರ ಇದೆ. ಸದ್ಯ ಈ ಸಿನಿಮಾಗೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲೇ ಜಗದೀಶ್​ ಅರೆಸ್ಟ್​ ಆಗಿರುವುದರಿಂದ ಚಿತ್ರತಂಡಕ್ಕೆ ತೊಂದರೆ ಎದುರಾಗುವ ಸಾಧ್ಯತೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us