ತಿಹಾರ್ ಜೈಲ್​​ಗೆ ಸರೆಂಡರ್ ಆದ ಬಾಲಿವುಡ್ ಖ್ಯಾತ ಹಾಸ್ಯ ನಟ

ಬಾಲಿವುಡ್ ನಟ ರಾಜಪಾಲ್ ಯಾದವ್ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ನಿಂದ ಯಾವುದೇ ರಿಲೀಫ್ ಸಿಗದ ಕಾರಣ ತಿಹಾರ್ ಜೈಲಿಗೆ ಶರಣಾಗಿದ್ದಾರೆ. ಮುರಳಿ ಪ್ರಾಜೆಕ್ಟ್ಸ್ ಸಲ್ಲಿಸಿದ್ದ ದೂರಿನ ಪ್ರಕಾರ ನಟನ ಚೆಕ್ ಬೌನ್ಸ್ ಆಗಿತ್ತು. ಪ್ರಕರಣದ ಇತಿಹಾಸವನ್ನು ಪರಿಗಣಿಸಿ, ನ್ಯಾಯಾಲಯವು ಮತ್ತಷ್ಟು ಅವಕಾಶ ನೀಡಲು ನಿರಾಕರಿಸಿದೆ. ಯಾವುದೇ ವ್ಯಕ್ತಿಯು ಹಿನ್ನೆಲೆಯ ಕಾರಣಕ್ಕೆ ವಿಶೇಷ ಪರಿಗಣನೆ ನಿರೀಕ್ಷಿಸಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ತಿಹಾರ್ ಜೈಲ್​​ಗೆ ಸರೆಂಡರ್ ಆದ ಬಾಲಿವುಡ್ ಖ್ಯಾತ ಹಾಸ್ಯ ನಟ
ರಾಜ್​​ಪಾಲ್-ತಿಹಾರ್ ಜೈಲ್

Updated on: Feb 06, 2026 | 10:12 AM

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಾಸ್ಯ ನಟ ರಾಜ್​ಪಾಲ್ ಯಾದವ್ (ರಾಜ್​ಪಾಲ್ ಯಾದವ್) ಅವರಿಗೆ ರಿಲೀಫ್ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಈ ಕಾರಣದಿಂದ ಅವರು ತಿಹಾರ್ ಜೈಲಿನ ಅಧಿಕಾರಿಗಳ ಎದುರು ಶರಣಾಗಿದ್ದಾರೆ. ಗುರುವಾರ (ಜನವರಿ 5) ನಾಲ್ಕು ಗಂಟೆಗೆ ಅವರು ಜೈಲಿಗೆ ಆಗಮಿಸಿದರು. ಅಧಿಕಾರಿಗಳು ಆ ಬಳಿಕ ತಮ್ಮ ಪ್ರಕ್ರಿಯೆ ನಡೆಸಿದ್ದಾರೆ. ಅವರನ್ನು ಈಗ ಜೈಲಿನಲ್ಲಿ ಇಡಲಾಗಿದೆ.

ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ರಾಜ್​​ಪಾಲ್ ವಿರುದ್ಧ ಕೇಸ್ ದಾಖಲಿಸಿತ್ತು. ನಟ ಹಾಗೂ ಅವನ ಪತ್ನಿ ಕೊಟ್ಟ ಚೆಕ್ ಬೌನ್ಸ್ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2018ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್​ ಪಾಲ್ ಯಾದವ್ ಹಾಗೂ ಆತನ ಪತ್ನಿ ಅಪರಾಧಿ ಎಂದು ಘೋಷಣೆ ಮಾಡಿತ್ತು. 2019ರಲ್ಲಿ ಸೆಷನ್ ಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿಯಿತು.

2019ರಲ್ಲಿ ಈ ಪ್ರಕರಣವನ್ನು ದೆಹಲಿ ಕೋರ್ಟ್​​ ಅಲ್ಲಿ ರಾಜ್​​ಪಾಲ್ ಯಾದವ್ ಪ್ರಶ್ನೆ ಮಾಡಿದರು. ಸೆಟಲ್​​ಮೆಂಟ್​ಗೆ ದಾರಿ ಹುಡುಕುತ್ತಿದ್ದೇವೆ ಎಂದು ಹೇಳಿದ ಕಾರಣದಿಂದ 2024ರಲ್ಲಿ ಹೈಕೋರ್ಟ್ ನಟನಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಆದರೆ, ಈವರೆಗೆ ನಟ ಹಣವನ್ನು ಹಿಂದಿರುಗಿಸಿಲ್ಲ. ಹೀಗಾಗಿ, ಕೋರ್ಟ್ ಈ ಬಗ್ಗೆ ಆದೇಶ ಹೊರಡಿಸಿದೆ.
ಹೆಚ್ಚುವರಿಯಾಗಿ ಕೆಲ ವಾರ ಅವಕಾಶ ಕೊಟ್ಟರೆ ಹಣ ಹೊಂದಿಸಲು ಪ್ರಯತ್ನಿಸೋದಾಗಿ ರಾಜ್​​ಪಾಲ್ ಪರ ವಕೀಲರು ಹೇಳಿದ್ದರು. ಆದರೆ, ಇದಕ್ಕೆ ಹೈಕೋರ್ಟ್ ನಿರಾಕರಿಸಿತ್ತು. ಬುಧವಾರ ನಾಲ್ಕು ಗಂಟೆ ಒಳಗೆ ಸರೆಂಡರ್ ಆಗಲು ಕೋರ್ಟ್ ಸೂಚನೆ ನೀಡಿತ್ತು.

ಇದನ್ನೂ ಓದಿ: ಪತ್ರಕರ್ತನ ಮೊಬೈಲ್ ಕಿತ್ತುಕೊಂಡು ಎಸೆದ ಹಾಸ್ಯ ನಟ ರಾಜ್​ಪಾಲ್ ಯಾದವ್

‘ಯಾವುದೇ ವ್ಯಕ್ತಿ ನಿರ್ದಿಷ್ಟ ಹಿನ್ನೆಲೆ ಅಥವಾ ಉದ್ಯಮಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಈ ನ್ಯಾಯಾಲಯವು ಅವರಿಗೆ ವಿಶೇಷ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಬೇಡಿ. ನಿರಂತರವಾಗಿ ಅದೇ ತಪ್ಪು ಆಗುತ್ತಿದ್ದರೆ ಅದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.