
ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಈ ಚಿತ್ರದ ನಾಯಕಿ ಜಾನ್ವಿ ಕಪೂರ್ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಇದೀಗ ಈ ವಿವಾದಗಳ ಬಗ್ಗೆ ನಟ ರಾಮ್ ಚರಣ್ ಹೈದರಾಬಾದ್ನಲ್ಲಿ ನಡೆದ ಸಿನಿಮಾದ ಸಕ್ಸಸ್ ಮೀಟ್ನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಚಿತ್ರದ ಪರ ಧ್ವನಿ ಎತ್ತಿದ್ದಾರೆ.
ಯಾರು ಏನೇ ವಿಮರ್ಶೆ ಬರೆದರೂ ಈ ಯಶಸ್ಸು ಪ್ರೇಕ್ಷಕರಿಗೆ ಸೇರಿದ್ದು ಎಂದು ರಾಮ್ ಚರಣ್ ಹೇಳಿದ್ದಾರೆ. ‘ತೆಲುಗು ಪ್ರೇಕ್ಷಕರು ಯಾರನ್ನೂ ಅಷ್ಟು ಬೇಗ ಇಷ್ಟಪಡುವುದಿಲ್ಲ. ಆದರೆ ಒಮ್ಮೆ ಇಷ್ಟಪಟ್ಟರೆ ಪ್ರಾಣ ಇರುವವರೆಗೂ ಪ್ರೀತಿಸುತ್ತಾರೆ’ ಎಂದು ಅವರು ತಿಳಿಸಿದ್ದಾರೆ. ಚಿತ್ರವನ್ನು ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡ ದೊಡ್ಡ ವಾಹಿನಿಗಳು ಮತ್ತು ಸಣ್ಣ ವಿಮರ್ಶಕರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.
ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ‘ಅಚ್ಚಿಯಮ್ಮ’ ಎಂಬ ಪಾತ್ರದ ಚಿತ್ರಣಕ್ಕೆ ವಿರೋಧ ವ್ಯಕ್ತವಾಗಿತ್ತು. ಕೆಲವು ದೃಶ್ಯಗಳಲ್ಲಿ ಜಾನ್ವಿ ಅವರ ಪಾತ್ರವನ್ನು ಅತಿ ಹೆಚ್ಚು ಗ್ಲಾಮರಸ್ ಆಗಿ ತೋರಿಸಲಾಗಿದೆ ಎಂದು ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಿರ್ದೇಶಕರು, ‘ನಾವು ರಾಮ್ ಚರಣ್ ಮತ್ತು ಜಾನ್ವಿ ನಡುವೆ ಒಂದು ರೋಮ್ಯಾಂಟಿಕ್ ಕಥೆ ತೋರಿಸಲು ಬಯಸಿದ್ದೆವು. ಆದರೆ ಪ್ರೇಕ್ಷಕರು ಇದನ್ನು ಇಷ್ಟು ನೆಗೆಟಿವ್ ಆಗಿ ತಗೆದುಕೊಳ್ಳುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸುತ್ತೇವೆ’ ಎಂದಿದ್ದರು.
ಇದನ್ನೂ ಓದಿ: ‘ನನ್ನ ಮಗಳು ನನ್ನ ಅಪ್ಪ ಎಂದು ಕರೆಯುತ್ತಿಲ್ಲ’: ರಾಮ್ ಚರಣ್
ವಿವಾದ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಚಿತ್ರತಂಡ ಆಕ್ಷೇಪಾರ್ಹ ದೃಶ್ಯಗಳನ್ನು ಸಿನಿಮಾದಿಂದ ತೆಗೆದುಹಾಕಿದೆ. ಥಿಯೇಟರ್ ಆವೃತ್ತಿಗೆ ಹೊಸ ದೃಶ್ಯಗಳನ್ನು ಸೇರಿಸಲಾಗಿದೆ. ಈ ಎಲ್ಲಾ ವಿವಾದಗಳ ನಡುವೆಯೂ ‘ಪೆದ್ದಿ’ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 332 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗು ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಗೇಮ್ ಚೇಂಜರ್’ ಮತ್ತು ‘ಆಚಾರ್ಯ’ ಸಿನಿಮಾಗಳ ಸೋಲಿನ ನಂತರ ರಾಮ್ ಚರಣ್ ಪಾಲಿಗೆ ಈ ಸಿನಿಮಾ ದೊಡ್ಡ ಕಮರ್ಷಿಯಲ್ ಗೆಲುವು ತಂದುಕೊಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.