
ಬೆಟ್ಟಗುಡ್ಡಗಳ ಬುಡದಲ್ಲಿರುವ ಒಂದು ಹೆಸರೇ ಇಲ್ಲದ ಊರು, ಆ ಊರಿನ ಜನರಿಗೆ ‘ಕೂಲಿ’ ಎಂದು ಬಿಟ್ಟರೆ ಬೇರೆ ಗುರುತು ಇಲ್ಲ. ಆ ಊರಿಗೆ ಆ ಊರಿನ ಜನ ಬಿಟ್ಟರೆ ಬೇರೆ ಯಾರೂ ಬರುವುದೂ ಇಲ್ಲ, ಬರಲು ಸೌಕರ್ಯವೂ ಇಲ್ಲ. ಊರಿನ ಬದಿಯಲ್ಲೇ ಒಂದು ರೈಲು ಹಳಿ ಹಾದಿ ಹೋಗಿದೆ, ಆದರೆ ಒಮ್ಮೆಯೂ ಆ ರೈಲು ನಿಲ್ಲುವುದಿಲ್ಲ. ಯಾವ ಸೌಕರ್ಯವೂ ಇಲ್ಲದ ಊರಿನ ಜನರಿಗೆ ಶಿಕ್ಷಣ, ಆರೋಗ್ಯ ಎಂಬುದು ಕನಸಷ್ಟೆ. ಆ ಊರಿನ ಯುವಕ ‘ಪೆದ್ದಿ’ ಬೆಟ್ಟ, ಗುಡ್ಡ ಹತ್ತಿ ಮೈ-ಕೈ ಗಟ್ಟಿಯಾಗಿರುವ ಅವನಿಗೆ ಕ್ರೀಡೆಯೂ ‘ಕೂಲಿ’ಯೇ. ಯಾರು ದುಡ್ಡು ಕೊಟ್ಟರೆ ಅವರ ಜೊತೆ ಆಡುತ್ತಾನೆ, ಗೆಲ್ಲಿಸುತ್ತಾನೆ. ಆದರೆ ಅದೇ ಆಟವನ್ನು ಕೂಲಿಗಾಗಿ ಅಲ್ಲದೆ, ಗುರುತಿ (ಐಡೆಂಟಿಟಿ)ಗಾಗಿ ಆಡಿದರೆ, ತನಗೆ ಮಾತ್ರವಲ್ಲ, ಹೆಸರು-ಗುರುತು ಇಲ್ಲದ ತನ್ನ ಊರಿನ ಐಡೆಂಟಿಗಾಗಿ ಆಡಿದರೆ? ಅದೇ ‘ಪೆದ್ದಿ’ ಸಿನಿಮಾದ ಕತೆ.
ಸಾಮಾನ್ಯವಾಗಿ ಸ್ಪೋರ್ಟ್ಸ್ ಡ್ರಾಮಾ ಸಿನಿಮಾಗಳು ಯಾವುದಾದರೂ ಒಂದು ಆಟದ ಮೇಲೆ ಫೋಕಸ್ ಆಗಿರುತ್ತವೆ. ಆದರೆ ನಿರ್ದೇಶಕ ಬುಚ್ಚಿಬಾಬು ಸನಾ ‘ಪೆದ್ದಿ’ ಸಿನಿಮಾನಲ್ಲಿ ನಾಯಕ ಮೂರು ಆಟಗಳನ್ನು ಆಡುವಂತೆ ಮಾಡಿದ್ದಾರೆ. ಕ್ರಿಕೆಟ್ ಆಟಗಾರನಾಗಿ ಕೂಲಿಗಾಗಿ ಆಡುವ ಪೆದ್ದಿ, ಆ ಬಳಿಕ ತನ್ನದೇ ಒಂದು ಗುರುತು ಮೂಡಿಸಲೆಂದು ಕುಸ್ತಿ ಅಖಾಡಕ್ಕೆ ಇಳಿಯುತ್ತಾನೆ. ಆ ನಂತರ ವಿಧಿಯಾಟದಿಂದಾಗಿ ಅನಿವಾರ್ಯವಾಗಿ ಮತ್ತೊಂದು ಆಟವನ್ನೂ ಪೆದ್ದಿ ಆಡಬೇಕಾಗುತ್ತದೆ. ಈ ಆಟಗಳ ನಡುವೆ ಪೆದ್ದಿ ಪಡುವ ಪಾಡು, ಕಂಡುಕೊಳ್ಳುವ ಸತ್ಯಗಳು, ಅನುಭವಿಸುವ ನೋವು, ಸಾಧಿಸುವ ಗುರಿ ಪ್ರೇಕ್ಷಕರನ್ನು ತಾಕುತ್ತದೆ.
ನಾಯಕ ರಾಮ್ ಚರಣ್, ಡ್ಯಾನ್ಸ್, ಆಕ್ಷನ್ ಜೊತೆಗೆ ಎಮೋಷನಲ್ ದೃಶ್ಯಗಳಲ್ಲಿಯೂ ಗಮನ ಸೆಳೆಯುತ್ತಾರೆ. ಅವರ ಸಮಕಾಲೀನ ನಟರು ಲಾರ್ಜರ್ ದ್ಯಾನ್ ಲೈಫ್ (Larger than life) ಪಾತ್ರಗಳು, ಸಿನಿಮ್ಯಾಟಿಕ್ ಯೂನಿವರ್ಸ್ಗಳ ಹಿಂದೆ ಓಡುತ್ತಿದ್ದಾಗಲೂ ರಾಮ್ ಚರಣ್, ಒಂದು ಹಳ್ಳಿಯ ಸಾಮಾನ್ಯ ಯುವಕನ ಪಾತ್ರದಲ್ಲಿ ನಟಿಸಲು ಒಪ್ಪಿರುವುದು ಪ್ರಶಂಸನಾರ್ಹ. ಸಿನಿಮಾಕ್ಕಾಗಿ ರಾಮ್ ಚರಣ್ ತಮ್ಮ ದೇಹವನ್ನು ಹುರಿಗೊಳಿಸಿಕೊಂಡಿರುವ ರೀತಿ ಅತ್ಯದ್ಭುತ. ಕುಸ್ತಿ ಅಖಾಡದಲ್ಲಿ ಅವರ ದೇಹ ಮಿರಿ-ಮಿರಿ ಮಿಂಚುತ್ತದೆ. ದೇಹದ ಕಟ್ಟುಗಳು ಎದ್ದೆದ್ದು ಕಾಣುತ್ತವೆ. ಪಾತ್ರಕ್ಕಾಗಿ ಅವರು ಪಟ್ಟಿರುವ ಶ್ರಮ ತೆರೆಯ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ.
ಇದನ್ನೂ ಓದಿ:Peddi First Half review: ‘ಪೆದ್ದಿ’ ಮೊದಲಾರ್ಧದಲ್ಲಿ ಏನಿದೆ? ಏನಿಲ್ಲ?
ಶಿವರಾಜ್ ಕುಮಾರ್ ಅವರಿಗೂ ಇಲ್ಲಿ ಪ್ರಮುಖವಾದ ಪಾತ್ರವಿದೆ. ಕ್ರಿಕೆಟ್ ಆಡುತ್ತಾ, ಕೂಲಿ ಮಾಡುತ್ತಾ, ನಾಯಕಿಗೆ ಲೈನ್ ಹೊಡೆಯುತ್ತಾ ಇರುವ ನಾಯಕನಿಗೆ ಒಂದು ಧ್ಯೇಯವನ್ನು, ಗುರಿಯನ್ನು ನೀಡುವುದು ಹಾಗೂ ಆ ಗುರಿ ಸಾಧಿಸಲು ನಾಯಕನಿಗೆ ಶಕ್ತಿ ಕೊಡುವ ಮಹತ್ವದ ಪಾತ್ರ ಅವರದ್ದು. ಸಿನಿಮಾಕ್ಕೆ ತಿರುವು ಕೊಡುವುದೇ ಶಿವಣ್ಣನ ಗೌಡನಾಯ್ಡು ಪಾತ್ರ. ಶಿವಣ್ಣ ತಮ್ಮ ಗತ್ತಿನಿಂದ ಹಾಗೂ ಎಮೋಷನಲ್ ದೃಶ್ಯಗಳಲ್ಲಿಯೂ ಫುಲ್ ಮಾರ್ಕ್ಸ್ ಸ್ಕೋರ್ ಮಾಡಿದ್ದಾರೆ. ಆದರೆ ಒಂದು ಪ್ರಮುಖವಾದ ಆಸ್ಪತ್ರೆ ದೃಶ್ಯದಲ್ಲಿ ಶಿವಣ್ಣನ ಪಾತ್ರದ ಮೇಲೆ ಇನ್ನಷ್ಟು ಫೋಕಸ್ ನೀಡಬಹುದಾಗಿತ್ತು ಎನಿಸುತ್ತದೆ. ಅಂಥಹಾ ಪ್ರಮುಖ ಭಾವುಕ ದೃಶ್ಯದಲ್ಲಿ ನಿರ್ದೇಶಕರು ಸಂಪೂರ್ಣವಾಗಿ ನಾಯಕನ ಮೇಲೆಯೇ ಕ್ಯಾಮೆರಾ ಫೋಕಸ್ ಮಾಡಿಸಿದ್ದಾರೆ.
ಇನ್ನು ನಾಯಕಿ ಜಾನ್ಹವಿ ಕಪೂರ್ ಇದ್ದಾರೆ ಅಷ್ಟೆ. ಅವರನ್ನು ಗ್ಲಾಮರ್ ಹೊರತಾಗಿ ಇನ್ಯಾವುದಕ್ಕೂ ಬಳಸಿಲ್ಲ ನಿರ್ದೇಶಕರು. ಜಾನ್ಹವಿಯ ಆರಂಭದ ಕೆಲ ದೃಶ್ಯಗಳಲ್ಲಿ ಅವರ ಮುಖಕ್ಕಿಂತಲೂ ಬೇರೆ ಭಾಗಗಳನ್ನೇ ಹೆಚ್ಚು ತೋರಿಸಲಾಗಿದೆ. ಅವರ ಪಾತ್ರ, ಕತೆ ನಡೆಯುವ ಆ ಪ್ರದೇಶದ್ದೇ ಅಲ್ಲ ಅನಿಸುತ್ತದೆ. ನಟ ದಿವ್ಯೇಂದು ಹಾಗೂ ಕನ್ನಡಿಗ ತಾರಕ್ ಪೊನ್ನಪ್ ನೆಗೆಟಿವ್ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ನಟ ಬೊಮನ್ ಇರಾನಿಗೆ ಹೆಚ್ಚೇನೂ ಕೆಲಸವಿಲ್ಲ. ಜಗಪತಿ ಬಾಬು ಅವರ ಪಾತ್ರ ಚೆನ್ನಾಗಿದೆ.
ಆದರೆ ಸಿನಿಮಾನಲ್ಲಿ ಕೆಲವಾರು ನೆಗೆಟಿವ್ ಅಂಶಗಳೂ ಸಹ ಇವೆ. ನಾಯಕ, ತನ್ನ ಊರಿಗಾಗಿ ಅಷ್ಟೆಲ್ಲ ಹೋರಾಡುತ್ತಾನೆ. ಆದರೆ ಆ ಊರಿನ ಬಗ್ಗೆ ಊರ ಜನರಿಗೆ ಇರುವ ಭಾವುಕತೆಗೆ ಕಾರಣಗಳೇ ಗೊತ್ತಾಗುವುದಿಲ್ಲ. ಆ ಊರನ್ನು ಸಹ ಸಿನಿಮಾನಲ್ಲಿ ಸರಿಯಾಗಿ ತೋರಿಸುವುದಿಲ್ಲ. ದ್ವಿತೀಯಾರ್ಧದಲ್ಲಿ ಕುಸ್ತಿ ಅಖಾಡದಲ್ಲಿ ನಡೆಯುವ ಫೈಟ್ ಅದ್ಭುತವಾಗಿದೆ ಆದರೆ ಅದಾದ ಬಳಿಕ ರಾಷ್ಟ್ರೀಯ ಪಂದ್ಯದಲ್ಲಿ ನಡೆಯುವ ಫೈಟ್ ದೃಶ್ಯಕ್ಕೆ ಮಹತ್ವವನ್ನೇ ನೀಡಿಲ್ಲ. ಅದು ಬಹಳ ಪೇಲವವಾಗಿದೆ. ಕತೆಯಲ್ಲಿ ಎಮೋಷನ್ಗೆ ಹೆಚ್ಚಿನ ಬೆಲೆ ನೀಡಲಾಗಿದೆ ಲಾಜಿಕ್ಕಿಗಲ್ಲ. ನಾಯಕ ಪಾತ್ರಕ್ಕೆ ಸಿಂಪತಿ ಧಕ್ಕಲೆಂದು, ಕೆಲವು ಪಾತ್ರಗಳು ಸಾಮಾನ್ಯ ಸನ್ನಿವೇಶಗಳಲ್ಲಿಯೂ ನಾಯಕನ ಮೇಲೆ ಅತಿಯಾದ ವಿಲನ್ಗಿರಿ ತೋರುತ್ತವೆ. ಇನ್ನು ಸಿನಿಮಾದ ರೊಮ್ಯಾಂಟಿಕ್ ಆಂಗಲ್ ತೀರ ಪೇಲವ, ಮೊದಲಾರ್ಧದಲ್ಲಿ ನಾಯಕಿಗೆ ಪೆದ್ದಿ ಒಬ್ಬ ವ್ಯಕ್ತಿ ಇದ್ದಾನೆಂಬುದೇ ಗೊತ್ತಿರುವುದಿಲ್ಲ, ಆದರೆ ದ್ವೀತೀಯಾರ್ಧದಲ್ಲಿ ಹಠಾತ್ತನೇ ನಾಯಜಕಿಯೇ ಪೆದ್ದಿಯನ್ನು ಅರ್ಧ ರಾತ್ರಿ ಹುಡುಕಿಕೊಂಡು ಬಂದು ಮುತ್ತುಕೊಡುತ್ತಾಳೆ. ಅವಳ ಆ ಬದಲಾವಣೆಗೆ ಕಾರಣವೇ ಇಲ್ಲ. ನಾಯಕಿಯನ್ನು ಅತಿಯಾಗಿ ಆಬ್ಜೆಕ್ಟಿಫೈ ಮಾಡಲಾಗಿದೆ. ನಾಯಕಿಯ ಅಂಕು-ಡೊಂಕುಗಳ ಮೇಲೆ ಅತಿಯಾಗಿ ಕ್ಯಾಮೆರಾ ಕಣ್ಣು ಹಾಯಿಸಲಾಗಿದೆ. ಇಂಥಹಾ ಇನ್ನೂ ಹಲವನ್ನು ಪಟ್ಟಿ ಮಾಡಬಹುದು.
ಸಿನಿಮಾ ತಾಂತ್ರಿಕವಾಗಿ ಉತ್ತಮವಾಗಿದೆ. ಸಾಕಷ್ಟು ಗ್ರೀನ್ ಸ್ಕ್ರೀನ್ಗಳನ್ನು, ಸೆಟ್ಗಳನ್ನು ಬಳಸಲಾಗಿದೆ. ಹಾಗಿದ್ದರೂ ಸಹ ಸಿನಿಮಾದ ಪ್ರತಿ ಫ್ರೇಮು ರಿಚ್ ಆಗಿ ಕಾಣುತ್ತದೆ. ನುರಿತ ಕ್ಯಾಮೆರಾಮ್ಯಾನ್ ರತ್ನವೇಲು ಅದ್ಭುತವಾದ ಕೆಲಸ ಮಾಡಿದ್ದಾರೆ. ನಾಯಕ, ಇಬ್ಬರು ಪೈಲ್ವಾನ್ಗಳ ಜೊತೆ ಮಾಡುವ ಕುಸ್ತಿ ಸನ್ನಿವೇಶವಂತೂ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಸಿನಿಮಾದ ಸಂಗೀತವೂ ಚೆನ್ನಾಗಿದೆ. ಎಸ್ ತಮನ್, ಅನಿರುದ್ಧ್, ರವಿ ಬಸ್ರೂರು ಅವರ ಅಬ್ಬರದ ಸಂಗೀತವೇ ಕೇಳಿದ್ದವರಿಗೆ ‘ಪೆದ್ದಿ’ಯ ಹಿನ್ನೆಲೆ ಸಂಗೀತ ಭಿನ್ನ ಎನಿಸುತ್ತದೆ. ಒಟ್ಟಾರೆಯಾಗಿ ‘ಪೆದ್ದಿ’ ಒಂದು ನೋಡಬಲ್ಲ ಸಿನಿಮಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ