ಚಾವುಂಡಿ ದೇವಾಲಯದಲ್ಲಿ ರಣವೀರ್ ಸಿಂಗ್ ಕ್ಷಮೆ ಕೇಳಬೇಕು: ದೂರುದಾರರ ಒತ್ತಾಯ

‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ರಣವೀರ್ ಸಿಂಗ್ ನೀಡಿದ ಹೇಳಿಕೆಯಿಂದ ವಿವಾದ ಆಗಿತ್ತು. ಆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ನಟನಿಗೆ ನೈಜ ಪಶ್ಚಾತ್ತಾಪ ಇರಬೇಕು ಎಂದು ಪಟ್ಟು ಹಿಡಿಯಲಾಗಿದೆ. ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಲಾಗಿದೆ. ಆ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ.

ಚಾವುಂಡಿ ದೇವಾಲಯದಲ್ಲಿ ರಣವೀರ್ ಸಿಂಗ್ ಕ್ಷಮೆ ಕೇಳಬೇಕು: ದೂರುದಾರರ ಒತ್ತಾಯ
Ranveer Singh, Rishab Shetty
Image Credit source: Tv9 Kannada
Edited By:

Updated on: Mar 24, 2026 | 7:11 PM

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ (Kantara Chapter 1) ಸಿನಿಮಾದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಈಗಾಗಲೇ ಕ್ಷಮೆ ಕೇಳಿದ್ದಾರೆ. ಆದರೂ ದೂರುದಾರರು ಕಾನೂನು ಹೋರಾಟ ಮುಂದುವರಿಸಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ (FIR) ರದ್ದು ಕೋರಿ ರಣವೀರ್ ಸಿಂಗ್ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ನಡೆಯುತ್ತಿದೆ. ‘ಚಾವುಂಡಿ ದೇವಾಲಯಕ್ಕೆ ರಣವೀರ್ ಸಿಂಗ್ (Ranveer Singh) ಭೇಟಿ ನೀಡಲೇಬೇಕು’ ಎಂದು ದೂರುದಾರರು ಬೇಡಿಕೆ ಇಟ್ಟಿದ್ದಾರೆ.

ಈಗಾಗಲೇ ತಮ್ಮ ವಿವಾದಾತ್ಮಕ ಹೇಳಿಕೆಗಾಗಿ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಖಾತೆ ಮೂಲಕ ಕ್ಷಮೆ ಯಾಚಿಸಿರುವ ರಣವೀರ್ ಸಿಂಗ್, ಕಾನೂನಾತ್ಮಕವಾಗಿಯೂ ಪಶ್ಚಾತ್ತಾಪ ವ್ಯಕ್ತಪಡಿಸಲು ಮುಂದಾಗಿದ್ದಾರೆ. ನ್ಯಾಯಾಲಯಕ್ಕೆ ಅಧಿಕೃತವಾಗಿ ಕ್ಷಮೆಯಾಚನೆಯ ಪ್ರಮಾಣಪತ್ರ ಸಲ್ಲಿಸುವುದಾಗಿ ಅವರ ಪರ ವಕೀಲರು ಹೈಕೋರ್ಟ್ ಪೀಠಕ್ಕೆ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ದೂರುದಾರರಾಗಿರುವ ಪ್ರಶಾಂತ್ ಮೆತಾಲ್ ಅವರು ರಣವೀರ್ ಸಿಂಗ್ ಅವರ ಕ್ಷಮೆ ಯಾಚನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಕೇವಲ ಟ್ವೀಟ್ ಅಥವಾ ಪೇಪರ್ ಮೇಲೆ ಕ್ಷಮೆ ಕೇಳಿದರೆ ಸಾಲದು. ರಣವೀರ್ ಸಿಂಗ್ ಅವರಲ್ಲಿ ನೈಜ ಪಶ್ಚಾತ್ತಾಪವಿರಬೇಕು. ಅವರು ಖುದ್ದಾಗಿ ಚಾವುಂಡಿ ದೇವಾಲಯಕ್ಕೆ ಭೇಟಿ ನೀಡಿ ದೈವದ ಮುಂದೆ ಕ್ಷಮೆ ಕೇಳಬೇಕು’ ಎಂದು ವಾದಿಸಿದ್ದಾರೆ.

ದೂರುದಾರರ ಬೇಡಿಕೆಗೆ ಸ್ಪಂದಿಸಿರುವ ರಣವೀರ್ ಸಿಂಗ್ ಪರ ವಕೀಲರು, ‘ಅವರು ಚಾವುಂಡಿ ದೇವಾಲಯಕ್ಕೆ ಭೇಟಿ ನೀಡಿ ಕ್ಷಮೆ ಯಾಚಿಸಲಿದ್ದಾರೆ ಹಾಗೂ ಅದರೊಂದಿಗೆ ನ್ಯಾಯಾಲಯಕ್ಕೂ ಪ್ರಮಾಣಪತ್ರ ಸಲ್ಲಿಸಲಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬೆಳವಣಿಗೆಯ ನಂತರ ಹೈಕೋರ್ಟ್‌ನ ಏಕಸದಸ್ಯ ಪೀಠವು ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿದೆ.

ಇದನ್ನೂ ಓದಿ: ರಣವೀರ್ ಸಿಂಗ್ ಮುಂದೆ ಬೇರೆ ಹೀರೋಗಳೆಲ್ಲ ಜೋಕರ್​ಗಳು; ಆರ್​ಜಿವಿ ಟೀಕೆ

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಸಿನಿಮಾದಲ್ಲಿನ ರಿಷಬ್ ಶೆಟ್ಟಿ ಅವರ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು ರಣವೀರ್ ಸಿಂಗ್ ಅವರ ಉದ್ದೇಶ ಆಗಿತ್ತು. ಆದರೆ ಅದನ್ನು ವ್ಯಕ್ತಪಡಿಸುವ ಭರದಲ್ಲಿ ಅವರು ತೋರಿದ ಮುಖಭಾವದಿಂದ ದೈವಕ್ಕೆ ಅವಮಾನ ಆಗಿದೆ ಎಂಬ ಆರೋಪ ಕೇಳಿಬಂತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:06 pm, Tue, 24 March 26

Follow Us