ಹೈದರಾಬಾದ್​​ನಲ್ಲಿ ಪ್ಯಾಲೇಸ್​​ನಂತಹ ಮನೆಯಿದ್ದರೂ ಮೈಸೂರಲ್ಲಿಯೇ ವಾಸ: ಹೇಗಿತ್ತು ಗೊತ್ತಾ ಗಾನಕೋಗಿಲೆ ಎಸ್​. ಜಾನಕಿ ಅಂತಿಮ ದಿನಗಳು?

S Janaki Passes Away: ಮೈಸೂರಿನಲ್ಲಿ ನೆಲೆಸಿದ್ದ ಗಾನಕೋಗಿಲೆ ಎಸ್. ಜಾನಕಿ ಅವರ ಕೊನೆಯ ದಿನಗಳ ಬಗ್ಗೆ ಕೇರ್ ಟೇಕರ್ ನವೀನ್ ಮಾಹಿತಿ ಹಂಚಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಅರಮನೆಯಂತಹ ಮನೆಯಿದ್ದರೂ ಅವರು ಮೈಸೂರನ್ನೇ ಆಯ್ದುಕೊಂಡಿದ್ದರು. ಜಾನಕಿಯವರಿಗೆ ಕಾಲಿನ ಇನ್ಫೆಕ್ಷನ್​​ ಆಗಿ ನೋವು ಆರಂಭವಾಗಿತ್ತು. ಹಾಸ್ಪಿಟಲ್​​ ಅಂದರೆ ಜಾನಕಮ್ಮ ಭಯ ಪಡುತ್ತಿದ್ದ ಕಾರಣ ಮನೆಗೇ ನರ್ಸ್​​ ಕರೆಸಿ ಚಿಕಿತ್ಸೆ ಕೊಡಿಸುತ್ತಿದ್ದೆವು. ಈ ನಡುವೆ ಪರಿಸ್ಥಿತಿ ತೀರಾ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದವರು ತಿಳಿಸಿದ್ದಾರೆ.

ಹೈದರಾಬಾದ್​​ನಲ್ಲಿ ಪ್ಯಾಲೇಸ್​​ನಂತಹ ಮನೆಯಿದ್ದರೂ ಮೈಸೂರಲ್ಲಿಯೇ ವಾಸ: ಹೇಗಿತ್ತು ಗೊತ್ತಾ ಗಾನಕೋಗಿಲೆ ಎಸ್​. ಜಾನಕಿ ಅಂತಿಮ ದಿನಗಳು?
ಎಸ್​.ಜಾನಕಿ
Edited By:

Updated on: Jul 12, 2026 | 7:42 AM

ಮುಖ್ಯಾಂಶಗಳು

  • ಇಹಲೋಕ ತ್ಯಜಿಸಿದ ಹಿರಿಯ ಗಾಯಕಿ ಎಸ್. ಜಾನಕಿ (88)
  • ಮೈಸೂರಿನಲ್ಲಿ ಹೇಗಿತ್ತು ಗಾನ ಕೋಗಿಲೆಯ ಕೊನೆ ದಿನಗಳು?
  • ಟಿವಿ9 ಜೊತೆ ಮಾಹಿತಿ ಹಂಚಿಕೊಂಡ ಕೇರ್​​ ಟೇಕರ್​​ ನವೀನ್​​

ಮೈಸೂರು, ಜುಲೈ 12: ಹಿರಿಯ ಗಾಯಕಿ ಎಸ್. ಜಾನಕಿ (88) ಅವರು ಹೃದಯಾಘಾತದಿಂದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದು, ಗಾನಕೋಗಿಲೆಯ ನಿರ್ಗಮನಕ್ಕೆ ಸಂಗೀತ ಲೋಕವೇ ಕಂಬನಿ ಮಿಡಿದಿದೆ. ಬೆಳಗ್ಗೆ 8 ಗಂಟೆಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಜಾನಕಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ನವೀನ್ ಫಾರಂಹೌಸ್​ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಈ ನಡುವೆ ಜಾನಕಮ್ಮನ ಕೊನೆಯ ದಿನಗಳು ಹೇಗಿದ್ದವು ಎಂಬ ಬಗ್ಗೆ ಅವರ ಕೇರ್​​ ಟೇಕರ್​​ ಆಗಿದ್ದ ನವೀನ್​​ ಟಿವಿ9 ಕನ್ನಡದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

2018ನಲ್ಲಿ ಕೊನೆಯ ಕಾರ್ಯಕ್ರಮ

2008ರಿಂದ ಮೈಸೂರಲ್ಲೇ ಇರುತ್ತಿದ್ದ ಜಾನಕಿ ಅವರು ಕಳೆದ 2 ವರ್ಷಗಳಿಂದ ತಮ್ಮ ಮನೆಯಲ್ಲಿಯೇ ನೆಲೆಸಿದ್ದರು. ಹೈದರಾಬಾದ್‌ನಲ್ಲಿ ಪ್ಯಾಲೇಸ್​​ನಂತಹ ಮನೆ ಹೊಂದಿದ್ದರೂ ಅವರನ್ನು ಸೆಳೆದಿದ್ದು ಮಾತ್ರ ಮೈಸೂರು. ಮೈಸೂರಿನಲ್ಲೇ ಪ್ರಾಣ ಬಿಡುವುದು ನನ್ನ ಆಸೆ ಎಂದು ಹೇಳುತ್ತಿದ್ದ ಅವರು, 2018ನಲ್ಲಿ ಮೈಸೂರಿನಲ್ಲೇ ಕೊನೆಯ ಕಾರ್ಯಕ್ರಮ ನೀಡಿದ್ದರು. ಆ ನಂತರ ಯಾವುದೇ ಪ್ರಶಸ್ತಿಗಳನ್ನೂ ಅವರು ಸ್ವೀಕರಿಸಿರಲಿಲ್ಲ ಎಂದು ನವೀನ್​​ ತಿಳಿಸಿದ್ದಾರೆ.

ಇದನ್ನೂ ಓದಿ: ಹಾಡು ನಿಲ್ಲಿಸಿದ ‘ಗಾನಕೋಗಿಲೆ’; ಖ್ಯಾತ ಗಾಯಕಿ ಎಸ್. ಜಾನಕಿ ನಿಧನ

ಆಸ್ಪತ್ರೆ ಅಂದರೆ ಜಾನಕಮ್ಮನಿಗೆ ಭಯ!

ಈ ನಡುವೆ ಜಾನಕಿಯವರಿಗೆ ಕಾಲಿನ ಇನ್ಫೆಕ್ಷನ್​​ ಆಗಿ ನೋವು ಆರಂಭವಾಗಿತ್ತು. ಭಾಗ್ಯ ಎನ್ನುವವರು ಅವರನ್ನು ನೋಡಿಕೊಳ್ಳುತ್ತಿದ್ದರು. ಹಾಸ್ಪಿಟಲ್​​ ಅಂದರೆ ಜಾನಕಮ್ಮ ಭಯ ಪಡುತ್ತಿದ್ದ ಕಾರಣ ಮನೆಗೇ ನರ್ಸ್​​ ಕರೆಸಿ ಚಿಕಿತ್ಸೆ ಕೊಡಿಸುತ್ತಿದ್ದೆವು. ಆದರೆ ಎದ್ದು ಕುಳಿತುಕೊಳ್ಳಲೂ ಅವರು ಕಷ್ಟ ಪಡುತ್ತಿದ್ದ ಕಾರಣ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದೆವು. ಈ ವೇಳೆ ವೈದ್ಯರು ಶೇಕಡಾ 20-30 ಮಾತ್ರ ಗ್ಯಾರೆಂಟಿ ಕೊಡ್ತೀವಿ ಎಂದು ತಿಳಿಸಿದ್ದರು ಎಂದು ಕೇರ್​​ ಟೇಕರ್​​ ಹೇಳಿದ್ದಾರೆ.

ಇನ್ನು ಜಾನಕಿ ಅವರ ಇಚ್ಛೆಯಂತೆಯೇ ಅವರ ಅಂತಿಮ ವಿಧಿ ವಿಧಾನ ನೆರವೇರಲಿದ್ದು, ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ಮೊಮ್ಮಗಳು ಅಪ್ಸರಾ ನಡೆಸಲಿದ್ದಾರೆ. ಪೊಲೀಸ್​ ಗೌರವದೊಂದಿಗೆ ಮೈಸೂರಿ‌ನಲ್ಲಿಯೇ ಜಾನಕಮ್ಮ ಪಂಚ ಭೂತಗಳಲ್ಲಿ ಲೀನರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 7:16 am, Sun, 12 July 26

Follow Us