Samantha: ದಕ್ಷಿಣದ ನಟಿಯರಿಗೆ ಬಾಲಿವುಡ್​ನಲ್ಲಿ ಆಗುತ್ತಿದ್ದ ಅವಮಾನಗಳ ನೆನಪಿಸಿಕೊಂಡ ಸಮಂತಾ

|

Updated on: Apr 12, 2023 | 9:31 PM

Samantha: ತಾವೂ ಸೇರಿದಂತೆ ದಕ್ಷಿಣ ಭಾರತದ ನಟಿಯರು ಬಾಲಿವುಡ್​ನಲ್ಲಿ ಎದುರಿಸುತ್ತಿದ್ದ ಅಪಮಾನಗಳನ್ನು ನೆನಪಿಸಿಕೊಂಡಿದ್ದಾರೆ ನಟಿ ಸಮಂತಾ.

Samantha: ದಕ್ಷಿಣದ ನಟಿಯರಿಗೆ ಬಾಲಿವುಡ್​ನಲ್ಲಿ ಆಗುತ್ತಿದ್ದ ಅವಮಾನಗಳ ನೆನಪಿಸಿಕೊಂಡ ಸಮಂತಾ
ಸಮಂತಾ
Follow us on

ನಟಿ ಸಮಂತಾ (Samantha) ಇದೀಗ ಭಾರತದ ಅತ್ಯಂತ ಬ್ಯುಸಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಹಲವು ಬಾಲಿವುಡ್ (Bollywood) ನಟಿಯರಿಗಿಂತಲೂ ಹೆಚ್ಚು ಸಂಭಾವನೆ (Remuneration) ಪಡೆಯುತ್ತಿದ್ದಾರೆ. ಸ್ಟಾರ್ ನಟರಂತೆ ಒಬ್ಬರೇ ಸಿನಿಮಾವನ್ನು ಹೆಗಲ ಮೇಲೆ ಹಾಕಿಕೊಂಡು ಗೆಲ್ಲಿಸಬಲ್ಲ ತಾಕತ್ತು ಅವರಿಗೆ ಪ್ರಾಪ್ತವಾಗಿದೆ. ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ದಕ್ಷಿಣದ ಸಿನಿಮಾಗಳಿಂದ ಇದೀಗ ಬಾಲಿವುಡ್​ಗೆ ಸಹ ಕಾಲಿಟ್ಟಿದ್ದಾರೆ. ಆದರೆ ಈ ಹಿಂದೆ ತಾವು ಸೇರಿದಂತೆ ಇತರೆ ದಕ್ಷಿಣದ ನಟಿಯರು ಬಾಲಿವುಡ್​ನಲ್ಲಿ ಎದುರಿಸುತ್ತಿದ್ದ ಅಪಮಾನಗಳ ಬಗ್ಗೆ ಸಮಂತಾ ಮಾತನಾಡಿದ್ದಾರೆ.

ತಮ್ಮ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಶಾಕುಂತಲಂನ ಪ್ರಚಾರದಲ್ಲಿ ಬ್ಯುಸಿಯಾಗಿರುವ ಸಮಂತಾ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ, ದಕ್ಷಿಣ ಭಾರತದ ನಟಿಯರು ಎದುರಿಸಿದ್ದ ಅವಮಾನಗಳ ಬಗ್ಗೆ ಮಾತನಾಡಿದ್ದಾರೆ. ”ಒಂದು ಸಮಯವಿತ್ತು, ನಾವು ದಕ್ಷಿಣ ಭಾರತದ ನಟಿಯರು ದೊಡ್ಡ ಡಿಸೈನರ್​ ಕಡೆಯಿಂದ ನಮ್ಮ ಬಟ್ಟೆಗಳನ್ನು ಮಾಡಿಸಿಕೊಳ್ಳಲಾಗುತ್ತಿರಲಿಲ್ಲ. ಬಟ್ಟೆಗಳನ್ನು ಕೇಳಿದರೆ ಯಾರು ನೀನು? ಎಲ್ಲಿಯವರು? ದಕ್ಷಿಣ ಭಾರತದವರಾ? ಅದೆಲ್ಲಿದೆ? ಎಂದೆಲ್ಲ ಕೀಳಾಗಿ ಕಾಣುತ್ತಿದ್ದರು. ಹಲವು ನಟಿಯರು ಈ ಸಮಸ್ಯೆ ಎದುರಿಸಿದ್ದಾರೆ” ಎಂದಿದ್ದಾರೆ ಸಮಂತಾ.

”ಅಂಥಹಾ ಒಂದು ಸನ್ನಿವೇಶದಿಂದ ಈಗ ಇಂಥಹಾ ಸನ್ನಿವೇಶಕ್ಕೆ ಬಂದಿರುವುದು ದಕ್ಷಿಣ ಭಾರತ ಚಿತ್ರರಂಗದ ಸಾಧನೆ. ಈಗ ಅದಕ್ಕೆ ಸಲ್ಲಬೇಕಾದ ಗೌರವ ಸಿಗುತ್ತಿದೆ. ಎಲ್ಲರನ್ನೂ ಒಳಗೊಳ್ಳುವ ಬದಲಾವಣೆ ಈಗ ಕಂಡುಬರುತ್ತಿದೆ ಇದು ಬಹಳ ಒಳ್ಳೆಯದು. ಭಾರತೀಯ ಚಿತ್ರರಂಗ ಎಂದು ಗುರುತಿಸುತ್ತಿರುವುದು ಬಹಳ ದೊಡ್ಡ ಬೆಳವಣಿಗೆ” ಎಂದಿದ್ದಾರೆ ನಟಿ ಸಮಂತಾ.

ಏಕ್ ದಿವಾನಾ ಥಾ ಹೆಸರಿನ ಹಿಂದಿ ಸಿನಿಮಾದಲ್ಲಿ ಸಮಂತಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಸಮಂತಾ ಈವರೆಗೆ ಯಾವುದೇ ಹಿಂದಿ ಸಿನಿಮಾದಲ್ಲಿ ನಟಿಸಿಲ್ಲ. ಆದರೆ 2021 ರಲ್ಲಿ ಅಮೆಜಾನ್​ನಲ್ಲಿ ಬಿಡುಗಡೆ ಆದ ‘ದಿ ಫ್ಯಾಮಿಲಿ ಮ್ಯಾನ್ 2’ ಹಿಂದಿ ವೆಬ್ ಸರಣಿಯಲ್ಲಿ ನಟಿಸಿದರು. ಇದೀಗ ಸಿಟಾಡೆಲ್ ಹೆಸರಿನ ವೆಬ್ ಸರಣಿಯಲ್ಲಿ ವರುಣ್ ಧವನ್ ಜೊತೆ ನಟಿಸುತ್ತಿದ್ದಾರೆ. ಜೊತೆಗೆ ಸಮಂತಾಗೆ ಕೆಲವು ಹಿಂದಿ ಸಿನಿಮಾ ಆಫರ್​ಗಳು ಸಹ ಇವೆ, ಆದರೆ ಇನ್ನೂ ಯಾವುದನ್ನೂ ಒಪ್ಪಿಕೊಂಡಿಲ್ಲ ಸಮಂತಾ.

ಇದನ್ನೂ ಓದಿ: Samantha: ಶಾಕುಂತಲಂ ಸಿನಿಮಾ ಚಿತ್ರೀಕರಣದ ಐದು ಕೆಟ್ಟ ಅನುಭವಗಳ ನೆನೆದ ಸಮಂತಾ

ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಏಪ್ರಿಲ್ 14 ರಂದು ತೆರೆಗೆ ಬರಲಿದೆ. ಕಾಳಿದಾಸ ರಚಿಸಿರುವ ಅಭಿಜ್ಞಾನ ಶಾಕುಂತಲಾ ಕಾವ್ಯ ಆಧರಿಸಿದ ಸಿನಿಮಾ ಇದಾಗಿದೆ. ಸಿನಿಮಾವನ್ನು ಗುಣಶೇಖರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಪುತ್ರಿ ಸಹ ನಟಿಸಿರುವುದು ವಿಶೇಷ. ಇದರ ಹೊರತಾಗಿ ಸಮಂತಾ, ವಿಜಯ್ ದೇವರಕೊಂಡ ಜೊತೆಗೆ ಖುಷಿ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವರುಣ್ ಧವನ್ ಜೊತೆಗೆ ಸಿಟಾಡೆಲ್ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಈ ಎರಡು ಪ್ರಾಜೆಕ್ಟ್ ಮುಗಿಸಿದ ಬಳಿಕ ಇಂಗ್ಲೀಷ್​ನ ಅರೇಂಜ್​ಮೆಂಟ್ ಆಫ್ ಲವ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಬಾಲಿವುಡ್​ ಸಿನಿಮಾ ಒಂದರಲ್ಲಿ ನಟಿಸುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ