ತನ್ನ ಹೆಸರು ಕೈಬಿಟ್ಟು ಮರುಜೀವ ಕೊಟ್ಟ ಪುಣ್ಯಾತ್ಮನ ಹೆಸರು ಇಟ್ಟುಕೊಂಡ ರವಿ ಬಸ್ರೂರು: ಯಾರು ಆ ರವಿ? ಎಲ್ಲಿದ್ದಾರೆ?

|

Updated on: Jul 01, 2023 | 4:47 PM

Ravi Basrur: ರವಿ ಬಸ್ರೂರು ಹೆಸರು ಸ್ಯಾಂಡಲ್​ವುಡ್ ದಾಟಿ ಟಾಲಿವುಡ್, ಬಾಲಿವುಡ್​ಗಳಲ್ಲಿಯೂ ಹರಿದಾಡುತ್ತಿದೆ. ಆದರೆ ರವಿ ಬಸ್ರೂರು ನಿಜವಾದ ಹೆಸರು ಬೇರೆಯೇ ಇದೆ. ತಮಗೆ ಮರುಜೀವ ಕೊಟ್ಟ ಪುಣ್ಯಾತ್ಮನ ಹೆಸರನ್ನು ರವಿ ತಮಗೆ ಇಟ್ಟುಕೊಂಡಿದ್ದಾರೆ.

ತನ್ನ ಹೆಸರು ಕೈಬಿಟ್ಟು ಮರುಜೀವ ಕೊಟ್ಟ ಪುಣ್ಯಾತ್ಮನ ಹೆಸರು ಇಟ್ಟುಕೊಂಡ ರವಿ ಬಸ್ರೂರು: ಯಾರು ಆ ರವಿ? ಎಲ್ಲಿದ್ದಾರೆ?
ರವಿ ಬಸ್ರೂರು
Follow us on

ರವಿ ಬಸ್ರೂರು (Ravi Basrur) ಹೆಸರು ಕೇಳಿದ ಕೂಡಲೇ ಎರಡು ಹಿನ್ನೆಲೆ ಸಂಗೀತ ಮನಸ್ಸಿಗೆ ಬರುತ್ತದೆ, ಕೆಜಿಎಫ್ (KGF) ಸಿನಿಮಾದಲ್ಲಿ ಯಶ್ (Yash) ನಡೆದು ಕೊಂಡು ಬರುತ್ತಿದ್ದರೆ ಹಿನ್ನೆಲೆಯಲ್ಲಿ ಬಂದ ಮೈ ರೋಮಾಂಚನಗೊಳಿಸುವ ಸಂಗೀತ ಮತ್ತು ಅದೇ ಸಿನಿಮಾದ ತಂದಾನಿ ತಾನೋ ತಾನಿ ತಂದಾನೊ. ಕೆಜಿಎಫ್ ಸಿನಿಮಾ ಮೂಲಕ ರಾಷ್ಟ್ರಾದ್ಯಂತ ಖ್ಯಾತಿ ಗಳಿಸಿ ಬಾಲಿವುಡ್​ನಲ್ಲಿ ಸಲ್ಮಾನ್ ಖಾನ್, ತೆಲುಗಿನ ಪ್ರಭಾಸ್ ಸೇರಿದಂತೆ ಹಲವು ದೊಡ್ಡ ಸ್ಟಾರ್​ಗಳ ಸಿನಿಮಾಗಳಿಗೆ ಸಂಗೀತ ನೀಡುತ್ತಿದ್ದಾರೆ ರವಿ ಬಸ್ರೂರು. ತಮ್ಮ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆಂದು ಹೆಮ್ಮೆಯಿಂದ ಹೇಳುವ ನಿರ್ದೇಶಕ, ನಿರ್ಮಾಪಕರು ಇದ್ದಾರೆ. ಆದರೆ ಪ್ರತಿ ಬಾರಿ ರವಿ ಬಸ್ರೂರು ಹೆಸರು ತೆರೆಯ ಮೇಲೆ ಮೂಡಿದಾಗಲು, ಮಾಧ್ಯಮಗಳಲ್ಲಿ ಕೇಳಿದಾಗಲೋ ಯಾವುದಾದರೂ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಕೇಳಿ ಬಂದಾಗಲೋ ಅದು ಇಬ್ಬರು ವ್ಯಕ್ತಿಗಳಿಗೆ ಗೌರವ ತರುತ್ತದೆ. ಒಬ್ಬರು ಸಂಗೀತ ನಿರ್ದೇಶಕ ರವಿ ಬಸ್ರೂರು, ಇನ್ನೊಬ್ಬರು ಈ ರವಿ ಬಸ್ರೂರಿಗೆ ಮರುಜೀವ ಕೊಟ್ಟ ಅನಾಮಿಕ ರವಿ.

ರವಿ ಬಸ್ರೂರು ಅವರಿಗೆ ತಮ್ಮ ಗ್ರಾಮ ಬಸ್ರೂರಿನ ಮೇಲೆ ಅಪಾರ ಪ್ರೇಮ ಎಂಬ ಕಾರಣಕ್ಕೆ ಬಸ್ರೂರು ಹೆಸರನ್ನು ತಮ್ಮ ಹೆಸರಿನೊಂದಿಗೆ ಜೋಡಿಸಿಕೊಂಡಿದ್ದಾರೆ ಎಂಬುದು ಹಲವರಿಗೆ ಗೊತ್ತು. ಆದರೆ ಅವರ ಮೊದಲ ಹೆಸರು ರವಿ ಎಂಬುದು ಕೂಡ ಅವರ ಸ್ವಂತ ಹೆಸರಲ್ಲ. ತಮಗೆ ಮರುಜೀವ ಕೊಟ್ಟ ಒಬ್ಬ ಅನಾಮಿಕ ವ್ಯಕ್ತಿಯ ಹೆಸರನ್ನು ಅವರ ಗೌರವಾರ್ಥ ಇಟ್ಟುಕೊಂಡಿದ್ದಾರೆ ರವಿ ಬಸ್ರೂರು.

ಚೆನ್ನೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಹಿಂದೆ ಈ ಬಗ್ಗೆ ಹೇಳಿಕೊಂಡಿದ್ದ ರವಿ ಬಸ್ರೂರು, ”ನನ್ನ ಹೆಸರಿನಲ್ಲಿರುವ ರವಿ ಹಾಗೂ ಬಸ್ರೂರು ಎರಡೂ ನಾನಲ್ಲ. ಬಸ್ರೂರು ನನ್ನ ಊರಿನ ಹೆಸರಾದರೆ ರವಿ ಎಂಬುದು ನನಮಗೆ ಪುನರ್ಜನ್ಮ ಕೊಟ್ಟ ವ್ಯಕ್ತಿಯ ಹೆಸರು, ಆ ವ್ಯಕ್ತಿ ಇಲ್ಲದೇ ಇದ್ದಿದ್ದರೆ ನಾನು ಇರುತ್ತಿರಲಿಲ್ಲ. ಅಂದು ಆ ವ್ಯಕ್ತಿ ನನಗೆ ಮಾಡಿದ ಸಹಾಯದಿಂದಲೇ ನಾನು ಸಂಗೀತ ನಿರ್ದೇಶಕನಾಗಿದ್ದು ಇಂದು ಈ ಪ್ರಶಸ್ತಿ ಪಡೆಯುತ್ತಿರುವುದು” ಎಂದು ಹೇಳಿದ್ದರು. ಆ ವ್ಯಕ್ತಿ ತಮಗೆ ಮಾಡಿದ ಸಹಾಯವನ್ನೂ ವಿವರಿಸಿದ್ದರು.

ಇದನ್ನೂ ಓದಿ:KGF Chapter 2: ‘ಕೆಜಿಎಫ್ ಚಾಪ್ಟರ್​ 2’ ಜನರಿಗೆ ಹೆಚ್ಚು ಇಷ್ಟ ಆಗೋಕೆ ಇದೇ ಕಾರಣ..

ಶಿಕ್ಷಣ ಇದ್ದರಷ್ಟೆ ಗೌರವ, ಬದುಕು ಎಂಬ ಪರಿಸ್ಥಿತಿ ಇದೆ. ಎಲ್ಲರೂ ಶಿಕ್ಷಣದ ಬಗ್ಗೆಯೇ ಕೇಳುತ್ತಿದ್ದರು ಆದರೆ ಪ್ರತಿಭೆ ಬಗ್ಗೆ ಯಾರಿಗೂ ಗೌರವ ಇಲ್ಲ. ಆ ಪರಿಸ್ಥಿತಿಯಲ್ಲಿ ನಾನು ಸಂಗೀತಗಾರ ಆಗಬೇಕೆಂದುಕೊಂಡು ವಿಫಲ ಪ್ರಯತ್ನ ಮಾಡಿ ಎಲ್ಲ ಪ್ರಯತ್ನಗಳು ವಿಫಲವಾಗಿದ್ದವು. ಆಗ ನಾನು ಎರಡನೇ ಬಾರಿ ನನ್ನ ಜೀವನ ಅಂತ್ಯಗೊಳಿಸಲು ನಿಶ್ಚಯಿಸಿಬಿಟ್ಟಿದ್ದೆ. ಆಗ ನನ್ನ ಪರಿಚಯದವಾರ ಕಾಮತ್ ಎಂಬುವರು ನನ್ನನ್ನು ಅವೆನ್ಯು ರಸ್ತೆಗೆ ನನ್ನನ್ನು ಕರೆದುಕೊಂಡು ಹೋದರು” ಎಂದು ಕಷ್ಟದ ದಿನಗಳ ನೆನಪಿನ ಸುರಳಿ ಬಿಚ್ಚಿಟ್ಟಿದ್ದರು ರವಿ ಬಸ್ರೂರು.

”ಅಂದು ನನಗೆ ಬಹಳ ಹೊಟ್ಟೆ ಹಸಿದಿತ್ತು. ಸರಿಯಾಗಿ ಊಟ ಮಾಡಿ ಎರಡು ಮೂರು ದಿನಗಳಾಗಿದ್ದವು. ಅಲ್ಲೊಂದು ಚಿನ್ನಾಭರಣದ ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದರು ನೋಡಲು ಹೀರೋ ರೀತಿ ಇದ್ದರು. ಅವರ ಬಳಿ ಹೋಗಿ ಬಹಳ ಕಷ್ಟದಲ್ಲಿದ್ದೇನೆ ಊಟ ಮಾಡಿ ಮೂರು ದಿನವಾಗಿದೆ ಸ್ವಲ್ಪ ಹಣ ಇದ್ದರೆ ಕೊಡಿ ಎಂದೆ. ಆತ ನನ್ನ ಬಗ್ಗೆ ಕೇಳಿದ. ನಾನು ಹೀಗೆ ಸಂಗೀತಗಾರ ಆಗಬೇಕು ಎಂದುಕೊಂಡಿದ್ದೇನೆ ಆದರೆ ಈಗ ನನ್ನ ಬಳಿ ಪಿಯಾನೋ ಸಹ ಇಲ್ಲ ಎಲ್ಲವನ್ನೂ ಮಾರಿಕೊಂಡಿದ್ದೇನೆ” ಎಂದೆ.

ಆ ವ್ಯಕ್ತಿ ನನ್ನನ್ನೇ ಸ್ವಲ್ಪ ಹೊತ್ತು ನೋಡಿ ತನ್ನ ಗಲ್ಲಪೆಟ್ಟಿಗೆ ತೆಗೆದು ಆ ದಿನಗಳಲ್ಲಿ ನನಗೆ 35,000 ರೂಪಾಯಿ ಹಣ ಕೊಟ್ಟುಬಿಟ್ಟರು. ಆ ವ್ಯಕ್ತಿ ಅಂದು ಮಾಡಿದ ಸಹಾಯದಿಂದಲೇ ನಾನು ಸಂಗೀತ ನಿರ್ದೇಶಕನಾಗಲು ಸಾಧ್ಯವಾಯ್ತು. ನನ್ನ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ನನಗೆ ಅಂದು ಸಹಾಯ ಮಾಡಿದ ವ್ಯಕ್ತಿಯ ಹೆಸರು ರವಿ. ಆತನ ಮೇಲಿನ ಗೌರವದಿಂದ ನಾನು ನನ್ನ ಹೆಸರು ಕೈಬಿಟ್ಟು ರವಿ ಎಂದು ಇಟ್ಟುಕೊಂಡೆ, ನನ್ನ ಊರಿನ ಮೇಲೆ ನನಗೆ ವಿಪರೀತ ವ್ಯಾಮೋಹ ಹಾಗಾಗಿ ಎರಡನೇ ಹೆಸರಾಗಿ ಊರಿನ ಹೆಸರು ಇಟ್ಟುಕೊಂಡಿದ್ದೇನೆ” ಎಂದಿದ್ದಾರೆ ರವಿ ಬಸ್ರೂರು. ಅಂದಹಾಗೆ ರವಿ ಬಸ್ರೂರು ನಿಜವಾದ ಹೆಸರು ಕಿರಣ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:40 pm, Sat, 1 July 23