ಹೊಸ ಸಿನಿ ಪ್ರತಿಭೆಗಳ ಬಗ್ಗೆ ಜಗ್ಗೇಶ್-ಬಿ.ಸಿ.ಪಾಟೀಲ್ ಅರ್ಥ-ಅಪಾರ್ಥ ಟ್ವೀಟ್ ವಾರ್

ಸರಣಿ ಟ್ವೀಟ್ ಮೂಲಕ ಜಗ್ಗೇಶ್ ಹೇಳಿಕೆಗೆ ತಿರುಗೇಟು ನೀಡಿರುವ ಬಿ.ಸಿ. ಪಾಟೀಲ್ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಾದ ನೀವೇ ಹೀಗೆ ನಿರುತ್ಸಾಹಗೊಳಿಸಬಾರದು ಎಂದು ಹೇಳಿದ್ದಾರೆ. ಬಿ.ಸಿ. ಪಾಟೀಲ್ ಟ್ವೀಟ್​ಗೆ ಜಗ್ಗೇಶ್ ಕೂಡ ಉತ್ತರ ನೀಡಿದ್ದು. ನೀವು ತಪ್ಪಾಗಿ ಅರ್ಥೈಸಿದ್ದೀರ ಎಂದು ಟ್ವೀಟ್ ಮಾಡಿ ಹೇಳಿದ್ದಾರೆ.

ಹೊಸ ಸಿನಿ ಪ್ರತಿಭೆಗಳ ಬಗ್ಗೆ ಜಗ್ಗೇಶ್-ಬಿ.ಸಿ.ಪಾಟೀಲ್ ಅರ್ಥ-ಅಪಾರ್ಥ ಟ್ವೀಟ್ ವಾರ್
ಬಿ.ಸಿ. ಪಾಟೀಲ್ ಹಾಗೂ ಜಗ್ಗೇಶ್
Edited By:

Updated on: Apr 05, 2022 | 12:59 PM

ಬೆಂಗಳೂರು: ಹೊಸ ಸಿನಿಮಾ ಪ್ರತಿಭೆಗಳ ಬಗ್ಗೆ ನಟ ಹಾಗೂ ಬಿಜೆಪಿ ವಕ್ತಾರ ಜಗ್ಗೇಶ್ ನೀಡಿದ್ದ ಹೇಳಿಕೆಗೆ ಕರ್ನಾಟಕ ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಸರಣಿ ಟ್ವೀಟ್ ಮೂಲಕ ಜಗ್ಗೇಶ್ ಹೇಳಿಕೆಗೆ ತಿರುಗೇಟು ನೀಡಿರುವ ಬಿ.ಸಿ. ಪಾಟೀಲ್ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಾದ ನೀವೇ ಹೀಗೆ ನಿರುತ್ಸಾಹಗೊಳಿಸಬಾರದು ಎಂದು ಹೇಳಿದ್ದಾರೆ. ಬಿ.ಸಿ. ಪಾಟೀಲ್ ಟ್ವೀಟ್​ಗೆ ಜಗ್ಗೇಶ್ ಕೂಡ ಉತ್ತರ ನೀಡಿದ್ದು, ನೀವು ತಪ್ಪಾಗಿ ಅರ್ಥೈಸಿದ್ದೀರ ಎಂದು ಟ್ವೀಟ್ ಮಾಡಿ ಹೇಳಿದ್ದಾರೆ.

ಜಗ್ಗೇಶ್ ಅವರೇ, ಗ್ರಾಮೀಣ ಪ್ರದೇಶದಿಂದ ಬಂದಂತಹ ನಮ್ಮ ನಿಮ್ಮಂತಹವರು ಚಿತ್ರರಂಗಕ್ಕೆ ಹೊಸ ಪೀಳಿಗೆ ಬರಬೇಕು. ಹೊಸ ತಲೆಮಾರಿನ ಪ್ರತಿಭೆಗಳನ್ನು, ಹೊಸಬರನ್ನು ಹಾಗೂ ಅವರ ಕಲೆಯನ್ನು ಪ್ರೋತ್ಸಾಹಿಸಬೇಕು, ಅವರನ್ನು ಬೆಳೆಸಬೇಕೇ ಹೊರತು ಹೊಸ ಪ್ರತಿಭೆಗಳನ್ನು ನಿರುತ್ಸಾಹಗೊಳಿಸಬಾರದು ಎಂದು ಬಿ.ಸಿ. ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ನಟ ಜಗ್ಗೇಶ್, ನೀವು ಅರ್ಧಂಬರ್ಧ ತಿಳಿದುಬಿಟ್ಟಿರಾ? ನನ್ನ ಮಾತು ಸರಿಯಾಗಿ ಅರ್ಥೈಸಿಲ್ಲಾ!ನಾನು ಹೇಳಿದ್ದು ನಮ್ಮ ಕಲೆ ನಿಮ್ಮ 2 ಗಂಟೆ ಸಂತೋಷಕ್ಕೆ ಮಾತ್ರ ಬಳಸಿಕೊಳ್ಳಿ. ಮಿಕ್ಕಂತೆ ನೀವು ನಿಮ್ಮ ತಂದೆತಾಯಿ ಸಮಾಜಕ್ಕೆ ನಾಯಕರಾಗಿ! ನಿಮ್ಮ ರಸ್ತೆ,ನಿಮ್ಮ ಸಮಾಜ, ನಿಮ್ಮ ದೇಶಕ್ಕೆ ಹೀರೋ ಆಗಿರಿ!ಸಿನಿಮ ನಾಯಕರು ನನ್ನನ್ನೂ ಸೇರಿ, ನಿಮ್ಮನ್ನು ರಂಜಿಸುವವರು ಮಾತ್ರ’ ಎಂದು ಹೇಳಿದ್ದಾರೆ.

ಮತ್ತೆ ಟ್ವೀಟ್ ಮೂಲಕ ಮಾತನಾಡಿದ ಬಿ.ಸಿ. ಪಾಟೀಲ್, ಆದರೆ ನೀವು ಯಾರ್ಯಾರೋ ಹೀರೋಗಳು ಬರ್ತಾರೆ, ಅವರ ಸಿನಿಮಾ ನೋಡ್ಬೇಡಿ ಎಂದು ಹೇಳಿರುವುದು ತಪ್ಪು. ಹಳೆಯ ಚಿಗುರು ಹೋಗದೇ ಹೊಸ ಚಿಗುರು ಬರಲು ಸಾಧ್ಯವಿಲ್ಲ. ಅದರಂತೆಯೇ ಚಿತ್ರರಂಗಕ್ಕೆ ಬರುವ ಹೊಸಬರನ್ನು ನಾವು ಪ್ರೋತ್ಸಾಹಿಸಲೇಬೇಕು. ಅವರನ್ನು ತಿರಸ್ಕರಿಸುವುದಾಗಲೀ ನಿರುತ್ಸಾಹಗೊಳಿಸುವುದಾಗಲೀ ಮಾಡಬಾರದು ಎಂದು ಕೇಳಿಕೊಂಡಿದ್ದಾರೆ.

ವಕ್ತಾರರು, ಸಂಘದ ಹಿರಿಯರು, ಶಾಸಕರ ಸಭೆಯಲ್ಲಿ ಉದ್ಘಾಟಕನಾಗಿ ನುಡಿದದ್ದು ಹೇಗೆ ನಿಮಗೆ ಅಪಾರ್ಥವಾಗಿ ಕೇಳಿಸಿತು ನಾಕಾಣೆ? ಕೆಲವರ ಅಪಾರ್ಥಕ್ಕೆ ನಾ ಉತ್ತರಿಸಲಿಲ್ಲಾ! ತಮ್ಮ ಅಪಾರ್ಥಕ್ಕೆ ಉತ್ತರಿಸಿರುವೆ! ಕಡೆಯಿಂದ ಬೆಳೆದು ಕಲೆ ತೆಗಳಲಿಲ್ಲಾ ಬದಲಾಗಿ ಯುವಸಮುಧಾಯಕ್ಕೆ ಹೆಚ್ಚು ಜವಾಬ್ದಾರಿಯಿದೆ ಎಂದಿರುವೆ! ಬಹುಶಃ ತಮಗೆ ವಿಷಯ ಅರಿಯಿತು ಎಂದು ಜಗ್ಗೇಶ್ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ.

ಜಗ್ಗೇಶ್ ಅವರೇ ದಯವಿಟ್ಟು ಇಂತಹ ನಿರುತ್ಸಾಹಗೊಳಿಸುವ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ನೀಡಬೇಡಿ. ನಾನೊಬ್ಬ ಪುಟ್ಟ ಕಲಾವಿದನಾಗಿ ನಿಮ್ಮೊಂದಿಗೆ ಬೆಳೆದವನಾದ್ದರಿಂದ ನಿಮಗೆ ಈ ವಿಷಯವನ್ನು ಗಮನಕ್ಕೆ ತರುತ್ತಿದ್ದೇನೆ. ನಮ್ಮ ನಿಮ್ಮ ಮಕ್ಕಳು ಸಹ ಚಿತ್ರರಂಗಕ್ಕೆ ಬರಬೇಕು. ಯುವಕರನ್ನು ಹೊಸಬರನ್ನು ಪ್ರೋತ್ಸಾಹಿಸಬೇಕೇ ಹೊರತು ಈ ರೀತಿ ಹೊಸಪ್ರತಿಭೆಗಳನ್ನು, ಹೊಸ ಕಲಾವಿದರನ್ನು ನಿರುತ್ಸಾಹಗೊಳಿಸುವಂತಹ ಹೇಳಿಕೆಗಳನ್ನು ನೀಡಬಾರದು ಎಂಬುದು ನನ್ನ ವಿನಂತಿ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಇಂದು ಒಂದು ಮಾತಿಗೆ ನೂರು ತಪ್ಪು ಹುಡುಕಿ ಕೆಣಕಿ ಜೀವಿಸುವವರ ಮಧ್ಯದಲ್ಲಿ ಬದುಕಬೇಕು! ಒಳ್ಳೆಯ ಮಾತು ಅಪಾರ್ಥಮಾಡಿಕೊಂಡರೆ ಉತ್ತಮ ಮಾತು ಮೌನವಾಗಿ ಆತ್ಮದಲ್ಲೆ ಉಳಿಯುತ್ತದೆ! ಹಾಗಾಗದಿರಲಿ!ನೇರನುಡಿಯುವವನ ಮಾತುಗಳು! ನಿಮ್ಮ ಕಾರ್ಯ ರೈತರಪರವಾಗಿ ಯಶಸ್ವಿಯಾಗಲಿ ಶುಭಹಾರೈಕೆ! ರಾಜ್ಯ ವಕ್ತಾರನಾಗಿ ಸ್ನೇಹಿತನಾಗಿ! ಧನ್ಯವಾದ ಎಂದು ಜಗ್ಗೇಶ್ ಮಾತು ಮುಗಿಸಿದ್ದಾರೆ.

ಇದನ್ನೂ ಓದಿ: ಟೈಗರ್​ ಪ್ರಭಾಕರ್​ ಜನ್ಮದಿನ: ಅಣ್ಣನಂತೆ ಭುಜಕೊಟ್ಟರು; ಅಮ್ಮ ತೀರಿಕೊಂಡಾಗ ಸಂತೈಸಿದರು! ಜಗ್ಗೇಶ್​ಗೆ ಪ್ರಭಣ್ಣನ ನೆನಪು

ಇದನ್ನೂ ಓದಿ: ಕಾಂಗ್ರೆಸ್​ ಸೇರಿದ ಮೇಲೆ ನಾಲ್ಕು ನಿವೇಶನ ಮಾರಾಟ ಮಾಡಿದೆ- ಜಗ್ಗೇಶ್​​ ಬೇಸರ

Published On - 11:18 pm, Wed, 31 March 21

Web contact

TV9 Kannada

Read More
Follow Us