‘ನಿಮಗೇನು, ದುಡ್ಡಿದೆ.. ಕುಂಭಮೇಳಕ್ಕೆ ಹೋದ್ರಿ’ ಎಂದವರಿಗೆ ಜಗ್ಗೇಶ್ ಸ್ಪಷ್ಟನೆ

|

Updated on: Feb 24, 2025 | 6:57 PM

ನಟ ಜಗ್ಗೇಶ್​ ಅವರು ಇತ್ತೀಚೆಗೆ ಮಹಾಕುಂಭಮೇಳಕ್ಕೆ ಹೋಗಿ ಬಂದರು. ಬಳಿಕ ಅವರು ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಿದ್ದಾರೆ. ಸೆಲೆಬ್ರಿಟಿ ಆಗಿದ್ದಕ್ಕೆ, ಸಂಸದ ಆಗಿರುವುದಕ್ಕೆ ತಮ್ಮ ಪ್ರಭಾವವನ್ನು ಬಳಸಿ ಜಗ್ಗೇಶ್ ಅವರು ಕುಂಭಮೇಳಕ್ಕೆ ಹೋಗಿ ಬಂದಿರಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ. ಅಂಥವರಿಗೆ ಜಗ್ಗೇಶ್​ ಸ್ಪಷ್ಟನೆ ನೀಡಿದ್ದಾರೆ.

‘ನಿಮಗೇನು, ದುಡ್ಡಿದೆ.. ಕುಂಭಮೇಳಕ್ಕೆ ಹೋದ್ರಿ’ ಎಂದವರಿಗೆ ಜಗ್ಗೇಶ್ ಸ್ಪಷ್ಟನೆ
Jaggesh
Follow us on

ಮಹಾಕುಂಭಮೇಳಕ್ಕೆ ಹೋಗಿ ಬಂದ ನಂತರ ಜಗ್ಗೇಶ್​ ಅವರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ತಾವು ಕುಂಭಮೇಳಕ್ಕೆ ಹೋಗಿದ್ದು ಹೇಗೆ? ಅಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ಅವರು ಈ ಬರಹದ ಮೂಲಕ ವಿವರಿಸಿದ್ದಾರೆ. ಅವರ ಬರಹ ಹೀಗಿದೆ.. ‘ಒಂದು ದಿನ ಇದ್ದದ್ದು ಮತ್ತೊಂದು ದಿನ ಇಲ್ಲವಾಗುವುದು. ನಶ್ವರ ಜಗತ್ತು. ಅರ್ಥಾತ್, ಇಂದು ಇದ್ದುವ ನಾಳೆ ಇರನು. ಇರುವ-ಇರನು ಅಂತರದಲ್ಲಿ ದೇವರ ಅಸ್ಥಿತ್ವ ಪ್ರಧಾನ. ಇದ್ದಾಗ ಶಿವ ಹೋದಾಗ ಶವ. ಇಷ್ಟು ಮನುಷ್ಯನಿಗೆ ಆಳದಲ್ಲಿ ಅರಿವಾದರೆ ಅವನ ‘ನಾನು’ ಅರ್ಥ ಕಳೆದುಕೊಂಡು ‘ನೀನು’ ಉಳಿದು ಬಿಡುತ್ತದೆ. ಆ ‘ನೀನು’ ಪರಬ್ರಹ್ಮಸ್ವರೂಪ ಅಂದರೆ ದೇವರು.’

‘ನನ್ನ ಇತ್ತೀಚಿನ ಕುಂಭಮೇಳಕ್ಕೆ ಹೋದ ಉದಾಹರಣೆ. ಕೆಲವರು ನೀವು ಸಂಸದ ನಿಮಗೇನು ದುಡ್ಡಿದೆ ಹೋದಿರಿ ಎಂದರು. ನಾನು ಹೋದ ಸತ್ಯ ತಿಳಿಸುವೆ. ದೆಹಲಿಯ ಎಲ್ಲಾ ವರಿಷ್ಟರು, ನಮ್ಮ ರಾಜ್ಯದ ಉಸ್ತುವಾರಿ, ನಮ್ಮ ರಾಜ್ಯದ ಕೇಂದ್ರ ಮಂತ್ರಿಗಳ ಹಾಗು ಅವರ ಆಪ್ತ ಸಹಾಯಕರ ಕೇಳಿದೆ. ಯಾರು ತುಟಿ ಬಿಚ್ಚಲಿಲ್ಲ. ಸಹಾಯ ಮಾಡಲಿಲ್ಲಾ.’

‘144 ವರ್ಷಕ್ಕೆ ಒಮ್ಮೆ ಬರುವ ಮಹಾಕುಂಭಕ್ಕೆ ನನಗೆ ಯೋಗವಿಲ್ಲವೆ ಎಂದು ದುಃಖಿಸಿದೆ. ಮನೆಯಲ್ಲಿ ಯಜ್ಞ ಮಾಡಿಸಿ ರಾಯರಲ್ಲಿ ಬೇಡಿಕೆ ಇಟ್ಟು, ನನ್ನ ಜೊತೆ ನೀವಿದ್ದೀರಿ, ಚಿಂತೆ ಏಕೆ ಎಂದು ವಿಮಾನ ಟಿಕಿಟ್ ಯತ್ನಿಸಿದೆ. ಎಲ್ಲ ಸೋಲ್ಡ್​ ಔಟ್ ಆಗಿತ್ತು. ಮತ್ತೆ ವಿಘ್ನವೇ ಎಂದು ಕೊರಗಿದೆ. ಸ್ವಲ್ಪ ಸಮಯದ ನಂತರ ಕರೆಬಂತು. ಸಾರ್ ಒಂದೇ ಇದೆ, ಪರಿಮಳಾ ಅವರಿಗೆ ಆಗದು ಏನು ಮಾಡಲಿ ಎಂದ. ಆಗ ನನ್ನ ಉತ್ತರ, ಬರುವಾಗ ಒಬ್ಬನೇ ಹೋಗುವಾಗ ಒಬ್ಬನೇ ಬುಕ್ ಮಾಡು ಎಂದೆ ಹೋದೆ.’

‘ಅಲ್ಲಿ ನೋಡಿದರೆ ಸಹಾಯ ಮಾಡಲು ಯಾರೂ ಇಲ್ಲ ಇಸ್ಕಾನ್ ಆಲಯದ ಕಾರು ಮಾತ್ರ ಇತ್ತು. ಕೋಟಿ ಜನಸಂಖ್ಯೆಯ ನಡುವೆ ನಾನು ಯಾರು ಇಲ್ಲದ ಅನಾಥನಾದೆ. ರಾಯರೇ ನೀವಿದ್ದೀರಿ ಎಂದೆ ಮನದಲ್ಲಿ. ನೋಡಿ ಬಂದ ಒಬ್ಬ ಪರಿಚಯವಿಲ್ಲದ ಮಾಜಿ ಕ್ರಿಕೆಟಿಗ ಪುಂಜ. ಆತನಿಗೆ ಸಿಕ್ಕ ಪ್ರೋಟೋಕಾಲ್ ಬಳಸಿ ಕೋಟಿ ಜನಜಂಗುಳಿ ನಡುವೆ ಪೋಲೀಸರ ಹಾರನ್ ಹಾಕಿ ಪಕ್ಕ ತ್ರಿವೇಣಿ ಸಂಗಮಕ್ಕೆ ಹೋಗಿ ಸ್ನಾನ ಮಾಡಿಸಿಬಿಟ್ಟ. ಅವರ ಮತ್ತೊಬ್ಬ ಸಂಗಡಿಗರು ನಮ್ಮ ಮಲ್ಲೇಶ್ವರ ಹೆಮ್ಮೆಯ ಶಾಸಕರು ಅಶ್ವಥ್ ಅವರು.’

ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಜಗ್ಗೇಶ್ ಏನೆಲ್ಲ ಮಾಡಿದ್ರು ನೋಡಿ..

‘ವಾಪಸ್ ಬರುವಾಗ ನಮ್ಮ ವಿಮಾನ 5 ಗಂಟೆ ವಿಳಂಬ ಎಂದರು. ಏನು ಮಾಡೋದು ಫುಟ್​ಪಾತಲ್ಲಿ ಕಾಫಿ ಕುಡಿಯುತ್ತ ಕುಳಿತೆ. ನಂತರ ಮತ್ತೊಂದು ಪವಾಡ. ವಿಮಾನದ ಉಸ್ತುವಾರಿ ಬಂದು ಸಾರ್ ನಿಮ್ಮ ವಿಮಾನ ತಡವಾಗುತ್ತೆ, ಈಗ ಹಾರಲು ತಯಾರಿರುವ ವಿಮಾನ ಇದೆ, ಹೋಗಿ ಎಂದು ಟಿಕೆಟ್ ಬದಲಿಸಿ ಬೆಂಗಳೂರಿಗೆ ಕಳಿಸಿಬಿಟ್ಟ. ಈಗ ಹೇಳಿ, ನಮ್ಮ ಬದುಕಿಗೆ ಯಾರು ಬೇಕು? ಕೆಲಸಕ್ಕೆ ಬಾರದ ಸಮಯೋಚಿತ ಸಹಾಯಕ್ಕೆ ಬರುವ ಮನುಷ್ಯರೋ ಅಥವಾ ನಮ್ಮೊಳಗೆ ಇರುವ ದೇವರ?’

‘ಶುದ್ಧವಾಗಿ ಬದುಕಿ ಆಧ್ಯಾತ್ಮಿಕ ದಾರಿಯಲ್ಲಿ ನಡೆಯುವವರ ಬೆನ್ನ ಹಿಂದೆ ಕಾಯಲು ಒಬ್ಬರು ಇದ್ದೆ ಇರುತ್ತಾರೆ. ಅವರೇ ನಮ್ಮ ರಾಯರು. ಯಾರ ಬಗ್ಗೆ ಅರಿವಿರದೇ ಹಂಗಸಬೇಡಿ. ಭಗವತ್ ಭಕ್ತರು ನೊಂದರೆ ಮರೆಯಲಾಗದ ದುಃಖ ಕಾಡಿ ಬಿಡುತ್ತದೆ ಅಣಕ ಹಂಗಿಸಿದವರಿಗೆ. ನಿಮ್ಮ ಪಾಡಿಗೆ ಯಾರಿಗೂ ತೊಂದರೆ ಕೊಡದೆ ಸುಂದರವಾಗಿ ಬದುಕಿ. ದೇವರು ನಿಮ್ಮ ಜೊತೆ ಇರುತ್ತಾರೆ. ನನ್ನ ಬದುಕಂತೂ ಎಲ್ಲೆಲ್ಲೂ ರಾಯರೇ ಕಾಣುತ್ತಾರೆ. ನಂಬಿದ ಭಕ್ತರಿಗೆ ರಾಯರು ಕೈಬಿಡರು. ಗುರುವೇ ಶರಣಂ. ಮಾರ್ಚ್ 6 ರಾಯರ ಹುಟ್ಟುಹಬ್ಬ. ಹೋಗುತ್ತಿರುವೆಮ ಸಾಧ್ಯವಾದರೆ ನೀವೂ ಬನ್ನಿ.’

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.