ಬಾಸಿಸಂ​ ಕೇಕ್​ ವಿವಾದಕ್ಕೆ ಸ್ಪಷ್ಟನೆ ನೀಡಿದ ಸುದೀಪ್​ ಆಪ್ತ ಪ್ರದೀಪ್​

|

Updated on: Dec 26, 2024 | 10:57 PM

ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಗೆಲ್ಲುತ್ತಿದ್ದಂತೆಯೇ ಆಪ್ತ ಬಳಗದವರು ಸೆಲೆಬ್ರೇಟ್ ಮಾಡಿದ್ದಾರೆ. ಈ ವೇಳೆ ಕತ್ತರಿಸಿದ ಕೇಕ್​ನಲ್ಲಿ ‘ಬಾಸಿಸಂ​ ಕಾಲ ಮುಗಿಯಿತು’ ಎಂದು ಬರೆದಿರುವುದು ಕೆಲವರ ಕಣ್ಣು ಕುಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋ ಬಗ್ಗೆ ಸುದೀಪ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ನಟ ಪ್ರದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಾಸಿಸಂ​ ಕೇಕ್​ ವಿವಾದಕ್ಕೆ ಸ್ಪಷ್ಟನೆ ನೀಡಿದ ಸುದೀಪ್​ ಆಪ್ತ ಪ್ರದೀಪ್​
Pradeep
Follow us on

‘ಬಾಸಿಸಂ​ ಕಾಲ ಮುಗಿಯಿತು, ಮ್ಯಾಕ್ಸಿಮಮ್ ಮಾಸ್​ ಕಾಲ ಶುರುವಾಯ್ತು’ ಎಂಬ ವಾಕ್ಯ ಈಗ ಸೆನ್ಸೇಷನ್ ಸೃಷ್ಟಿ ಮಾಡಿದೆ. ಕಿಚ್ಚ ಸುದೀಪ್​ ನಟನೆಯ ‘ಮ್ಯಾಕ್ಸ್’ ಸಿನಿಮಾ ಹಿಟ್ ಆಗಿದೆ. ಈ ಖುಷಿಯನ್ನು ಸೆಲೆಬ್ರೇಟ್​ ಮಾಡಲು ಕಟ್ ಮಾಡಿದ ಕೇಕ್​ನಲ್ಲಿ ಈ ಮೇಲಿನ ವಾಕ್ಯ ಕಾಣಿಸಿದೆ. ಇದನ್ನು ನೋಡಿ ಹಲವರು ಹಲವು ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಈ ವಾಕ್ಯದ ಮೂಲಕ ಬೇರೆ ನಟರಿಗೆ ಟಾಂಗ್ ಕೊಡಲಾಗಿದೆಯಾ ಎಂಬ ಅನುಮಾನ ಕೂಡ ಮೂಡಿದೆ. ಈ ಎಲ್ಲ ಪ್ರಶ್ನೆಗಳಿಗೆ ನಟ ಪ್ರದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಕೇಕ್ ಹಿಂದಿರುವ ಪೂರ್ತಿ ಕಹಾನಿಯನ್ನು ಅವರು ವಿವರಿಸಿದ್ದಾರೆ.

‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್​ 25ರಂದು ಬಿಡುಗಡೆ ಆಯಿತು. ಎರಡೂವರೆ ವರ್ಷಗಳ ಗ್ಯಾಪ್ ಬಳಿಕ ಸುದೀಪ್ ಅವರು ಬಿಗ್ ಸ್ಕ್ರೀನ್​ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಅವರ ಅಭಿಮಾನಿಗಳಿಗೆ ಸಖತ್ ಖುಷಿ ಆಯಿತು. ಅಲ್ಲದೇ ಚಿತ್ರರಂಗದಲ್ಲಿ ಇರುವ ಸುದೀಪ್ ಅವರ ಆಪ್ತ ಬಳಗದವರು ಕೂಡ ಈ ಸಿನಿಮಾಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ಮೊದಲ ದಿನ ಹೌಸ್​ಫುಲ್ ಆದ ಬಳಿಕ ಪ್ರದೀಪ್ ಮುಂತಾದವರು ಸಂಭ್ರಮಿಸಿದರು. ಆ ಸಂಭ್ರಮಾಚರಣೆಗೆ ಸಿದ್ಧವಾಗಿದ್ದೇ ಈ ಕೇಕ್​.

‘ನಿನ್ನೆ ಮ್ಯಾಕ್ಸ್ ಸಿನಿಮಾ ಬಿಡುಗಡೆ ಆಯಿತು. ಸಿನಿಮಾ ನೋಡಿದ ಮೇಲೆ ತುಂಬ ಇಷ್ಟ ಆಯಿತು. ಹಾಗಾಗಿ ವಿಶ್ ಮಾಡಲು ಸುದೀಪಣ್ಣ ಅವರ ಮನೆಗೆ ನಾನು ರಾತ್ರಿ ಹೋಗಿದ್ದೆ. ಹೋಗುವ ದಾರಿಯಲ್ಲಿ ನಾನು ಆ ಕೇಕ್​ ತೆಗೆದುಕೊಂಡು ಹೋಗಿದ್ದೆ. ಅದರ ಮೇಲೆ ಬರೆದ ಲೈನ್ಸ್​ಗೆ​ ಅನಗತ್ಯವಾಗಿ ಬೇರೆ ನಟರನ್ನು ಲಿಂಕ್ ಮಾಡಿ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ನನ್ನ ಗಮನಕ್ಕೆ ಬಂತು. ಹಾಗಾಗಿ ಸ್ಪಷ್ಟನೆ ನೀಡುತ್ತಿದ್ದೇನೆ’ ಎಂದು ಪ್ರದೀಪ್ ಹೇಳಿದ್ದಾರೆ.

‘ಯಾವ ನಟನಿಗೂ ಹೋಲಿಕೆ ಮಾಡಿ ಕೇಕ್ ಮೇಲೆ ಅದನ್ನು ಬರೆದಿಲ್ಲ. ಮ್ಯಾಕ್ಸ್​ ಸಿನಿಮಾದ ಹಾಡಿನಲ್ಲಿ ಲೈನ್ ಬರುತ್ತದೆ. ಮ್ಯಾಕ್ಸೇ ಮ್ಯಾಕ್ಸಿಮಮ್ ಮಾಸ್​. ಮಾಸಲಿ ಮಾಸಿಗೇ ಬಾಸ್​ ಎಂಬ ಸಾಲನ್ನೇ ಅನುವಾದಿಸಿ ಕೇಕ್​ ಮೇಲೆ ಬರೆಸಲಾಗಿತ್ತು. ಪ್ರತಿ ನಟರಿಗೆ ತಮ್ಮದೇ ಆದ ಫ್ಯಾನ್ಸ್ ಬಳಗ ಇರುತ್ತೆ. ಅವರು ತಮ್ಮ ಹೀರೋಗೆ ಬಾಸ್​, ಅಣ್ಣ, ಸರ್ ಎಂದೆಲ್ಲ ಕರೆಯುತ್ತಾರೆ. ಒಂದು ಪದ ಯಾವ ನಟನಿಗೂ ಸೀಮಿತ ಆಗಿರುವುದಿಲ್ಲ. ಯಾವ ನಾಯಕ ನಟನನ್ನೂ ಉದ್ದೇಶಿಸಿ ಬರೆದ ಸಾಲು ಅದಲ್ಲ’ ಎಂದು ಪ್ರದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Max Movie Review: ‘ಮ್ಯಾಕ್ಸ್’ ಸಿನಿಮಾಗೆ ಬಲ ತುಂಬಿದ ಕಥೆಯ ಶರವೇಗ, ಕಿಚ್ಚನ ಆವೇಗ

‘ಸೋಶಿಯಲ್ ಮೀಡಿಯಾದಲ್ಲಿ ಯಾರೂ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಯಾರಿಗೂ ವೈಯಕ್ತಿಕವಾಗಿ ಮಾಡಿರುವಂಥದ್ದಲ್ಲ. ಕನ್ನಡ ಚಿತ್ರರಂಗ ಅದ್ಭುತವಾದ ಕುಟುಂಬ. ಡಿಸೆಂಬರ್​ನಲ್ಲಿ ಬಂದ ಯುಐ, ಮ್ಯಾಕ್ಸ್ ಸಿನಿಮಾಗಳು ಅದ್ಭುತ ಪ್ರದರ್ಶನ ಕಂಡಿವೆ. ಕನ್ನಡ ಚಿತ್ರರಂಗದಲ್ಲಿ ಯಾವ ನಟನೂ ಇನ್ನೊಬ್ಬ ನಟನಿಗೆ ಟಾಂಟ್​ ಕೊಡುವ ಪರಿಸ್ಥಿತಿ ಬಂದಿಲ್ಲ’ ಎಂದಿದ್ದಾರೆ ಪ್ರದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.