ವಿಷ್ಣುವರ್ಧನ್​ ಓದಿದ ಕನ್ನಡ ಮಾಧ್ಯಮ ಶಾಲೆ ಉಳಿಸಲು ಪಣತೊಟ್ಟ ನಟಿ ಪ್ರಣಿತಾ ಸುಭಾಷ್​

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮಾಡೆಲ್​ ಪ್ರೌಢಶಾಲೆಗೆ ಬೀಗ ಹಾಕಲಾಗುತ್ತಿದೆ. 150 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ವಿಷ್ಣುವರ್ಧನ್​ ಅವರು ಶಿಕ್ಷಣ ಪಡೆದಿದ್ದಾರೆ.

ವಿಷ್ಣುವರ್ಧನ್​ ಓದಿದ ಕನ್ನಡ ಮಾಧ್ಯಮ ಶಾಲೆ ಉಳಿಸಲು ಪಣತೊಟ್ಟ ನಟಿ ಪ್ರಣಿತಾ ಸುಭಾಷ್​
ವಿಷ್ಣುವರ್ಧನ್​-ಪ್ರಣಿತಾ

Updated on: Mar 30, 2021 | 8:59 PM

ಪ್ರಣಿತಾ ಸುಭಾಷ್​ ಕೇವಲ ನಟನೆಯಲ್ಲಿ ಮಾತ್ರ ತೊಡಗಿಕೊಂಡಿಲ್ಲ. ನಟನೆಯ ಜತೆ ಜತೆಗೆ ಸಾಕಷ್ಟು ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕನ್ನಡ ಶಾಲೆಗಳನ್ನು ರಕ್ಷಿಸಿ ಎಂದು ಅವರು ಸಾಕಷ್ಟು ಬಾರಿ ಕರೆ ನೀಡಿದ್ದಿದೆ. ಈಗ ನಟ ವಿಷ್ಣುವರ್ಧನ್​ ಅವರು ಕಲಿತ ಶಾಲೆಗೆ ಸರ್ಕಾರ ಬೀಗ ಹಾಕಲು ಹೊರಟಿದ್ದು, ಇದಕ್ಕೆ ಪ್ರಣಿತಾ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಶಾಲೆ ಮುಚ್ಚದಂತೆ ನೋಡಿಕೊಳ್ಳಲು ಅಗತ್ಯ ಸಹಕಾರ ನೀಡುವುದಾಗಿ ಹೇಳಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮಾಡೆಲ್​ ಪ್ರೌಢಶಾಲೆಗೆ ಬೀಗ ಹಾಕಲಾಗುತ್ತಿದೆ. 150 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ವಿಷ್ಣುವರ್ಧನ್​ ಅವರು ಶಿಕ್ಷಣ ಪಡೆದಿದ್ದಾರೆ. ಆದರೆ, ಕಳೆದ ಮೂರು ವರ್ಷಗಳಿಂದ ಶಾಲೆಗೆ ಯಾವುದೇ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿಲ್ಲ. ಹೀಗಾಗಿ, ಶಾಲೆ ಮುಚ್ಚಲಾಗಿದೆ

ಈ ವಿಚಾರ ನಟಿ ಪ್ರಣಿತಾ ಅವರ ಗಮನಕ್ಕೆ ಬಂದಿದೆ. ಈ ಬಗ್ಗೆ ಇಂಗ್ಲಿಷ್​ ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನು ಟ್ವೀಟ್​ ಮಾಡಿರುವ ಅವರು, ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ, ಹಾಗೆಯೇ ಡಾ. ವಿಷ್ಣುವರ್ಧನ್ ರವರು ಓದಿರುವ ಸಂಸ್ಥೆಯು ಮುಚ್ಚುತಿರುವುದು ನನಗೆ ಬೇಸರ ತಂದಿದೆ. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರವು ಗಮನಹರಿಸಬೇಕೆಂದು ದಯಮಾಡಿ ಕೇಳಿಕೊಳ್ಳುತ್ತೇನೆ. ಪ್ರಣಿತಾ ಫೌಂಡೇಷನ್​ ಮೂಲಕ ಸಾಧ್ಯವಾದಷ್ಟು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್​ಗೆ ಪ್ರತಿಕ್ರಿಯೆ ನೀಡಿರುವ ಪ್ರಣಿತಾ, ಸರ್ಕಾರಿ ಶಾಲೆ ಅಂದರೆ ಅಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎನ್ನುವ ಭಾವನೆ ಜನರಲ್ಲಿ ಬೆಳೆದಿದೆ. ಹೀಗಾಗಿ, ಅವರು ಮಕ್ಕಳನ್ನು ಸರ್ಕಾರಿ ಶಾಳೆಗೆ ಕಳುಹಿಸುತ್ತಿಲ್ಲ. ಇದರಿಂದ ಶಾಲೆಗಳು ಮುಚ್ಚುತ್ತಿವೆ. ಇದರ ಬಗ್ಗೆ ನಾನು ಈ ಮೊದಲು ಕೂಡ ಧ್ವನಿ ಎತ್ತಿದ್ದೆ. ಮಾಡೆಲ್​ ಪ್ರೌಢಶಾಲೆ ಮುಚ್ಚುತ್ತಿದೆ ಎನ್ನುವ ವಿಚಾರ ತಿಳಿದಾಗ ನನಗೆ ಬೇಸರವಾಯಿತು. ಹೀಗಾಗಿ, ನನ್ನ ಫೌಂಡೇಷನ್​ ಮೂಲಕ ನನ್ನ ಕೈಲಾದಷ್ಟು ಸಹಾಯ ಮಾಡಲು ಮುಂದಾದೆ ಎಂದಿದ್ದಾರೆ.

ಈ ಮೊದಲು ಪ್ರಣಿತಾ ಹಾಸನದಲ್ಲಿ ಶಾಲೆಯೊಂದನ್ನು ದತ್ತು ತೆಗೆದುಕೊಂಡಿದ್ದರು. ಅವರು ದತ್ತು ತೆಗೆದುಕೊಳ್ಳುವಾಗ ಈ ಶಾಲೆಗೆ 20-25 ವಿದ್ಯಾರ್ಥಿಗಳು ಮಾತ್ರ ಬರುತ್ತಿದ್ದರಂತೆ. ಈಗ ಈ ಸಂಖ್ಯೆ 60ಕ್ಕೆ ಏರಿಕೆ ಆಗಿದೆ ಅನ್ನೋದು ವಿಶೇಷ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ ನಟಿ ಪ್ರಣೀತಾ

Published On - 8:52 pm, Tue, 30 March 21

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us