‘ಕರಾವಳಿ’ ಸಿನಿಮಾಗೆ ಸಂಪದಾ ನಾಯಕಿ; ಪ್ರಜ್ವಲ್​ ನಟನೆಯ ಚಿತ್ರದಲ್ಲಿ ಕನ್ನಡತಿಗೆ ಅವಕಾಶ

‘ಕರಾವಳಿ’ ಚಿತ್ರದ ಹೀರೋಯಿನ್​ ಕುರಿತು ಮಾಹಿತಿ ಹಂಚಿಕೊಳ್ಳುವ ಸಲುವಾಗಿ ಬಿಡುಗಡೆ ಆಗಿರುವ ಹೊಸ ಪೋಸ್ಟರ್​ನಲ್ಲಿ ಸಂಪದಾ ಅವರು ಕೆಂಪು ಸೀರೆ ಧರಿಸಿ ಮಿಂಚಿದ್ದಾರೆ. ಈ ಚಿತ್ರದ ಟೈಟಲ್​ ಸೂಚಿಸುವಂತೆ ಇದು ಸಂಪೂರ್ಣ ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಹಾಗಾಗಿ ಸಂಪದಾ ಅವರು ಕರಾವಳಿ ಬೆಡಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

‘ಕರಾವಳಿ’ ಸಿನಿಮಾಗೆ ಸಂಪದಾ ನಾಯಕಿ; ಪ್ರಜ್ವಲ್​ ನಟನೆಯ ಚಿತ್ರದಲ್ಲಿ ಕನ್ನಡತಿಗೆ ಅವಕಾಶ
ಸಂಪದಾ

Updated on: Feb 14, 2024 | 2:25 PM

ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಕರಾವಳಿ’ ಸಿನಿಮಾ (Karavali Movie) ನಿರೀಕ್ಷೆ ಮೂಡಿಸಿದೆ. ‘ಅಂಬಿ ನಿಂಗ್​ ವಯಸ್ಸಾಯ್ತೋ’ ಖ್ಯಾತಿಯ ಗುರುದತ್ತ ಗಾಣಿಗ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ (Prajwal Devaraj) ಅವರು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ‘ಕರಾವಳಿ’ ಸಿನಿಮಾದಿಂದ ಹೊಸ ಅಪ್‌ಡೇಟ್ ತಿಳಿಯಲು ಫ್ಯಾನ್ಸ್​ ಕಾತರದಿಂದ ಕಾದಿದ್ದರು. ಈಗ ಈ ಸಿನಿಮಾ ತಂಡದಿಂದ ಹೊಸ ಮಾಹಿತಿಯೊಂದನ್ನು ಹಂಚಿಕೊಳ್ಳಲಾಗಿದೆ. ‘ಕರಾವಳಿ’ ಸಿನಿಮಾದ ನಾಯಕಿ ಯಾರು ಎಂಬ ಮಾಹಿತಿ ಬಹಿರಂಗ ಆಗಿದೆ. ನಟಿ ಸಂಪದಾ (Sampada) ಅವರು ಈ ಸಿನಿಮಾಗೆ ಹೀರೋಯಿನ್​ ಆಗಿ ಎಂಟ್ರಿ ನೀಡಿದ್ದಾರೆ.

‘ಕರಾವಳಿ’ ಸಿನಿಮಾಗೆ ಕನ್ನಡದವರೇ ನಾಯಕಿ ಆಗುತ್ತಾರಾ ಅಥವಾ ಪರಭಾಷೆಯ ನಟಿಯನ್ನು ಕರೆತರಲಾಗುತ್ತಾ ಎಂಬ ಕುತೂಹಲ ಪ್ರಜ್ವಲ್​ ದೇವರಾಜ್​ ಅವರ ಅಭಿಮಾನಿಗಳಲ್ಲಿ ಇತ್ತು. ಆ ಕೌತುಕಕ್ಕೆ ಈಗ ಪೂರ್ಣವಿರಾಮ ಬಿದ್ದಿದೆ. ಕಿರುತೆರೆಯಲ್ಲಿ ಖ್ಯಾತಿ ಪಡೆದಿರುವ ನಟಿ ಸಂಪದಾ ಅವರು ಪ್ಜಜ್ವಲ್‌ಗೆ ನಾಯಕಿಯಾಗುವ ಮೂಲಕ ದೊಡ್ಡ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಟೀಸರ್​ ಮೂಲಕ ಹೈಪ್​ ಹೆಚ್ಚಿಸಿಕೊಂಡಿರುವ ಇಂಥ ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ಅವರು ಹೀರೋಯಿನ್​ ಆಗಿ ಸ್ಯಾಂಡಲ್​ವುಡ್​ನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಸಂಪದಾ ಅವರು ಈ ಮೊದಲು ನಿಖಿಲ್ ಕುಮಾರ್ ನಟನೆಯ ‘ರೈಡರ್’ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರು. ಈಗ ‘ಕರಾವಳಿ’ ಸಿನಿಮಾದ ಕಥೆಯನ್ನು ಕೇಳಿ ಇಂಪ್ರೆಸ್ ಆಗಿರುವ ಅವರು ಪ್ರಜ್ವಲ್ ದೇವರಾಜ್​ ಜೊತೆ ತೆರೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಇಂದು (ಫೆಬ್ರವರಿ 14) ‘ವ್ಯಾಲೆಂಟೈನ್ಸ್​ ಡೇ’ ಪ್ರಯುಕ್ತ ವಿಶೇಷವಾಗಿ ‘ಕರಾವಳಿ’ ಸಿನಿಮಾ ತಂಡದವರು ನಾಯಕಿ ಯಾರೆಂದನ್ನು ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ಬೃಹತ್ ಸೆಟ್​ನಲ್ಲಿ ‘ಚೀತಾ’ ಚಿತ್ರೀಕರಣ, ಮಾಸ್ ಪಾತ್ರದಲ್ಲಿ ಪ್ರಜ್ವಲ್

ನಾಯಕಿ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಅನಾವರಣ ಆಗಿರುವ ಪೋಸ್ಟರ್​ನಲ್ಲಿ ನಟಿ ಸಂಪದಾ ಅವರು ಕೆಂಪು ಸೀರೆ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಶೀರ್ಷಿಕೆಯೇ ಸೂಚಿಸುವ ಹಾಗೆ ಪಕ್ಕಾ ಕರಾವಳಿ ಭಾಗದ ಕಥೆಯಿರುವ ಸಿನಿಮಾ ಇದು. ಕರಾವಳಿಯಲ್ಲೇ ಸಂಪೂರ್ಣ ಕಥೆ ಸಾಗಲಿದೆ. ಸಂಪದಾ ಕೂಡ ಕರಾವಳಿಯ ಹುಡುಗಿಯ ಪಾತ್ರದಲ್ಲಿ ನಟಿಸಲಿದ್ದಾರೆ.

ಸಚಿನ್ ಬಸ್ರೂರು ಅವರು ‘ಕರಾವಳಿ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅಭಿಮನ್ಯೂ ಸದಾನಂದನ್ ಅವರು ಛಾಯಾಗ್ರಹಣ ಮಾಡಲಿದ್ದಾರೆ. ಇದು ಪ್ರಜ್ವಲ್ ದೇವರಾಜ್​ ಅಭಿನಯದ 40ನೇ ಸಿನಿಮಾ ಎಂಬುದು ಕೂಡ ವಿಶೇಷ. ಈವರೆಗೂ ಕಾಣಿಸಿಕೊಳ್ಳದಂತಹ ಪಾತ್ರಕ್ಕೆ ಪ್ರಜ್ವಲ್​ ಅವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಮಂಗಳೂರು ಸುತ್ತಮುತ್ತ ಶೂಟಿಂಗ್​​ ನಡೆಯಲಿದೆ. ‘ಕರಾವಳಿ’ ಸಿನಿಮಾಗೆ ಶೀಘ್ರದಲ್ಲೇ ಚಿತ್ರೀಕರಣ ಆರಂಭ ಆಗಲಿದೆ. ಮಂಗಳೂರು ಸುತ್ತಮುತ್ತ ಶೂಟಿಂಗ್​​ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us