‘ಸುಮನ್ ರಂಗನಾಥನ್ ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ’; ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ‘ತದ್ವಿರುದ್ಧ’ ಟೀಂ

ನಟಿ ಸುಮನ್ ರಂಗನಾಥನ್ ವಿರುದ್ಧ ‘ತದ್ವಿರುದ್ಧ’ ಚಿತ್ರತಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಜುಲೈ 31 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಒಪ್ಪಂದದ ಪ್ರಕಾರ ನಟಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಭಾಗವಹಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ನಿರ್ಮಾಣ ಸಂಸ್ಥೆ ಗಂಭೀರವಾಗಿ ಆರೋಪಿಸಿದೆ.

‘ಸುಮನ್ ರಂಗನಾಥನ್ ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ’; ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ‘ತದ್ವಿರುದ್ಧ’ ಟೀಂ
ಸುಮನ್ ರಂಗನಾಥ್

Updated on: Jul 25, 2026 | 12:22 PM

ಮುಖ್ಯಾಂಶಗಳು

  • ಸಂಭಾವನೆ ಪಡೆದರೂ ಪ್ರಚಾರಕ್ಕೆ ಗೈರಾದ ಸುಮನ್ ರಂಗನಾಥನ್
  • ನಟಿ ಸುಮನ್ ರಂಗನಾಥನ್ ವಿರುದ್ಧ ಚೇಂಬರ್ ಮೆಟ್ಟಿಲೇರಿದ ನಿರ್ಮಾಪಕರು
  • ಕಳೆದ 30 ದಿನಗಳಿಂದ ಫೋನ್ ಹಾಗೂ ವಾಟ್ಸಾಪ್ ಕರೆಗಳಿಗೂ ಸಿಗದ ನಟಿ 

ಬಹುಭಾಷಾ ನಟಿ ಸುಮನ್ ರಂಗನಾಥನ್ (Suman Ranganathan) ವಿರುದ್ಧ ‘ತದ್ವಿರುದ್ಧ’ ಸಿನಿಮಾದ ನಿರ್ಮಾಣ ಸಂಸ್ಥೆ ಚಾರ್ಮಿಯನ್ ಮೋಷನ್ ಪಿಕ್ಚರ್ಸ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧಿಕೃತವಾಗಿ ದೂರು ನೀಡಿದೆ. ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದರೂ ನಟಿ ಪ್ರಚಾರ ಕಾರ್ಯಕ್ರಮಗಳಿಗೆ ಸಹಕರಿಸುತ್ತಿಲ್ಲ ಎಂದು ಚಿತ್ರತಂಡ ಗಂಭೀರವಾಗಿ ಆರೋಪಿಸಿದೆ. ನಟಿಗೆ ನೀಡಬೇಕಾದ ಸಂಭಾವನೆಯನ್ನು ಸಂಪೂರ್ಣವಾಗಿ ಚುಕ್ತಾ ಮಾಡಿದ್ದರೂ, ಅವರು ಕಳೆದ ಕೆಲವು ತಿಂಗಳುಗಳಿಂದ ಚಿತ್ರತಂಡಕ್ಕೆ ಸಿಗದೆ ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ವಾಣಿಜ್ಯ ಮಂಡಳಿಗೆ ನೀಡಿರುವ ದೂರಿನ ಪತ್ರದಲ್ಲಿ ಚಿತ್ರತಂಡ ಹಲವು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದೆ. 2023ರ ಏಪ್ರಿಲ್ 7 ರಂದು ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ ಸುಮನ್ ರಂಗನಾಥನ್ ಅವರು ನಟನೆ, ಡಬ್ಬಿಂಗ್ ಹಾಗೂ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಕಳೆದ 30 ದಿನಗಳಿಂದ ನಟಿ ಹಾಗೂ ಅವರ ಮ್ಯಾನೇಜರ್ ಶಿವು ಅವರನ್ನು ಸಂಪರ್ಕಿಸಲು ಚಿತ್ರತಂಡ ನಿರಂತರವಾಗಿ ಫೋನ್ ಕರೆ, ವಾಟ್ಸಾಪ್ ಸಂದೇಶಗಳ ಮೂಲಕ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ತದ್ವಿರುದ್ಧ’ ಚಿತ್ರವು ಇದೇ ಜುಲೈ 31ರಂದು ತೆರೆಗೆ ಬರಲು ಸಿದ್ಧವಾಗಿದೆ. ಬಿಡುಗಡೆಗೆ ಮುನ್ನ ಇರುವ ಈ 10 ದಿನಗಳ ಪ್ರಚಾರದ ಅವಧಿಯು ಚಿತ್ರದ ಯಶಸ್ಸಿನ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ಇಂತಹ ಸಂದರ್ಭದಲ್ಲಿ ನಟಿಯಿಂದ ಯಾವುದೇ ಸಹಕಾರ ಸಿಗದೇ ಇರುವುದರಿಂದ ಚಿತ್ರಕ್ಕೆ ಹಾಗೂ ನಿರ್ಮಾಣ ಸಂಸ್ಥೆಗೆ ಭಾರಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಚಿತ್ರತಂಡ ಆತಂಕ ಹೊರಹಾಕಿದೆ.

ಇದನ್ನೂ ಓದಿ: ಡಾಲಿ ಧನಂಜಯ್ ಜೊತೆ ತೋತಾಪುರಿ ಚಿತ್ರದಲ್ಲಿ ಸುಮನ್ ರಂಗನಾಥ್ 3 ವಿಭಿನ್ನ ಲುಕ್

ಹೀಗಾಗಿ ಚಿತ್ರದ ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಈ ಸಮಸ್ಯೆಯನ್ನು ವಾಣಿಜ್ಯ ಮಂಡಳಿಯು ಮಧ್ಯಸ್ಥಿಕೆ ವಹಿಸಿ ಸೌಹಾರ್ದಯುತವಾಗಿ ಪರಿಹರಿಸಿಕೊಡಬೇಕು ಎಂದು ಚಿತ್ರತಂಡದ ಸದಸ್ಯರು ಒಟ್ಟಾಗಿ ಚೇಂಬರ್ ಮೆಟ್ಟಿಲೇರಿದ್ದಾರೆ. ವಿನೋದ್ ನಿರ್ದೇಶನದ ಈ ಸಿನಿಮಾದಲ್ಲಿ ಮುರಳಿ ಹಾಗೂ ಸುಚೇಂದ್ರ ಪ್ರಸಾದ್ ಸೇರಿದಂತೆ ಹಲವು ಹಿರಿಯ ಕಲಾವಿದರ ದಂಡೇ ಇದೆ. ಸದ್ಯ ಚಿತ್ರತಂಡದ ಈ ಗಂಭೀರ ಆರೋಪಕ್ಕೆ ನಟಿ ಸುಮನ್ ರಂಗನಾಥನ್ ಕಡೆಯಿಂದ ಏನು ಸ್ಪಷ್ಟನೆ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:19 pm, Sat, 25 July 26

Loading...
Unable to load recommendations.
Follow Us