ದೇವರಿಗೆ ಮುಡಿ ಕೊಟ್ಟು, ಪುನೀತ್​ಗಾಗಿ ಹಾಡು ಹೇಳಿದ ನಟಿ ವಿಜಯಲಕ್ಷ್ಮೀ; ಇಲ್ಲಿದೆ ವಿಡಿಯೋ

Puneeth Rajkumar: ಮೈಸೂರಿನಲ್ಲಿ ಇರುವ ಪುನೀತ್​ ರಾಜ್​ಕುಮಾರ್ ಅಭಿಮಾನಿಗಳು ಪ್ರೋತ್ಸಾಹ ನೀಡಿದ್ದರಿಂದ ಈ ರೀತಿ ಗಾನ ನಮನ ಸಲ್ಲಿಸುತ್ತಿರುವುದಾಗಿ ವಿಜಯಲಕ್ಷ್ಮೀ ಹೇಳಿದ್ದಾರೆ. ಈ ವಿಡಿಯೋದಲ್ಲಿ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ದೇವರಿಗೆ ಮುಡಿ ಕೊಟ್ಟು, ಪುನೀತ್​ಗಾಗಿ ಹಾಡು ಹೇಳಿದ ನಟಿ ವಿಜಯಲಕ್ಷ್ಮೀ; ಇಲ್ಲಿದೆ ವಿಡಿಯೋ
ವಿಜಯಲಕ್ಷ್ಮೀ, ಪುನೀತ್​ ರಾಜ್​ಕುಮಾರ್
Edited By:

Updated on: Nov 22, 2021 | 3:58 PM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಎಲ್ಲರೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಎಲ್ಲರ ಪಾಲಿಗೂ ಅಪ್ಪು ಪ್ರೀತಿ ಪಾತ್ರರಾಗಿದ್ದರು. ಪುನೀತ್​ ಇಂದು ನಮ್ಮೊಂದಿಗೆ ಇಲ್ಲ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಟಿ ವಿಜಯಲಕ್ಷ್ಮೀ (Actress Vijayalakshmi) ಅವರಿಗೂ ಇದೇ ಭಾವ ಆವರಿಸಿದೆ. ಹಾಗಾಗಿ ಅವರು ಸೋಶಿಯಲ್​ ಮೀಡಿಯಾ ಮೂಲಕ ಪುನೀತ್​ ರಾಜ್​ಕುಮಾರ್​ಗೆ ಗಾನ ನಮನ ಸಲ್ಲಿಸಿದ್ದಾರೆ. ಅವರು ಹಂಚಿಕೊಂಡಿರುವ ವಿಡಿಯೋ ಗಮನ ಸೆಳೆಯುತ್ತಿದೆ. ಅಚ್ಚರಿ ಎಂದರೆ ಅವರು ತಲೆ ಬೋಳಿಸಿಕೊಂಡಿದ್ದಾರೆ. ದೇವರಿಗೆ ಮುಡಿಕೊಟ್ಟು, ಪುನೀತ್​ಗಾಗಿ ಹಾಡು ಹೇಳಿದ್ದಾರೆ. ಡಾ. ರಾಜ್​ಕುಮಾರ್​ ನಟನೆಯ ‘ಕ್ರಾಂತಿ ವೀರ’ ಸಿನಿಮಾದ ‘ಯಾರು ಏನು ಮಾಡುವರು..’ ಹಾಡನ್ನು ವಿಜಯಲಕ್ಷ್ಮೀ ಹೇಳಿದ್ದಾರೆ. ಈ ರೀತಿ ಮಾಡುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಡಾ. ರಾಜ್​ಕುಮಾರ್ (Dr Rajkumar), ಪಾರ್ವತಮ್ಮ ರಾಜ್​ಕುಮಾರ್​, ಶಿವರಾಜ್​ಕುಮಾರ್​ ಬಗ್ಗೆಯೂ ವಿಜಯಲಕ್ಷ್ಮೀ ಮಾತನಾಡಿದ್ದಾರೆ.

‘ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು. ನನಗೆ ಏನಾಯಿತು ಎಂದು ನೀವೆಲ್ಲಾ ಯೋಚನೆ ಮಾಡುತ್ತಿರಬಹುದು. ಇದು ನಮ್ಮ ಮನೆದೇವರ ಹರಕೆ. ಮೊದಲೆಲ್ಲ ಇದನ್ನು ತಂದೆ ಮಾಡುತ್ತಿದ್ದರು. ಈಗ ತಂದೆ ಇಲ್ಲ. ಅಕ್ಕನ ಆರೋಗ್ಯ ಸರಿಯಿಲ್ಲ. ಹಾಗಾಗಿ ಹರಕೆಯ ಜವಾಬ್ದಾರಿ ನಾನು ತೆಗೆದುಕೊಂಡೆ. ಮನೆ ದೇವರಿಗೆ ಕೂದಲು ಕೊಟ್ಟಿದ್ದೇನೆ’ ಎಂದು ತಲೆ ಬೋಳಿಸಿಕೊಂಡಿದ್ದಕ್ಕೆ ವಿಜಯಲಕ್ಷ್ಮೀ ಕಾರಣ ತಿಳಿಸಿದ್ದಾರೆ.

‘ಸದಾ ಕಾಲ ಟೀಕೆಯ ಭಯದಲ್ಲೇ ನಾನು ಇರುತ್ತೇನೆ. ಮೊನ್ನೆ ನಾನು ‘ಗೊಂಬೆ ಹೇಳುತೈತೆ..’ ಹಾಡನ್ನು ಹಾಡಿದ್ದೆ. ಪುನೀತ್​ ರಾಜ್​ಕುಮಾರ್​ ಅವರ ಮೈಸೂರಿನ ಅಭಿಮಾನಿಗಳ ಸಂಘದಿಂದ ನನಗೆ ಕರೆ ಮಾಡಿದ್ದರು. ಚೆನ್ನಾಗಿ ಹಾಡಿದ್ದೀರಿ ಅಂತ ಪ್ರೋತ್ಸಾಹಿಸಿದರು. ಪುನೀತ್​ ಮೇಲಿನ ಅಭಿಮಾನಕ್ಕಾಗಿ ನಾನು ಆ ಹಾಡನ್ನು ಹಾಡಿದ್ದು. ಪುನೀತ್​ ಸರ್​ ಮತ್ತು ನನ್ನ ಜನ್ಮದಿನಾಂಕ ಒಂದೇ. ಅದನ್ನು ಆಗಾಗ ಪಾರ್ವತಮ್ಮ ಅವರು ಕೂಡ ನೆನಪಿಸಿಕೊಳ್ಳುತ್ತಿದ್ದರು. ಅಪ್ಪಾಜಿ (ಡಾ. ರಾಜ್​) ಯಾರ ಮೇಲೂ ದ್ವೇಷ ಇಟ್ಟುಕೊಳ್ಳುತ್ತಿರಲಿಲ್ಲ. ಎಲ್ಲರನ್ನೂ ಕ್ಷಮಿಸುತ್ತಿದ್ದರು. ರಾಘಣ್ಣ ಮತ್ತು ಶಿವರಾಜ್​ಕುಮಾರ್​ ಅವರದ್ದೂ ಒಳ್ಳೆಯ ವ್ಯಕ್ತಿತ್ವ’ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.

‘ರಾಜ್​ಕುಮಾರ್​ ಕುಟುಂಬದ ಸದಸ್ಯರ ಗುಣ ಹೇಗೆ ಎಂಬುದನ್ನು ನಾನು ತಮಿಳುನಾಡಿನಲ್ಲೂ ಹೇಳುತ್ತಿದ್ದೆ. ಎಲ್ಲರಿಗೂ ಪ್ರೀತಿ ಕೊಡುವಂತಹ ಫ್ಯಾಮಿಲಿ ಅದು. ಪುನೀತ್​ ಅದ್ಭುತ ಡ್ಯಾನ್ಸರ್​ ಆಗಿದ್ದರು. ಅವರ ಪ್ರತಿಭೆ ಮತ್ತು ಬದ್ಧತೆ ಎಲ್ಲರಿಗೂ ಸ್ಫೂರ್ತಿ ಆಗುವಂಥದ್ದು. ಎಷ್ಟು ವರ್ಷಗಳು ಕಳೆದರೂ ಪುನೀತ್​ ಇಲ್ಲ ಎಂಬುದನ್ನು ನಂಬಲು ಆಗುವುದಿಲ್ಲ’ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ. ಮೈಸೂರಿನಲ್ಲಿ ಇರುವ ಪುನೀತ್​ ರಾಜ್​ಕುಮಾರ್ ಅಭಿಮಾನಿಗಳು ಪ್ರೋತ್ಸಾಹ ನೀಡಿದ್ದಕ್ಕಾಗಿ ಈ ರೀತಿ ಗಾನ ನಮನ ಸಲ್ಲಿಸಿರುವುದಾಗಿ ವಿಜಯಲಕ್ಷ್ಮೀ ಹೇಳಿದ್ದಾರೆ.

ಇದನ್ನೂ ಓದಿ:

2 ಮುಖ್ಯ ವಿಚಾರವನ್ನು ಪುಷ್ಕರ್​ ಜತೆ ಚರ್ಚಿಸಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದ ಪುನೀತ್​

ಪುನೀತ್​ ನೆನಪಲ್ಲಿ ಇನ್ನೊಂದು ದೊಡ್ಡ ಕಾರ್ಯಕ್ರಮ ‘ಅಪ್ಪು ಅಮರ’; ಇದು ಕಿರುತೆರೆ ಮಂದಿಯ ನಮನ

Web contact

TV9 Kannada

Read More
Follow Us