ಇಂದು ಅಂಬರೀಷ್ ಬದುಕಿದ್ದರೆ 69ನೇ ವಯಸ್ಸಿಗೆ ಕಾಲಿಡುತ್ತಿದ್ದರು. ಆದರೆ, ಅವರು ನಮ್ಮೊಂದಿಗಿಲ್ಲ. ಅಂಬಿ ಇಲ್ಲದೆಯೇ ಜನ್ಮದಿನವನ್ನು ಸಿಂಪಲ್ ಆಗಿ ಆಚರಿಸಲಾಗಿದೆ.
ಎಲ್ಲವೂ ಸುಸ್ಥಿತಿಯಲ್ಲಿದ್ದರೆ ಅಂಬಿ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಅನ್ನಸಂತರ್ಪಣೆ ನಡೆಯುತ್ತಿತ್ತು. ಕೆಲವು ಕಡೆಗಳಲ್ಲಿ ಅಂಬಿ ಕಟೌಟ್ ಹಾಕಿ ಹಾಲಿನ ಅಭಿಷೇಕ ಮಾಡಲಾಗುತ್ತಿತ್ತು.
ಈ ಬಾರಿ ಸರ್ಕಾರ ಕೊವಿಡ್ ನಿಯಂತ್ರಣಕ್ಕೆ ಲಾಕ್ಡೌನ್ ಘೋಷಣೆ ಮಾಡಿದೆ. ಯಾರೊಬ್ಬರೂ ಮನೆಯಿಂದ ಹೊರ ಬರೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಯಾರೂ ಅಂಬರೀಷ್ ಜನ್ಮದಿನ ಆಚರಣೆ ಮಾಡುವುದು ಬೇಡ ಎಂದು ಸುಮಲತಾ ಕರೆ ನೀಡಿದ್ದರು.
ಅಂತೆಯೇಯೇ ಅಂಬರೀಷ್ ಜನ್ಮದಿನವನ್ನು ಇಂದು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಷ್ ಸ್ಮಾರಕಕ್ಕೆ ಸುಮಲತಾ ಅಂಬರೀಷ್, ಅವರ ಪುತ್ರ ಅಭಿಷೇಕ್ ಅವರು ಭೇಟಿ ನೀಡಿ, ಮೇರುನಟನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್, ಚಿತ್ರ ನಟ ದೊಡ್ಡಣ್ಣ ಮತ್ತಿತ್ತರರು ಉಪಸ್ಥಿತರಿದ್ದರು.
Published On - 4:54 pm, Sat, 29 May 21