‘ಮರೆವು ದೇವರು ಕೊಟ್ಟಿರೋ ವರ’; ಶಂಕರ್ ನಾಗ್ ಇಲ್ಲ ಎಂಬ ನೋವಿನಿಂದ ಹೊರ ಬಂದಿರೋ ಅನಂತ್ ನಾಗ್

| Updated By: ರಾಜೇಶ್ ದುಗ್ಗುಮನೆ

Updated on: Sep 04, 2023 | 12:13 PM

ಇಂದು (ಸೆಪ್ಟೆಂಬರ್ 4) ಅನಂತ್ ನಾಗ್ ಅವರ ಹುಟ್ಟುಹಬ್ಬ. ‘ಸಂಕಲ್ಪ’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಚಿತ್ರರಂಗದಲ್ಲಿ ಅವರು 50 ವರ್ಷಗಳನ್ನು ಪೂರೈಸಿದ್ದಾರೆ. ಅವರು ಟಿವಿ9 ಕನ್ನಡದ ಜೊತೆ ಮಾತನಾಡುವಾಗ ಆಹಾರ ಪದ್ಧತಿ ಬಗ್ಗೆ ಮಾತನಾಡಿದ್ದಾರೆ.

‘ಮರೆವು ದೇವರು ಕೊಟ್ಟಿರೋ ವರ’; ಶಂಕರ್ ನಾಗ್ ಇಲ್ಲ ಎಂಬ ನೋವಿನಿಂದ ಹೊರ ಬಂದಿರೋ ಅನಂತ್ ನಾಗ್
ಶಂಕರ್ ನಾಗ್-ಅನಂತ್ ನಾಗ್
Follow us on

ಅನಂತ್ ನಾಗ್ (Anant Nag) ಅವರಿಗೆ ಇಂದು (ಸೆಪ್ಟೆಂಬರ್ 4) ಜನ್ಮದಿನ. ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಅನಂತ್ ನಾಗ್ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದಾರೆ. ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ. ಚಿತ್ರರಂಗದಲ್ಲಿ 5 ದಶಕ ಪೂರೈಸಿರುವುದರಿಂದ ಬರ್ತ್ ಡೇ ಖುಷಿ ಡಬಲ್ ಆಗಿದೆ. ಅವರು ತಮ್ಮ ಸಿನಿಮಾ ಪಯಣದ ಕುರಿತು ಟಿವಿ9 ಜೊತೆ ಇತ್ತೀಚೆಗೆ ಮಾತನಾಡಿದ್ದಾರೆ. ಅಪಘಾತದಲ್ಲಿ ತೀರಿಕೊಂಡ ತಮ್ಮ ಶಂಕರ್ ನಾಗ್ ಕುರಿತು ಹಲವು ವಿಷಯ ಹಂಚಿಕೊಂಡ ಅನಂತ್ ನಾಗ್, ಕಾಲದ ಜೊತೆ ಅವರು ಸಾಗಿದ ದಾರಿಯನ್ನು ನೆನಪಿಸಿಕೊಂಡಿದ್ದಾರೆ. ಅವರು ಹೇಳಿದ ಮಾತುಗಳು ಈ ಸ್ಟೋರಿಯಲ್ಲಿದೆ.

ಶಂಕರ್ ನಾಗ್ ಇನ್ನೂ ಬದುಕಿ ಬಾಳಬೇಕಿತ್ತು. ಆದರೆ, ಹಾಗಾಗಲಿಲ್ಲ. ಅವರು ಅಪಘಾತದಲ್ಲಿ ಮತಪಟ್ಟರು. ಈ ಬಗ್ಗೆ ಅನಂತ್ ನಾಗ್ ಮಾತನಾಡಿದ್ದಾರೆ. ‘ನಿತ್ಯವೂ ಜೊತೆಯಲ್ಲಿದ್ದಾಗ ಅದು ಬೇರೆ. ಆದರೆ, ಶಂಕರ್ ನಾಗ್ ನಮ್ಮನ್ನು ಬಿಟ್ಟು ಮೂರು ದಶಕ ಕಳೆದಿದೆ. ಆರಂಭದ ದಿನಗಳಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೆ. ಆದರೆ, ಅವನಿಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಂಡಿದ್ದೇನೆ. ಯಾರೇ ಇಲ್ಲ ಎಂದರೂ ಎಲ್ಲರ ಮನಸ್ಸೂ ಇದಕ್ಕೆ ಅಡ್ಜಸ್ಟ್​ ಆಗುತ್ತದೆ’ ಎಂದಿದ್ದಾರೆ ಅವರು.

‘ಮರೆವು ಮನುಷ್ಯನಿಗೆ ಸಿಕ್ಕ ಅತೀ ದೊಡ್ಡ ವರ. ಇದು ಸತ್ಯವಾದ ಮಾತು. ಮರೆವು ಇಲ್ಲದೆ ಹೋಗಿದ್ದರೆ ಮನುಷ್ಯ ಬದುಕಲು ಸಾಧ್ಯವಾಗುತ್ತಿರಲಿಲ್ಲ. ನಾವು ದಿನದ 24 ಗಂಟೆಯೂ ಒಬ್ಬರನ್ನು ನೆನಪಿಸಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಮರೆವು. ಕಹಿ ಘಟನೆಗಳನ್ನು ಮೆರೆತು ಮುಂದೆ ಸಾಗಲು ಸಹಾಯ ಮಾಡುತ್ತದೆ’ ಎಂದರು ಅನಂತ್ ನಾಗ್.

ಇದನ್ನೂ ಓದಿ: ‘ಹೊಟ್ಟೆ ಪಾಡಿಗೆ ಏನು ಮಾಡ್ತೀಯಾ ಕೇಳಿದ್ರು’; ರಂಗಭೂಮಿ ದಿನಗಳನ್ನು ನೆನಪಿಸಿಕೊಂಡ ಅನಂತ್ ನಾಗ್

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾದಲ್ಲಿ ಅನಂತ್ ನಾಗ್ ಮರೆವಿನ ಕಾಯಿಲೆ (ಅಲ್​ಜೈಮರ್​) ಇರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಈ ರೋಗ ಅಪಾಯಕಾರಿ. ಈ ರೀತಿಯಲ್ಲಿ ಮರೆವು ಬರಬಾರದು ಎಂದು ಅವರು ಹೇಳಿದ್ದಾರೆ. ‘ಅಲ್​ಜೈಮರ್ ಕಾಯಿಲೆಯಿಂದ ಬಳಲುವವರಿಗೆ ತಮ್ಮ ಹೆಸರು, ತಾನು ಯಾರು ಎಂಬುದೇ ಗೊತ್ತಿರುವುದಿಲ್ಲ. ಯಾರಿಗೂ ಹಾಗಾಗಬಾರದು. ವ್ಯಕ್ತಿಗೆ ತನ್ನ ಅಸ್ತಿತ್ವದ ಅರಿವೇ ಇಲ್ಲದೆ ಹೋದರೆ ಕಷ್ಟವಾಗುತ್ತದೆ’ ಎಂದರು ಅನಂತ್ ನಾಗ್.

ಅನಂತ್ ನಾಗ್ ಸಸ್ಯಹಾರಿ

ಅನಂತ್ ನಾಗ್ ಸಸ್ಯಹಾರ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಮೊದಲು ಅವರು ಮಾಂಸಹಾರವನ್ನೂ ತಿನ್ನುವ ಪ್ರಯತ್ನ ಮಾಡಿದ್ದರಂತೆ. ಆದರೆ ಅದು ಅವರಿಗೆ ರುಚಿಸಲಿಲ್ಲ. ‘ತಮ್ಮ ಶಂಕರ್ ಮಾಂಸಹಾರ ತಿನ್ನಿಸಲು ಅನೇಕ ಬಾರಿ ಪ್ರಯತ್ನಿಸಿದ್ದ. ಆದರೆ ನನಗೆ ಒಗ್ಗದೇ ಇದ್ದಿದ್ದರಿಂದ ನಾನು ಅದನ್ನು ತಿನ್ನುವ ಪ್ರಯತ್ನ ಮಾಡಲಿಲ್ಲ. ಆಹಾರ ಎಂಬುದು ವ್ಯಕ್ತಿಗತವಾದದ್ದು. ಅವರವರಿಗೆ ಇಷ್ಟದ ಆಹಾರವನ್ನು ಆರಿಸಿಕೊಳ್ಳಬಹುದು’ ಎಂದಿದ್ದಾರೆ ಅನಂತ್ ನಾಗ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ