‘ಜಸ್ಟ್ ಮ್ಯಾರೀಡ್’: ಶೈನ್ ಶೆಟ್ಟಿ, ಅಂಕಿತಾ ಅಭಿಮಾನಿಗಳಿಗೆ ಇಲ್ಲಿದೆ ಖುಷಿ ಸುದ್ದಿ

‘ಜಸ್ಟ್ ಮ್ಯಾರೀಡ್’ ಚಿತ್ರದಲ್ಲಿ ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ಜೊತೆ ದೊಡ್ಡ ಪಾತ್ರವರ್ಗ ಇದೆ. ಅಚ್ಯುತ್​ ಕುಮಾರ್, ಅನೂಪ್ ಭಂಡಾರಿ, ದೇವರಾಜ್, ಶ್ರುತಿ ಹರಿಹರನ್, ಮಾಳವಿಕಾ ಅವಿನಾಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಅಜನೀಶ್ ಲೋಕನಾಥ್ ನಿರ್ಮಾಪಕನಾಗಿದ್ದಾರೆ. ಸಿ.ಆರ್. ಬಾಬಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

‘ಜಸ್ಟ್ ಮ್ಯಾರೀಡ್’: ಶೈನ್ ಶೆಟ್ಟಿ, ಅಂಕಿತಾ ಅಭಿಮಾನಿಗಳಿಗೆ ಇಲ್ಲಿದೆ ಖುಷಿ ಸುದ್ದಿ
ಶೈನ್​ ಶೆಟ್ಟಿ, ಅಂಕಿತಾ ಅಮರ್

Updated on: Apr 21, 2024 | 4:30 PM

ಅಜನೀಶ್ ಲೋಕನಾಥ್ (Ajaneesh Loknath) ಮತ್ತು ಸಿ.ಆರ್. ಬಾಬಿ ಅವರು ‘ಜಸ್ಟ್ ಮ್ಯಾರೀಡ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಿ.ಆರ್. ಬಾಬಿ ನಿರ್ದೇಶನ ಮಾಡುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಕಿರುತೆರೆ ಕಲಾವಿದೆ ಅಂಕಿತಾ ಅಮರ್ (Ankita Amar) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ‘ಜಸ್ಟ್​ ಮ್ಯಾರೀಡ್​’ ಸಿನಿಮಾ ತಂಡದಿಂದ ಒಂದು ಗುಡ್​ ನ್ಯೂಸ್​ ಕೇಳಿಬಂದಿದೆ. ಅದೇನೆಂದರೆ, ಈ ಚಿತ್ರಕ್ಕೆ ಶೂಟಿಂಗ್​ ಮುಕ್ತಾಯ ಆಗಿದೆ. ದೊಡ್ಡ ಪರದೆಯಲ್ಲಿ ಶೈನ್​ ಶೆಟ್ಟಿ (Shine Shetty) ಹಾಗೂ ಅಂಕಿತಾ ಅಮರ್​ ಅವರನ್ನು ಜೋಡಿಯಾಗಿ ನೋಡಬೇಕು ಎಂದು ಕಾದಿರುವ ಅಭಿಮಾನಿಗಳಿಗೆ ಈ ನ್ಯೂಸ್​ ಕೇಳಿ ಖುಷಿ ಆಗಿದೆ.

‘ಜಸ್ಟ್ ಮ್ಯಾರೀಡ್’ ಸಿನಿಮಾಗೆ ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಶೂಟಿಂಗ್​ ಮಾಡಲಾಗಿದೆ. ಈಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಬಿರುಸಿನಿಂದ ಸಾಗಿವೆ. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯತೆ ಪಡೆದ ಅಜನೀಶ್ ಲೋಕನಾಥ್ ಅವರು ಈ ಸಿನಿಮಾದ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ಸಿ.ಆರ್.ಬಾಬಿ ಅವರು ಈ ಸಿನಿಮಾದ ನಿರ್ಮಾಣದಲ್ಲಿ ಅಜನೀಶ್​ಗೆ ಸಾಥ್ ನೀಡಿದ್ದಾರೆ. ಸಿ.ಆರ್. ಬಾಬಿ ಅವರು ಇಷ್ಟು ದಿನಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಬ್ಯುಸಿ ಆಗಿದ್ದರು. ಈಗ ಸಿನಿಮಾ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಈ ಸಿನಿಮಾದಲ್ಲಿ 6 ಸುಮಧುರ ಗೀತೆಗಳು ಇರಲಿವೆ. ಅವುಗಳಿಗೆ ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅವುಗಳ ಪೈಕಿ, ಪ್ರಮೋದ್ ಮರವಂತೆ ಬರೆದ, ವಿಜಯ್ ಪ್ರಕಾಶ್ ಧ್ವನಿ ನೀಡಿದ ‘ಅಭಿಮಾನಿಯಾಗಿ ಹೋದೆ..’ ಗೀತೆ ಇತ್ತೀಚಿಗೆ ರಿಲೀಸ್​ ಆಗಿ ಮೆಚ್ಚುಗೆ ಪಡೆದಿದೆ. ‘ಜಸ್ಟ್ ಮ್ಯಾರೀಡ್’ ಒಂದು ಲವ್​ ಸ್ಟೋರಿ ಸಿನಿಮಾ ಆಗಿದ್ದರೂ ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳು ಇರಲಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ಜಸ್ಟ್ ಮ್ಯಾರೀಡ್’ ಚಿತ್ರದಲ್ಲಿ ಶೈನ್ ಶೆಟ್ಟಿ, ಅಂಕಿತಾ ಅಮರ್, ಅಚ್ಯುತ್​ ಕುಮಾರ್, ದೇವರಾಜ್, ಅನೂಪ್ ಭಂಡಾರಿ, ಮಾಳವಿಕಾ ಅವಿನಾಶ್, ಶ್ರುತಿ ಹರಿಹರನ್, ಸಾಕ್ಷಿ ಅಗರವಾಲ್, ಶ್ರುತಿ ಕೃಷ್ಣ, ರವಿಶಂಕರ್ ಗೌಡ, ಶ್ರೀಮಾನ್, ರವಿ ಭಟ್, ಸಂಗೀತಾ ಅನಿಲ್, ವಾಣಿ ಹರಿಕೃಷ್ಣ, ಕುಮುದಾ, ವೇದಿಕಾ ಕಾರ್ಕಳ, ಜಯರಾಮ್ ಮುಂತಾದವರು ನಟಿಸಿದ್ದಾರೆ ಎಂಬುದು ವಿಶೇಷ. ಸಿ.ಆರ್. ಬಾಬಿ ಅವರೇ ಕಥೆ ಬರೆದಿದ್ದಾರೆ‌. ಅವರ ಜೊತೆ ಸೇರಿ ಧನಂಜಯ್ ರಂಜನ್ ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರದ ಸಂಭಾಷಣೆ ರಘು ನಿಡುವಳ್ಳಿ ಅವರದ್ದು.

ಇದನ್ನೂ ಓದಿ: ಅಯೋಧ್ಯೆಯ ಶ್ರೀರಾಮ ಮಂದಿರದ ಕುರಿತು ಕನ್ನಡದಲ್ಲಿ ಬರಲಿದೆ ಅದ್ದೂರಿ ಸಿನಿಮಾ

ಪಿ.ಜಿ. ಛಾಯಾಗ್ರಹಣ, ಶ್ರೀಕಾಂತ್ ಹಾಗೂ ಅಶಿಕ್ ಕುಸುಗೊಳ್ಳಿ ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ. ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us