ಬಿಗ್​​ಬಾಸ್ ಕನ್ನಡ 12: ತಾತ್ಕಾಲಿಕ ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ

Bigg Boss Kannada season 12: ಬಿಗ್​​ಬಾಸ್ ಕನ್ನಡ 12ರ ಸೆಟ್ ನಿರ್ಮಾಣ ಮಾಡಲಾಗಿದ್ದ ವೆಲ್ಸ್ ಸ್ಟುಡಿಯೋಸ್ ಒಡೆತನದ ಜಾಲಿವುಡ್ ಸ್ಟುಡಿಯೋಸ್ ಅನ್ನು ಮಾಲಿನ್ಯ ಇಲಾಖೆ ಅಧಿಕಾರಿಗಳ ದೂರಿನ ಮೇರೆಗೆ ಬಂದ್ ಮಾಡಲಾಗಿದೆ. ಇದರಿಂದಾಗಿ ಬಿಗ್​​ಬಾಸ್ ಶೋ ಬಂದ್ ಆಗಿದೆ. ಇದೀಗ ವೆಲ್ಸ್ ಸ್ಟುಡಿಯೋಸ್ ಅಧಿಕಾರಿಗಳು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಪತ್ರ ಬರೆದಿದ್ದು 15 ದಿನಗಳ ತಾತ್ಕಾಲಿಕ ಅನುಮತಿಗಾಗಿ ಮನವಿ ಮಾಡಿದ್ದಾರೆ.

ಬಿಗ್​​ಬಾಸ್ ಕನ್ನಡ 12: ತಾತ್ಕಾಲಿಕ ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ
Jollywood Studios

Updated on: Oct 08, 2025 | 12:28 PM

ಮಾಲಿನ್ಯ ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎಂದು ಬಿಗ್​​ಬಾಸ್ (Bigg Boss) ಕನ್ನಡ ಸೆಟ್ ನಿರ್ಮಾಣವಾಗಿದ್ದ ಜಾಲಿವುಡ್ ಸ್ಟುಡಿಯೋಕ್ಕೆ ನಿನ್ನೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಬಿಗ್​​ಬಾಸ್ ಕನ್ನಡ ಶೋ ಅನ್ನು ಸಹ ಬಂದ್ ಮಾಡಲಾಗಿದ್ದು, ಸ್ಪರ್ಧಿಗಳನ್ನೆಲ್ಲ ರೆಸಾರ್ಟ್​​ಗೆ ಸ್ಥಳಾಂತರ ಮಾಡಲಾಗಿದೆ. ಇದೀಗ ಜಾಲಿವುಡ್​​ ಸ್ಟುಡಿಯೋಸ್​​ನ ಮಾತೃ ಸಂಸ್ಥೆ ವೇಲ್ಸ್ ಸ್ಟುಡಿಯೋಸ್​​ನವರು ತಾತ್ಕಾಲಿಕ ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳಿಗೆ ವೇಲ್ಸ್ ಸ್ಟುಡಿಯೋಸ್​​ನವರು ಪತ್ರ ಬರೆದಿದ್ದು, ನಾವು ಪರವಾನಗಿ ಪಡೆದು ಸ್ಟುಡಿಯೋ ನಡೆಸುತ್ತಿದ್ದೇವೆ. ನಮ್ಮ ಸ್ಟುಡಿಯೋನಲ್ಲಿನ ಎಲ್ಲ ಚಟುವಟಿಕೆಗಳಿಗೆ ಪರವಾನಗಿ ಇದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆಯ ಕೆಲವು ನಿಯಮಗಳನ್ನು ನಾವು ಸರಿಯಾಗಿ ಪಾಲಿಸಿಲ್ಲ, ಈ ಬಗ್ಗೆ ನಾವು ವಿಷಾಧ ವ್ಯಕ್ತಪಡಿಸುತ್ತೇವೆ. ಇನ್ನು ಮುಂದೆ ನಾವು ಕೆಎಸ್​​ಪಿಬಿಯ ಎಲ್ಲ ನಿಯಮಗಳನ್ನು ನಾವು ಪಾಲಿಸುತ್ತೇವೆ, ಅದಕ್ಕೆ ಸಂಬಂಧಿಸಿರುವ ದಾಖಲೆಗಳನ್ನು ನಾವು ಕೆಎಸ್​​ಪಿಬಿಗೆ ಸಲ್ಲಿಕೆ ಮಾಡುತ್ತೇವೆ. ನಮಗೆ 15 ದಿನಗಳ ಕಾಲಾವಕಾಶ ನೀಡಿ ಅಷ್ಟರಲ್ಲಿ ಎಲ್ಲವನ್ನು ಸರಿಪಡಿಸುತ್ತೇವೆ, ಸದ್ಯಕ್ಕೆ ನಮಗೆ ತಾತ್ಕಾಲಿಕ ಅನುಮತಿಯನ್ನು ನೀಡಿ, ಆ ನಂತರ ಪರಿಶೀಲನೆ ನಡೆಸಿ ಅನುಮತಿಯನ್ನು ನವೀಕರಣಗೊಳಿಸಿ ಎಂದು ಪತ್ರದಲ್ಲಿ ವೇಲ್ಸ್ ಸ್ಟುಡಿಯೋ ಮನವಿ ಮಾಡಿದೆ.

ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಜಾಲಿವುಡ್ ಸ್ಟುಡಿಯೋಸ್​​ನವರು ಪಾಲಿಸಿಲ್ಲವೆಂದು ಸ್ಥಳೀಯ ಆಡಳಿತಾಧಿಕಾರಿಗಳು ನಿನ್ನೆ ಜಾಲಿವುಡ್​​ ಸ್ಟುಡಿಯೋಗೆ ಬೀಗ ಹಾಕಿದ್ದಾರೆ. ಜಾಲಿವುಡ್ ಒಳಗಿದ್ದ ಬಿಗ್​​ಬಾಸ್ ಕನ್ನಡ ಶೋ ಅನ್ನು ಸಹ ನಿಲ್ಲಿಸಲಾಗಿದ್ದು, ಸ್ಪರ್ಧಿಗಳನ್ನೆಲ್ಲ ಸ್ಥಳಾಂತರ ಮಾಡಿಸಲಾಗಿದೆ. ಈಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಜಿಲ್ಲಾಧಿಕಾರಿಗಳು ಯಾವ ನಿರ್ಣಯವನ್ನು ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಚಿವ ಈಶ್ವರ ಖಂಡ್ರೆ ಹೇಳಿದ್ದೇನು?

ಜಾಲಿವುಡ್ ಸ್ಟುಡಿಯೋಸ್​ಗೆ ಬೀಗ ಹಾಕಿಸಿರುವ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯ, ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಈ ಹಿಂದೆಯೂ ಸಹ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಸ್ಟುಡಿಯೋದವರಿಗೆ ನೊಟೀಸ್ ನೀಡಿದ್ದರು. ಆದರೆ ಅವರು ಎಚ್ಚೆತ್ತುಕೊಂಡಿಲ್ಲ. ಬಿಗ್​​ಬಾಸ್ ಆಗಲಿ ಯಾರೇ ಆಗಲಿ ನಿಯಮ ಪಾಲಿಸಬೇಕು ಎಂದು ಹೇಳಿದ್ದಾರೆ. ಸಚಿವರು ಮಾತನಾಡಿರುವ ವಿಡಿಯೋ ಇಲ್ಲಿದೆ..

‘ಬಿಗ್​​​ಬಾಸ್​​ ಅನ್ನು ನಿಲ್ಲಿಸುವುದೇ ಅವರ ಗುರಿ’

ಇತ್ತೀಚೆಗಷ್ಟೆ ಬಿಗ್​​ಬಾಸ್ ಮನೆಯಿಂದ ಹೊರಗೆ ಬಂದಿರುವ ಆರ್​​ಜೆ ಅಮಿತ್, ಬಿಗ್​​ಬಾಸ್ ಸ್ಥಗಿತಗೊಂಡಿರುವ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದು, ಬಿಗ್​​​ಬಾಸ್​ ಒಂದು ಅದ್ಭುತವಾದ ಕಾರ್ಯಕ್ರಮ, ಬಿಗ್​​ಬಾಸ್ ಮನೆ ನಿರ್ಮಾಣದಿಂದ ಹಿಡಿದು ತಂತ್ರಜ್ಞಾನ, ಸಪೋರ್ಟ್ ಸ್ಟಾಫ್ ಹೀಗೆ ಹಲವು ವಿಭಾಗಗಳಲ್ಲಿ ಹಲವಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಹತ್ತಾರು ಕೋಟಿ ಹೂಡಿಕೆ ಮಾಡಲಾಗಿದೆ. ಆದರೆ ಈಗ ದುರುದ್ದೇಶದಿಂದ ಕಾರ್ಯಕ್ರಮವನ್ನು ಬಂದ್ ಮಾಡಲಾಗಿದೆ ಎಂದಿದ್ದಾರೆ. ಅಮಿತ್ ಅವರ ಮಾತಿನ ವಿಡಿಯೋ ಇಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us