
ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಅವರು ‘ಲಕ್ಷ್ಮಿಪುತ್ರ’ (Lakshmiputra) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗೆ ಎಪಿ ಅರ್ಜುನ್ ಅವರು ಬಂಡವಾಳ ಹೂಡುತ್ತಿದ್ದಾರೆ. ಅನೇಕ ಹೊಸ ಹೀರೋಗಳ ಜೊತೆ ಕೆಲಸ ಮಾಡಿದ ಎ.ಪಿ. ಅರ್ಜುನ್ ಅವರು ಈಗ ಚಿಕ್ಕಣ್ಣ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರಕ್ಕೆ ಎಪಿ ಅರ್ಜುನ್ ಅವರೇ ಕಥೆ ಬರೆದಿದ್ದಾರೆ. ಅವರದ್ದೇ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಚಿಕ್ಕಣ್ಣ (Chikkanna) ಜೊತೆ ಅನೇಕ ಪ್ರತಿಭಾವಂತ ಕಲಾವಿದರು ನಟಿಸುತ್ತಿದ್ದಾರೆ.
‘ಎಪಿ ಅರ್ಜುನ್ ಫಿಲ್ಮ್’ ಬ್ಯಾನರ್ ಮೂಲಕ ಎ.ಪಿ. ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಸಿನಿಮಾದ ಶೂಟಿಂಗ್ ಬಗ್ಗೆ ಹೊಸ ಅಪ್ಡೇಟ್ ನೀಡಲಾಗಿದೆ. ‘ಲಕ್ಷ್ಮಿಪುತ್ರ’ ಸಿನಿಮಾಗೆ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ಕಾಶಿಯಲ್ಲಿ ಅದ್ದೂರಿಯಾಗಿ ನಡೆದಿದೆ.
ಮೂರು ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ನಾಯಕ ನಟ ಚಿಕ್ಕಣ್ಣ ಜೊತೆ ಹಿರಿಯ ನಟಿ ತಾರಾ ಕೂಡ ಭಾಗಿ ಆಗಿದ್ದಾರೆ. ಅವರ ಜೊತೆ ಅರವತ್ತಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದಾರೆ. ಕಾಶಿಯ ಮಣಿಕರ್ಣಿಕಾ ಘಾಟ್, ಬನರಾಸ್, ಗಂಗಾನದಿ ತೀರ, ಕಾಶಿ ಪ್ರಮುಖ ಬೀದಿಗಳಲ್ಲಿ ಈ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ. ಆ ಮೂಲಕ ನಿರೀಕ್ಷೆ ಮೂಡಿಸಲಾಗಿದೆ.
ಇನ್ನು, ಈ ಸಿನಿಮಾಗೆ ಎರಡು ದಿನದ ಮಾತಿನ ಭಾಗದ ಚಿತ್ರೀಕರಣ ಮಾತ್ರ ಬಾಕಿ ಇದೆ. ಶೀಘ್ರದಲ್ಲೇ ಹಾಡುಗಳ ಚಿತ್ರೀಕರಣವನ್ನು ಚಿತ್ರತಂಡ ಕೈಗೆತ್ತಿಕೊಳ್ಳಲಿದೆ. ಮೇ ಅಥವಾ ಜೂನ್ ತಿಂಗಳಲ್ಲಿ ‘ಲಕ್ಷ್ಮಿಪುತ್ರ’ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂದು ಗುರಿ ಇಟ್ಟುಕೊಳ್ಳಲಾಗಿದೆ. ವಿಜಯ್ ಸ್ವಾಮಿ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಚಿಕ್ಕಣ್ಣ ಅವರಿಗೆ ವಂದಿತಾ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ‘ಆ ಮಾತಿನಿಂದ ದರ್ಶನ್ ಮುಖಭಾವವೇ ಬದಲಾಗಿತ್ತು’; ಚಿಕ್ಕಣ್ಣ ಹೇಳಿಕೆಯಲ್ಲೇನಿದೆ?
‘ಲಕ್ಷ್ಮಿಪುತ್ರ’ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ಎ.ಪಿ. ಅರ್ಜುನ್ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಮಾಸ್ ಮಾದ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಗಿರೀಶ್ ಆರ್. ಗೌಡ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ರವಿಕಿರಣ್ ಗೌಡ ಸಹ-ನಿರ್ಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ. ಧರ್ಮಣ್ಣ, ಕುರಿ ಪ್ರತಾಪ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.