ಸದನದಲ್ಲೂ ಪುನೀತ್​ ಬಗ್ಗೆ ಮಾತು; ಕರ್ನಾಟಕ ರತ್ನ, ಪದ್ಮಶ್ರೀ ಪ್ರಶಸ್ತಿ ಬಗ್ಗೆ ಸಿಎಂ ಹೇಳಿದ್ದೇನು?

| Updated By: ಮದನ್​ ಕುಮಾರ್​

Updated on: Dec 13, 2021 | 1:28 PM

CM Basavaraj Bommai | Puneeth Rajkumar: ‘ಅಲ್ಪ ಸಮಯದಲ್ಲಿ ಒಬ್ಬ ನಟ ಇಷ್ಟು ಜನರ ಹೃದಯದಲ್ಲಿ ಸ್ಥಾನ ಗಳಿಸಬಲ್ಲ ಎಂಬುದು ಪುನೀತ್​ ರಾಜ್​ಕುಮಾರ್​ ಅವರ ನಿಧನದ ಬಳಿಕ ತಿಳಿಯಿತು. ಅವರು​ ಕೇವಲ ಚಿತ್ರರಂಗಕ್ಕೆ ಸಂಬಂಧಿಸಿದ ವ್ಯಕ್ತಿ ಆಗಿರಲಿಲ್ಲ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಸದನದಲ್ಲೂ ಪುನೀತ್​ ಬಗ್ಗೆ ಮಾತು; ಕರ್ನಾಟಕ ರತ್ನ, ಪದ್ಮಶ್ರೀ ಪ್ರಶಸ್ತಿ ಬಗ್ಗೆ ಸಿಎಂ ಹೇಳಿದ್ದೇನು?
ಬಸವರಾಜ ಬೊಮ್ಮಾಯಿ, ಪುನೀತ್​ ರಾಜ್​ಕುಮಾರ್​
Follow us on

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ (Karnataka Assembly Winter Session) ಆರಂಭ ಆಗಿದೆ. ವಿಧಾನಸಭೆಯಲ್ಲಿ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು (ಡಿ.13) ಮಾತನಾಡಿದರು. ಅಪ್ಪು ನಿಧನರಾದ ದಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವರು ವಿವರಿಸಿದರು. ‘ಅಂದು ಬೆಳಗ್ಗೆ ಜಿಮ್​ನಲ್ಲಿ ವರ್ಕೌಟ್​ ಮಾಡಿದ ಬಳಿಕ ಪುನೀತ್ ಅವರಿಗೆ ಈ ರೀತಿ ಆಗುತ್ತೆ ಎಂದು ಯಾರಿಗೂ ಅನಿಸಿರಲಿಲ್ಲ. ವಿಷಯ ತಿಳಿದು ನಾನು ಆಸ್ಪತ್ರೆಗೆ ಹೋಗುವುದಕ್ಕೂ ಮುನ್ನ ಅವರು ನಿಧನರಾಗಿದ್ದರು. ಕೂಡಲೇ ಅವರ ಕುಟುಂಬದವರ ಜತೆ ಮಾತನಾಡಿ ಸಹಕಾರ ಕೋರಿದೆವು. ಡಾ. ರಾಜ್​ಕುಮಾರ್​ ಅಂತ್ಯ ಸಂಸ್ಕಾರದ ವೇಳೆ ನಡೆದ ಅಹಿತಕರ ಘಟನೆಗಳು ಮತ್ತೆ ಸಂಭವಿಸಬಾರದು ಎಂಬುದು ನಮ್ಮ ಉದ್ದೇಶ ಆಗಿತ್ತು. ಅದಕ್ಕೆ ಪುನೀತ್​ ಕುಟುಂಬದವರ ಸಹಕಾರ ಸಿಕ್ಕಿತು’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪುನೀತ್​ಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಈಗಾಗಲೇ ಘೋಷಿಸಲಾಗಿದೆ. ಆ ಪ್ರಶಸ್ತಿ ನೀಡುವ ದಿನಾಂಕ ಯಾವುದು ಎಂದು ತಿಳಿಯಲು ಜನರು ಕಾದಿದ್ದಾರೆ. ಆ ದಿನಾಂಕವನ್ನು ಶೀಘ್ರವೇ ಘೋಷಿಸಲಾಗುವುದು. ಪದ್ಮಶ್ರೀ ಪ್ರಶಸ್ತಿಗೆ ಅಪ್ಪು ಹೆಸರನ್ನು ಶಿಫಾರಸು ಮಾಡಲಾಗುವುದು ಬಸವರಾಜ ಬೊಮ್ಮಾಯಿ ಅವರು ಹೇಳಿದರು.

‘ಪುನೀತ್​ ರಾಜ್​ಕುಮಾರ್​ ಅವರ ಅಂತಿಮ ದರ್ಶನ ಪಡೆಯಲು ಹರಿದುಬಂದ ಜನಸಾಗರವನ್ನು ನೋಡಿ ನನಗೆ ಆಶ್ಚರ್ಯ ಆಯಿತು. ಅಲ್ಪ ಸಮಯದಲ್ಲಿ ಒಬ್ಬ ನಟ ಇಷ್ಟು ಜನರ ಹೃದಯದಲ್ಲಿ ಸ್ಥಾನ ಗಳಿಸಬಲ್ಲ ಎಂಬುದು ಅವರ ಸಾವಿನ ಬಳಿಕ ತಿಳಿಯಿತು. ಪುನೀತ್​ ಕೇವಲ ಚಿತ್ರರಂಗಕ್ಕೆ ಸಂಬಂಧಿಸಿದವರಲ್ಲ. ಸಿನಿಮಾ ಹೊರತಾಗಿಯೂ ಅವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದರು. ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅನುಕೂಲ ಆಗುವ ರೀತಿಯಲ್ಲಿ ಆ್ಯಪ್​ ಬಿಡುಗಡೆ ಮಾಡಿದ್ದರು’ ಎಂದು ಅಪ್ಪು ಮಾಡಿದ ಕಾರ್ಯಗಳನ್ನು ಬೊಮ್ಮಾಯಿ ಶ್ಲಾಘಿಸಿದರು.

‘ಚಿಕ್ಕಂದಿನಿಂದಲೂ ನಾನು ಪುನೀತ್​ ಅವರನ್ನು ಬಲ್ಲೆ. ಅವರಿಗೆ ನಾನೊಂದು ಪ್ರಶ್ನೆ ಕೇಳಿದ್ದೆ. ನಿಮಗೆ ನಟನೆ ಇಷ್ಟು ಸರಳವಾಗಿ ಮೈಗೂಡಿಕೊಂಡಿದ್ದು ಹೇಗೆ ಎಂದು ಪ್ರಶ್ನಿಸಿದ್ದೆ. ತಮಗೆ ಅದು ಸಹಜವಾಗಿ ಬಂದಿದೆ ಅಂತ ಪುನೀತ್​ ಹೇಳಿದ್ದರು’ ಎಂದು ಬೊಮ್ಮಾಯಿ ನೆನಪಿಸಿಕೊಂಡರು.

ಪುನೀತ್​ ನಿಧನರಾದಾಗಿನಿಂದ ಅಂತಿಮ ಸಂಸ್ಕಾರ ನೆರವೇರುವವರೆಗೂ ಬಸವರಾಜ ಬೊಮ್ಮಾಯಿ ಅವರು ಡಾ. ರಾಜ್​ಕುಮಾರ್​ ಕುಟುಂಬದ ಜತೆಗೆ ನಿಂತುಕೊಂಡಿದ್ದರು. ಕಾನೂನು ಸುವ್ಯವಸ್ಥೆ ಕೆಡದ ರೀತಿಯಲ್ಲಿ, ಪುನೀತ್​ ರಾಜ್​ಕುಮಾರ್​ ಅವರನ್ನು ಗೌರವಯುತವಾಗಿ ಕಳಿಸಿಕೊಡಲು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರು. ಅವರ ಈ ಕಾರ್ಯಕ್ಕೆ ವಿಧಾನ ಸಭೆಯಲ್ಲಿ ಎಲ್ಲರಿಂದ ಶ್ಲಾಘನೆ ವ್ಯಕ್ತವಾಯಿತು.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್​ ಭಾವಚಿತ್ರ ಹಿಡಿದುಕೊಂಡು ಶಬರಿಮಲೆ ಯಾತ್ರೆ ಮಾಡಿದ ಅಭಿಮಾನಿಗಳು

ಯಾವ ಸ್ಥಿತಿಯಲ್ಲಿದೆ ನೋಡಿ ಡಾ. ರಾಜ್​ ಬೆಳೆದ ಮನೆ; ಇದರ ಬಗ್ಗೆ ಪುನೀತ್​ ಕಂಡಿದ್ದರು ಕನಸು