ಚಂದ್ರಯಾನದ ಬಗ್ಗೆ ಅಪಹಾಸ್ಯ; ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

‘ಚಂದ್ರಯಾನ 2’ ಯಶಸ್ವಿ ಆಗಿರಲಿಲ್ಲ. ಈಗ ‘ಚಂದ್ರಯಾನ-3’ ಯಶಸ್ವಿ ಆಗಿದೆ. ಹೀಗಾಗಿ ಇಸ್ರೋ ಮಾಜಿ ಮುಖ್ಯಸ್ಥ ಕೆ. ಶಿವನ್ ಅವರನ್ನು ಪ್ರಕಾಶ್ ರಾಜ್ ಅಪಹಾಸ್ಯ ಮಾಡಿದ್ದರು. ಕೆ. ಶಿವನ್ ಚಹಾವನ್ನು ಸುರಿಯುತ್ತಿರುವ ವ್ಯಂಗ್ಯಚಿತ್ರವನ್ನು ಪ್ರಕಾಶ್ ರೈ ಶೇರ್ ಮಾಡಿಕೊಂಡಿದ್ದರು.ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ರಾಜ್ ವಿರುದ್ಧ ದೂರು ನೀಡಲಾಗಿದೆ.

ಚಂದ್ರಯಾನದ ಬಗ್ಗೆ ಅಪಹಾಸ್ಯ; ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು
ಪ್ರಕಾಶ್ ರಾಜ್
Updated By: ರಾಜೇಶ್ ದುಗ್ಗುಮನೆ

Updated on: Aug 22, 2023 | 11:37 AM

ಪ್ರಕಾಶ್ ರಾಜ್ (Prakash Raj) ಅವರು ಇತ್ತೀಚೆಗೆ ವಿವಾದದ ಮೇಲೆ ವಿವಾದ ಮಾಡಿಕೊಳ್ಳುತ್ತಿದ್ದಾರೆ. ಅವರು ಆಡುವ ಮಾತು ಹಾಗೂ ನೀಡುವ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿ ಮಾಡಿದ್ದಿದೆ. ಈಗ ಅವರು ‘ಚಂದ್ರಯಾನ 3’ ಬಗ್ಗೆ ನೀಡಿದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ಚಂದ್ರನ ಮೇಲೆ ಯಶಸ್ವಿಯಾಗಿ ‘ಚಂದ್ರಯಾನ 3’ ಲ್ಯಾಂಡ್ ಆಗಲಿರುವ ಸಂದರ್ಭದಲ್ಲಿ ಅವರು ಕುಹಕವಾಡಿದ್ದರು. ಈ ಸಂಬಂಧ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಪ್ರಕಾಶ್ ರೈ (Prakash Rai) ವಿರುದ್ಧ ಕೇಸ್ ದಾಖಲಾಗಿದೆ.

‘ಚಂದ್ರಯಾನ 2’ ಯಶಸ್ವಿ ಆಗಿರಲಿಲ್ಲ. ಈಗ ‘ಚಂದ್ರಯಾನ-3’ ಯಶಸ್ವಿ ಆಗಿದೆ. ಹೀಗಾಗಿ ಇಸ್ರೋ ಮಾಜಿ ಮುಖ್ಯಸ್ಥ ಕೆ. ಶಿವನ್ ಅವರನ್ನು ಪ್ರಕಾಶ್ ರಾಜ್ ಅಪಹಾಸ್ಯ ಮಾಡಿದ್ದರು. ಕೆ. ಶಿವನ್ ಚಹಾವನ್ನು ಸುರಿಯುತ್ತಿರುವ ವ್ಯಂಗ್ಯಚಿತ್ರವನ್ನು ಪ್ರಕಾಶ್ ರೈ ಶೇರ್ ಮಾಡಿಕೊಂಡಿದ್ದರು. ಪ್ರಕಾಶ್ ರೈ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಅನೇಕರು ಹೇಳಿದ್ದಾರೆ.  ಈ ಸಂಬಂಧ ಬಾಗಲಕೋಟೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ರಾಜ್ ವಿರುದ್ಧ ದೂರು ನೀಡಲಾಗಿದೆ.

ಹಿಂದೂ ಸಂಘಟನೆ ಮುಖಂಡ ನಂದು ಗಾಯಕವಾಡ ಹಾಗೂ ಇತರರು ದೂರು ನೀಡಿದ್ದಾರೆ. ‘ಪ್ರಕಾಶ್ ರೈ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ಕೂಡಲೇ ಅವರನ್ನ ಬಂಧಿಸಬೇಕು. ಇಸ್ರೋ ಕಳುಹಿಸಿರುವ ಚಂದ್ರಯಾನ‌ ನೌಕೆಯಿಂದ ಭಾರತದ ಶಕ್ತಿ ಇಮ್ಮಡಿ ಆಗಿದೆ. ಈ ಬಗ್ಗೆ ನಮ್ಮ ವಿಜ್ಞಾನಿಗಳನ್ನು ಎಲ್ಲರೂ ಹೊಗಳುತ್ತಿದ್ದಾರೆ. ಆದರೆ, ಪ್ರಕಾಶ್ ರಾಜ್ ವಿಜ್ಞಾನಿಗಳ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡುವ ಮೂಲಕ ವಿಕೃತಿ ಮೆರೆದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೇವೆ’ ಎಂದು ನಂದು ಹೇಳಿದ್ದಾರೆ.

ಇದನ್ನೂ ಓದಿ: ಬಹುಭಾಷಾ ನಟ ಪ್ರಕಾಶ್​ ರಾಜ್​ ಮಾಡಿಕೊಂಡ ವಿವಾದಗಳು ಒಂದಲ್ಲ, ಎರಡಲ್ಲ

ಪ್ರಕಾಶ್ ರೈ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಲೇ ಇರುತ್ತಾರೆ. ಕಳೆದ ವರ್ಷ ರಿಲೀಸ್ ಆದ ‘ದಿ ಕಾಶ್ಮೀರ್ ಫೈಲ್ಸ್​’ ಚಿತ್ರವನ್ನು ಅವರು ತೆಗಳಿದ್ದರು. ಗೋವಿಗೆ ಅವಮಾನ ಮಡಿದ ಪ್ರಕರಣದಲ್ಲೂ ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಈ ರೀತಿಯ ಅನೇಕ ಪ್ರಕರಣಗಳು ಅವರ ವಿರುದ್ಧ ದಾಖಲಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ