ನವೆಂಬರ್​ 8ಕ್ಕೆ ನವಗ್ರಹ ಸಿನಿಮಾ ಮರು ಬಿಡುಗಡೆ; ದರ್ಶನ್ ಅಭಿಮಾನಿಗಳಿಗೆ ಹಬ್ಬ

|

Updated on: Oct 24, 2024 | 7:59 PM

ನಟ ದರ್ಶನ್ ಅವರನ್ನು ಅಭಿಮಾನಿಗಳು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರ ಹಳೇ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಕೆಲವು ವಾರಗಳ ಹಿಂದೆ ಕರಿಯ ಸಿನಿಮಾವನ್ನು ರೀ-ರಿಲೀಸ್ ಮಾಡಲಾಗಿತ್ತು. ಈಗ ‘ನವಗ್ರಹ’ ಸಿನಿಮಾವನ್ನು ಮರು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ನವೆಂಬರ್​ 8ರಂದು ‘ನವಗ್ರಹ’ ಸಿನಿಮಾ ಮತ್ತೆ ತೆರೆಗೆ ಬರುತ್ತಿದೆ.

ನವೆಂಬರ್​ 8ಕ್ಕೆ ನವಗ್ರಹ ಸಿನಿಮಾ ಮರು ಬಿಡುಗಡೆ; ದರ್ಶನ್ ಅಭಿಮಾನಿಗಳಿಗೆ ಹಬ್ಬ
‘ನವಗ್ರಹ’ ಸಿನಿಮಾ ಪೋಸ್ಟರ್​
Follow us on

ಈ ವರ್ಷ ‘ಡೆವಿಲ್: ದ ಹೀರೋ’ ಸಿನಿಮಾವನ್ನು ನೋಡಬೇಕು ಎಂಬುದು ದರ್ಶನ್ ಅಭಿಮಾನಿಗಳ ಆಸೆ ಆಗಿತ್ತು. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ ಬಳಿಕ ಆ ಸಿನಿಮಾದ ಕೆಲಸಕ್ಕೆ ಬ್ರೇಕ್​ ಬಿತ್ತು. ಹಾಗಾಗಿ ದೊಡ್ಡ ಪರದೆ ಮೇಲೆ ದರ್ಶನ್ ಅವರ ಹೊಸ ಸಿನಿಮಾ ತೆರೆಕಾಣಲಿಲ್ಲ. ಈ ಸಂದರ್ಭದಲ್ಲಿ ಅಭಿಮಾನಿಗಳು ದರ್ಶನ್​ ಅವರನ್ನು ಬಹಳ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರ ಈ ಹಿಂದಿನ ಹಿಟ್ ಸಿನಿಮಾಗಳನ್ನು ಮತ್ತೆ ತೆರೆಗೆ ತರಲಾಗುತ್ತಿದೆ. ಕರಿಯಾ, ಪೊರ್ಕಿ ಬಳಿಕ ‘ನವಗ್ರಹ’ ಸಿನಿಮಾ ಕೂಡ ಮರು ಬಿಡುಗಡೆ ಆಗುತ್ತಿದೆ.

‘ನವಗ್ರಹ’ ಸಿನಿಮಾಗೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರು ನಿರ್ದೇಶನ ಮಾಡಿದ್ದಾರೆ. ಅದು ಅವರ ಎರಡನೇ ಸಿನಿಮಾ. ದರ್ಶನ್ ಜೊತೆ ತರುಣ್ ಸುಧೀರ್​, ಧರ್ಮ ಕೀರ್ತಿರಾಜ್, ವಿನೋದ್ ಪ್ರಭಾಕರ್​, ಸೃಜನ್ ಲೋಕೇಶ್, ಗಿರಿ ದಿನೇಶ್, ನಾಗೇಂದ್ರ ಅರಸ್​, ವರ್ಷಾ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ. 2008ರ ನವೆಂಬರ್​ 7ರಂದು ತೆರೆಕಂಡಿದ್ದ ಈ ಸಿನಿಮಾ ಸೂಪರ್​ ಹಿಟ್ ಆಗಿತ್ತು. ಈ ವರ್ಷ ನವೆಂಬರ್​ 8ಕ್ಕೆ ಮರು ಬಿಡುಗಡೆ ಮಾಡಲಾಗುತ್ತಿದೆ.

ಈ ಸಿನಿಮಾ ರೀ-ರಿಲೀಸ್​ ಆಗುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ದಿನಕರ್ ತೂಗುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ‘ನನ್ನ ನಿರ್ದೇಶನದ 2ನೇ ಸಿನಿಮಾ ನವಗ್ರಹ. ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕರ ಮಕ್ಕಳನ್ನು ಒಟ್ಟಿಗೆ ಬೆಳ್ಳಿ ತೆರೆಯ ಮೇಲೆ ತಂದ ಒಂದು ಪ್ರಾಮಾಣಿಕ ಪ್ರಯತ್ನ. 16 ವರ್ಷಗಳ ಹಿಂದೆ ಬಿಡುಗಡೆಯಾಗಿ ನಿಮ್ಮೆಲ್ಲರ ಪ್ರೀತಿ-ಪ್ರೋತ್ಸಾಹದಿಂದ ಇಂದಿಗೂ ಜನಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರ ಒತ್ತಾಯದ ಫಲವಾಗಿ ಇದೇ ನವೆಂಬರ್ 8ರಂದು ಮರುಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ನೋಡಿ ಆನಂದಿಸಿ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಹಿಸಲಾಗದ ನೋವಿನಿಂದ ಆಸ್ಪತ್ರೆಗೆ ಬಂದ ದರ್ಶನ್; ಮುಗಿಬಿದ್ದ ಅಭಿಮಾನಿಗಳು

ಒಂಬತ್ತು ಕಳ್ಳರು ಮೈಸೂರಿನ ಚಿನ್ನದ ಅಂಬಾರಿಯನ್ನು ಕದಿಯಲು ಪ್ರಯತ್ನಿಸುವ ಥ್ರಿಲ್ಲರ್ ಕಥೆಯನ್ನು ‘ನವಗ್ರಹ’ ಸಿನಿಮಾ ಒಳಗೊಂಡಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸುತ್ತಿರುವ ಧರ್ಮ ಕೀರ್ತಿರಾಜ್ ಅವರು ಈ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರ್ಮಿಳಾ ಮಾಂಡ್ರೆ ಜೊತೆ ಧರ್ಮ ಕಾಣಿಸಿಕೊಂಡ ‘ಕಣ್ ಕಣ್ಣ ಸಲಿಗೆ..’ ಸಿನಿಮಾ ಇಂದಿಗೂ ಜನರ ಇಷ್ಟದ ಲಿಸ್ಟ್​ನಲ್ಲಿದೆ. ವಿ. ಹರಿಕೃಷ್ಣ ಅವರ ಸಂಗೀತ ಈ ಸಿನಿಮಾಗಿದೆ. ಮರು ಬಿಡುಗಡೆ ಆದಾಗ ದರ್ಶನ್​ ಫ್ಯಾನ್ಸ್​ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಹಾಗೂ ಈ ಬಾರಿ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.